"ನಿಜವಾದ ಪುರುಷ ತನ್ನ ಮಕ್ಕಳನ್ನು ಹೆರುವ ಮಹಿಳೆಯನ್ನು ಗೌರವಿಸುತ್ತಾನೆ"; ಖುಷ್ಬು ತಿವಿದಿದ್ದು ಯಾರಿಗೆ?
ಚಿತ್ರರಂಗದಲ್ಲೀಗ ಡಿವೋರ್ಸ್ ಸುದ್ದಿ ಹೆಚ್ಚಾಗುತ್ತಿದೆ. ಖ್ಯಾತ ಸೆಲೆಬ್ರೆಟಿಗಳೇ ಈ ಲಿಸ್ಟ್ನಲ್ಲಿ ಮುಂದಿದ್ದಾರೆ. ನಾವಿಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗಲು ಬಯಸಿದ್ದೇವೆ, ಇದು ನಮ್ಮ ಖಾಸಗಿ ವಿಷಯ. ಈ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸುಮ್ಮನಾಗುತ್ತಿದ್ದಾರೆ.
ಇದೀಗ ವಿಚ್ಛೇದನ ನೀಡಲು ದೊಡ್ಡ ಕಾರಣಗಳೇ ಬೇಕಿಲ್ಲ ಎನ್ನುವಂತಾಗಿದೆ. ಚಿತ್ರ ವಿಚಿತ್ರ ಕಾರಣಗಳನ್ನು ನೀಡಿ ಡಿವೋರ್ಸ್ ಕೇಳಿ ಪತಿ- ಪತ್ನಿ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಇತ್ತೀಚೆಗೆ ಡಿವೋರ್ಸ್ ಪ್ರಕರಣಗಳು ಬೇಗ ಇತ್ಯರ್ಥವಾಗುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಕೂಡ ಇತ್ತೀಚೆಗೆ ಡಿವೋರ್ಸ್ ಪ್ರಕರಣಗಳು ಭಾರೀ ಸದ್ದು ಮಾಡಿದ್ದವು. ಇದೀಗ ಬಹುಭಾಷಾ ನಟಿ ಖುಷ್ಬೂ ಪತಿ- ಪತ್ನಿ ಅನುಬಂಧದ ಬಗ್ಗೆ ಸುದೀರ್ಘ ಟ್ವೀಟ್ ಮಾಡಿದ್ದಾರೆ.

ಖುಷ್ಬೂ ಟ್ವೀಟ್ ಸಾರಾಂಶ
"ತನ್ನ ಕುಟುಂಬವನ್ನು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರಿಸಬೇಕು ಎಂದುಕೊಳ್ಳುವ ವ್ಯಕ್ತಿ, ಪ್ರೀತಿಸಿದವರ ಅವಶ್ಯಕತೆ, ಆಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾನೆ. ಮದುವೆಯ ಜೀವನದಲ್ಲಿ ಏರಿಳಿತಗಳು ಸಹಜ. ಚಿಕ್ಕ ಚಿಕ್ಕ ತಪ್ಪುಗಳು ನಡೆಯುತ್ತವೆ. ಅಷ್ಟಕ್ಕೆ ಸಂಬಂಧ ಕಡಿದುಕೊಳ್ಳುವ ಅವಶ್ಯಕತೆ ಇಲ್ಲ. ಪ್ರೀತಿ ಆಗಾಗ್ಗೆ ಕಮ್ಮಿ ಆಗಬಹುದು. ಆದರೆ ಗೌರವ, ಮರ್ಯಾದೆ ಕಮ್ಮಿ ಆಗಬಾರದು. ಪುರುಷ ತನ್ನ ಪತ್ನಿಗೆ ಸರಿಯಾಗಿ ಗೌರವ ಕೊಡಬೇಕು" ಎಂದು ಖುಷ್ಬೂ ಟ್ವೀಟ್ ಆರಂಭಿಸಿದ್ದಾರೆ.
"ನಿಜವಾದ ಪುರುಷನು ತನ್ನ ಮಕ್ಕಳನ್ನು ಹೆರುವ ಮಹಿಳೆಯನ್ನು ಗೌರವಿಸುತ್ತಾನೆ. ಯಾರ ಮನಸ್ಸಿಗೂ ನೋವು ಮಾಡಲ್ಲ. ಇಂತಹ ವರ್ತನೆಯಿಂದ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುತ್ತದೆ. ಜೀವನ ಬಹಳ ಸುಂದರವಾದುದು. ಕೆಲವೊಮ್ಮೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದರೆ ಅಷ್ಟರಲ್ಲಿ ಎಲ್ಲವೂ ಮುಗಿದು ಹೋಗಿರುತ್ತದೆ"
"ನಿಮ್ಮ ಮಕ್ಕಳ ತಾಯಿಯನ್ನು ಗೌರವಿಸುವುದು ಕೇವಲ ಅಗತ್ಯವಲ್ಲ, ಇದು ಅಡಿಪಾಯವಾಗಿದೆ. ಈ ಗೌರವವಿಲ್ಲದೇ, ಒಬ್ಬ ವ್ಯಕ್ತಿಯು ಇತರರ ಗೌರವವನ್ನು ಪಡೆಯಲು ಅಥವಾ ಜೀವನದಲ್ಲಿ ನಿಜವಾಗಿಯೂ ಅಭಿವೃದ್ಧಿ ಹೊಂದಲು ಆಶಿಸುವುದಿಲ್ಲ. ತಾಯಿಯನ್ನು ಅಗೌರವಿಸುವುದು, ವಿಶೇಷವಾಗಿ ನಿಮ್ಮನ್ನು ಪ್ರೀತಿಸಿದ ಮತ್ತು ಬೆಂಬಲಿಸಿದ ಒಬ್ಬರಿಗೆ ನೋವು ಕೊಡುವುದು ನಿಮ್ಮ ಕ್ರೂರತ್ವವನ್ನು ತೋರಿಸುತ್ತದೆ.
ಒಬ್ಬ ವ್ಯಕ್ತಿ ತಾನು ಬೆಳೆಯಲು, ಅವನು ಮೊದಲು ತನ್ನ ಕುಟುಂಬವನ್ನು ಮೇಲಕ್ಕೆತ್ತಬೇಕು ಎಂದು ತಿಳಿದಿರುತ್ತಾನೆ. ಪ್ರೀತಿಯು ಅಲುಗಾಡಬಹುದು, ಆದರೆ ಗೌರವವು ಹೃದಯಗಳು ಮತ್ತು ಆತ್ಮಗಳನ್ನು ಒಟ್ಟಿಗೆ ಬಂಧಿಸುತ್ತದೆ. ಪ್ರತಿ ದಿನವೂ ಪರಿಪೂರ್ಣವಾಗಿಲ್ಲದಿರಬಹುದು, ಆದರೆ ಗೌರವದಿಂದ, ಕರಾಳ ದಿನಗಳು ಸಹ ಭರವಸೆ ಮತ್ತು ತಿಳುವಳಿಕೆಯ ಬೆಳ್ಳಿ ರೇಖೆಯನ್ನು ಹೊಂದಿರುತ್ತವೆ"
ನಿಮ್ಮೊಂದಿಗೆ ನಿಂತಿರುವವರನ್ನು ಗೌರವಿಸುವುದರಲ್ಲಿ ಹಾಗೂ ನಿಮ್ಮ ಜಗತ್ತನ್ನು ರೂಪಿಸುವ ಕುಟುಂಬವನ್ನು ಪಾಲಿಸುವುದರಲ್ಲಿ ನಿಜವಾದ ಶಕ್ತಿ ಅಡಗಿದೆ. ಇದು ಕೇವಲ ನಿರಂತರ ಪ್ರೀತಿಯ ಬಗ್ಗೆ ಅಲ್ಲ. ಗೌರವ ಎನ್ನುವುದು ಮನೆಯಲ್ಲಿ ಇರಬೇಕು. ಈ ವಿಷಯ ಮರೆತ ವ್ಯಕ್ತಿ ಪ್ರೀತಿಗಿಂತ ದೊಡ್ಡ ಬಂಧವನ್ನು, ನಿಜವಾದ ಆನಂದವನ್ನು ಕಳೆದುಕೊಂಡಂತೆ ಎಂದು ಖುಷ್ಬೂ ಬರೆದುಕೊಂಡಿದ್ದಾರೆ.
ನಟಿ ಖುಷ್ಬೂ ಯಾರ ಹೆಸರನ್ನು ಪ್ರಸ್ತಾಪಿಸದೇ ಗಂಡ-ಹೆಂಡತಿ ಹೇಗಿರಬೇಕು? ಎಂದು ಕಿವಿಮಾತು ಹೇಳಿದ್ದಾರೆ. ಇತ್ತೀಚೆಗೆ ಡಿವೋರ್ಸ್ ಘೋಷಿಸಿದ ತಮಿಳು ನಟ ಜಯಂ ರವಿ ಬಗ್ಗೆ ಆಕೆ ಬರೆದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಖುಷ್ಬುಗೆ ಜಯಂ ರವಿ ಪತ್ನಿ ಆರತಿ ಸ್ನೇಹಿತೆ. ಹಾಗಾಗಿ ಆತನ ಬಗ್ಗೆಯೇ ಆಕೆ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ಧನುಷ್- ಪತ್ನಿ ಐಶ್ವರ್ಯ, ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್- ಪತ್ನಿ ಸೈಂಧವಿ ಸಹ ಇತ್ತೀಚೆಗೆ ವಿಚ್ಛೇದನ ಘೋಷಿಸಿದ್ದರು.


Click it and Unblock the Notifications











