'ತಲೈವಿ' ಮಾಡಿದ್ಮೇಲೆ ನನ್ನ ಖ್ಯಾತಿ ಹೆಚ್ಚಾಗಿದೆ ಎಂದ ಕಂಗನಾ ರಣಾವತ್
'ಸಾಮಾನ್ಯವಾಗಿ ಸ್ಟಾರ್ ನಟರ ಜೊತೆ ನಟಿಸಿದರೆ ನಟಿಯರು ಹೆಚ್ಚು ಜನಪ್ರಿಯರಾಗ್ತಾರೆ, ಆದರೆ ನನ್ನ ವಿಚಾರದಲ್ಲಿ ಅದು ಆಗಿಲ್ಲ, ತಲೈವಿ ಮಾಡಿದ್ಮೇಲೆ ಈ ಹಿಂದಿಗಿಂತಲೂ ನನ್ನ ಖ್ಯಾತಿ ಹೆಚ್ಚಾಗಿದೆ' ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.
ತಲೈವಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ತಮಿಳು, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಮೂಡಿ ಬಂದಿದ್ದ ತಲೈವಿ ಸೆಪ್ಟೆಂಬರ್ 25ರಂದು ನೆಟ್ಫ್ಲಿಕ್ಸ್ನಲ್ಲಿ ಹಿಂದಿ ವರ್ಷನ್ ಪ್ರೀಮಿಯರ್ ಕಂಡಿತ್ತು. ಈ ಮೂಲಕ ವರ್ಲ್ಡ್ವೈಡ್ ತಲೈವಿ ತಲುಪಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್ ಚಿತ್ರ ತಲೈವಿ. ಸೆಪ್ಟೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಆಗಿನ್ನು ಮಹಾರಾಷ್ಟ್ರದಲ್ಲಿ ಥಿಯೇಟರ್ ತೆರೆದಿರಲಿಲ್ಲ. ತಮಿಳುನಾಡು, ಕರ್ನಾಟಕದಲ್ಲಿ ಶೇಕಡಾ 50% ಮಾತ್ರ ಆಸನ ಭರ್ತಿಗೆ ಅನುಮತಿ ಇತ್ತು. ಆದರೂ, ಧೈರ್ಯ ಮಾಡಿ ಚಿತ್ರಮಂದಿರದಲ್ಲೇ ಸಿನಿಮಾ ಬಿಡುಗಡೆಗೊಳಿಸಿದರು. ಎರಡು ವಾರದ ನಂತರ ನೆಟ್ಫ್ಲಿಕ್ಸ್ಗೆ ಬಂದಿದೆ.
ಒಟಿಟಿಯಲ್ಲಿ ತಲೈವಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ಕಂಗನಾ ರಣಾವತ್, 'ತಲೈವಿ ಮಾಡಿದ್ಮೇಲೆ ನನ್ನ ಖ್ಯಾತಿ ಈ ಹಿಂದಿಗಿಂತಲೂ ಹೆಚ್ಚಾಗಿದೆ' ಎಂದಿದ್ದಾರೆ. ಮುಂದೆ ಓದಿ...

ಈ ಹಿಂದಿಗಿಂತಲೂ ಖ್ಯಾತಿ ಹೆಚ್ಚಿದೆ
'ನಾನು ನನ್ನ ಕೆಲಸವನ್ನು ಮಾಡ್ತೇನೆ ಮತ್ತು ನನ್ನ ಸ್ಥಾನದಲ್ಲಿ ಇರುತ್ತೇನೆ. ಬಹಳಷ್ಟು ನಟಿಯರು ಜನಪ್ರಿಯ ನಟರ ಚಿತ್ರಗಳಲ್ಲಿ ನಟಿಸಿದ ಮೇಲೆ ಜನಪ್ರಿಯರಾಗ್ತಾರೆ. ನಟಿಯರು ಯಾವಾಗಲೇ ಹಾಗೆ. ಆದರೆ ನನಗೆ ನನ್ನದೇ ಸ್ವಂತ ಬೆಳಕಿದೆ. ನಾನು ಬೇರೆಯವರ ನೆರಳಲ್ಲಿ ಇರಲು ಇಷ್ಟಪಡುವುದಿಲ್ಲ. ಖಂಡಿತವಾಗಿಯೂ ಈ ಹಿಂದಿಗಿಂತಲೂ ನನ್ನ ಖ್ಯಾತಿ ಹೆಚ್ಚಾಗಿದೆ. ಇದು ನನ್ನ ವೃತ್ತಿ ಜೀವನದಲ್ಲಿ ಅತ್ತುತ್ತಮ ಸಮಯ ಆಗಿದೆ ಎನ್ನುವುದು ಸತ್ಯ. ನಾನು ಅದನ್ನು ನಿರಾಕರಿಸುವುದಿಲ್ಲ' ಎಂದು ಐಎಎನ್ಎಸ್ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಒಟಿಟಿಯಲ್ಲಿ ತಲೈವಿಗೆ ಒಳ್ಳೆಯ ರೆಸ್ಪಾನ್ಸ್
ಅಂತಾರಾಷ್ಟ್ರೀಯ ವಿಷಯಗಳ ನಡುವೆಯೂ ನಮ್ಮ ಚಿತ್ರ ಒಟಿಟಿಯಲ್ಲಿ ಉತ್ತಮ ಸ್ಥಾನ ಪಡೆದಿದೆ ಎಂದು ಕಂಗನಾ ಸಂತಸಗೊಂಡಿದ್ದಾರೆ. 'ತಲೈವಿ ಅಂತಾರಾಷ್ಟ್ರೀಯ ಚಿತ್ರಗಳ ವಿರುದ್ಧ ಹೋರಾಡಿದೆ. ನಾವು ಯಾವಾಗಲೂ ಉತ್ತಮ ಎನಿಸುವ ಕಥೆಗಳನ್ನು ತಯಾರಿಸಿದ್ದೇವೆ ಆದರೆ ಸ್ಕ್ವಿಡ್ ಗೇಮ್ ಮತ್ತು ವೆಬ್ ಸಿರೀಸ್ಗಳನ್ನು ಹಿಂದಿಕ್ಕಲಿದೆ ಎನ್ನುವ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿರಲಿಲ್ಲ. ಇದೆಲ್ಲದರ ನಡುವೆಯೂ ಉತ್ತಮ ಚಲನಚಿತ್ರಗಳನ್ನು ವೀಕ್ಷಕರು ನೋಡ್ತಾರೆ ಮತ್ತು ಇಷ್ಟಪಡ್ತಾರೆ ಎನ್ನುವುದು ನಮಗೆ ತಿಳಿಯಿತು' ಎಂದು ಹೇಳಿದರು. ತಲೈವಿ ಚಿತ್ರ ಯಶಸ್ಸು ಸಾಧಿಸಲು "ಉತ್ತಮ ಬರವಣಿಗೆ, ನಿರ್ದೇಶನ ಮತ್ತು ಒಳ್ಳೆಯ ನಟನೆ ಕಾರಣ" ಎಂದರು.

ತಲೈವಿ 2 ಸಾಧ್ಯತೆ?
ಈ ನಡುವೆ ತಲೈವಿ ಸೀಕ್ವೆಲ್ ಮಾಡಲು ನಿರ್ಮಾಪಕ ಆಸಕ್ತಿ ತೋರಿದ್ದಾರೆ ಎನ್ನುವ ವಿಚಾರವೂ ಚರ್ಚೆಯಲ್ಲಿದೆ. ಜಯಲಲಿತಾ ಅವರ ಜರ್ನಿ ಬಹಳ ವಿಸ್ತಾರವಾಗಿದೆ. ಎರಡೂವರೆ ಗಂಟೆಯಲ್ಲಿ ಎಲ್ಲವನ್ನು ತೋರಿಸಲು ಆಗಲ್ಲ. ಸಿನಿಮಾ ಜರ್ನಿಯಿಂದ ಸಿಎಂ ಕುರ್ಚಿವರೆಗೂ ಅವರು ನಡೆದು ಬಂದ ಕತೆಯನ್ನು ತಲೈವಿ ಬಿಂಬಿಸಿತ್ತು. ಸಿಎಂ ಆದ ಬಳಿಕ ಅವರ ಜರ್ನಿ ಇನ್ನು ದೊಡ್ಡದಿದೆ. ತಮಿಳುನಾಡು ರಾಜಕೀಯದಲ್ಲಿ ಬಹಳ ಪ್ರಮುಖ ಘಟನೆಗಳಿಗೆ ಜಯಲಲಿತಾ ಸಾಕ್ಷಿಯಾಗಿದ್ದರು. ಇದೆಲ್ಲವನ್ನು ತಲೈವಿ ಪರಿಪೂರ್ಣವಾಗಿ ಹೊಂದಿಲ್ಲ. ಹಾಗಾಗಿ, ಪಾರ್ಟ್ 2 ಮಾಡಲು ಚಿಂತಿಸಲಾಗಿದೆ ಎಂಬ ವಿಷಯ ಸುದ್ದಿಯಲ್ಲಿದೆ.

ಎಎಲ್ ವಿಜಯ್ ನಿರ್ದೇಶನ
ಎ ಎಲ್ ವಿಜಯ್ ನಿರ್ದೇಶಿಸಿರುವ 'ತಲೈವಿ' ಚಿತ್ರವನ್ನು ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್ ಸಿಂಗ್ ಜಂಟಿಯಾಗಿದೆ ನಿರ್ಮಿಸಿದ್ದಾರೆ. ಹಿತೇಶ್ ಥಕ್ಕರ್ ಮತ್ತು ತಿರುಮಲ್ ರೆಡ್ಡಿ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸೆಪ್ಟೆಂಬರ್ 10 ರಂದು ಜೀ ಸ್ಟುಡಿಯೋಸ್ ಮೂಲಕ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತಲೈವಿ ಬಿಡುಗಡೆಯಾಗಿದೆ.


Click it and Unblock the Notifications











