ಸಿನಿಮಾ ಬಿಡುಗಡೆಗೂ ಮುನ್ನ ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ನಟಿ ಕಂಗನಾ ರಣಾವತ್
ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಿದ್ದರು. ವಿವಾದಾತ್ಮಕ ಹೇಳಿಕೆ, ಪೋಸ್ಟ್ ಗಳ ಮೂಲಕ ಸದಾ ಗಮನ ಸೆಳೆಯುತ್ತಿದ್ದ ಕಂಗನಾ ಇದೀಗ ಸಿನಿಮಾ ಬಿಡುಗಡೆಯ ಉತ್ಸಾಹದಲ್ಲಿದ್ದಾರೆ. ಬಹುನಿರೀಕ್ಷೆಯ 'ತಲೈವಿ' ಸಿನಿಮಾ ಬಿಡುಗಡೆಗೆ ಕಂಗನಾ ಕಾಯುತ್ತಿದ್ದಾರೆ. ಅಂದಹಾಗೆ ತಲೈವಿ ಸಿನಿಮಾ ಇದೇ ತಿಂಗಳು ಸೆಪ್ಟಂಬರ್ 10ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ.
ತಲೈವಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ. 'ಅಮ್ಮ'ನ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಮತ್ತು ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅಂದಹಾಗೆ ಇತ್ತೀಚಿಗಷ್ಟೆ ಸಿಬಿಎಫ್ ಸಿ (Central Board of Film Certification) ಕಡೆಯಿಂದ ಸೆನ್ಸಾರ್ ಮುಗಿಸಿರುವ ತಲೈವಿ ಚಿತ್ರಕ್ಕೆ 'ಯು' ಪ್ರಮಾಣ ಪತ್ರ ಸಿಕ್ಕಿದೆ. ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತಲೈವಿ ಬಿಡುಗಡೆಯಾಗುತ್ತಿದ್ದು, ನಿರೀಕ್ಷೆಗಳು ಗರಿಗೆದರಿದೆ.
ಈ ನಡುವೆ ಕಂಗನಾ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ಇಂದು (ಸೆಪ್ಟಂಬರ್ 04) ಬೆಳ್ಳಂಬೆಳಗ್ಗೆ ಚೆನ್ನೈಗೆ ಆಗಮಿಸಿದ ಕಂಗನಾ ಚೆನ್ನೈನ ಮರೀನಾ ಬೀಚ್ ಬಳಿ ಇರುವ ಜಲಯಲಿತಾ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಸಿನಿಮಾ ಬಿಡುಗಡೆಗೂ ಮೊದಲು ಜಲಯಲಿತಾ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸುತ್ತಿರುವುದು ಗಮನ ಸೆಳೆಯುತ್ತಿದೆ.

ಕಂಗನಾ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಸರಿ ಬಣ್ಣದ ಜೆರೆ ಸೀರೆ ಧರಿಸಿ ಕಂಗೊಳಿಸುತ್ತಿದ್ದ ಕಂಗನಾ ಮಾಜಿ ಮುಖ್ಯಮಂತ್ರಿ ಜಲಯಲಿತಾ ಅವರ ಸಮಾಧಿಗೆ ಹೂಗುಚ್ಚ ಇಟ್ಟು ಗೌರವ ಸಲ್ಲಿಸಿದ್ದಾರೆ. ಅಂದಹಾಗೆ ತಲೈವಿ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಏಪ್ರಿಲ್ ತಿಂಗಳಲ್ಲೇ ಸಿನಿಮಾ ಬಿಡುಗಡೆ ಸಿದ್ಧವಾಗಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.
ಇದೀಗ ಸೆಪ್ಟಂಬರ್ 10ರಂದು ಚಿತ್ರರಂಗಕ್ಕೆ ತಲೈವಿ ಎಂಟ್ರಿ ಕೊಡುತ್ತಿದೆ. ಅಂದಹಾಗೆ ಕೊರೊನಾ ಇನ್ನು ಕಮ್ಮಿ ಆಗಿಲ್ಲ. ಚಿತ್ರಮಂದಿರಗಳಲ್ಲಿ ಇನ್ನು ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕಿಲ್ಲ. ಶೇ.50ರಷ್ಟು ಮಾತ್ರ ಅವಕಾಶ ಇರುವಾಗಲೇ ಕಂಗನಾ ತಲೈವಿ ಮೂಲಕ ಎಂಟ್ರಿ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಚಿತ್ರಕ್ಕೆ ಕೆ.ವಿ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿದ್ದಾರೆ. ಕಂಗನಾ ಲುಕ್ ಈಗಾಗಲೇ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಕಂಗನಾ ವಿವಿದ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಂಗನಾ ಜೊತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಚಿತ್ರದಲ್ಲಿ ಎಂಜಿಆರ್ ಪಾತ್ರದಲ್ಲಿ ಖ್ಯಾತ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಥ್ರಿಲ್ ಹೆಚ್ಚಿಸಿದೆ.
ಇನ್ನು ನಟ ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಟಿ ಕಂಗನಾ ಇತ್ತೀಚಿಗಕಷ್ಟೆ ಧಾಕಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಯೂರೋಪ್ ನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿದ ಸಿನಿಮಾತಂಡ ಪಾರ್ಟಿಯಲ್ಲಿ ಭಾಗಿಯಾಗಿತ್ತು. ಧಾಕಡ್ ಕೊನೆಯ ದಿನದ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಂಗನಾ ಸದ್ಯ ತೇಜಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಕಂಗನಾ ವಾಯುಸೇನೆಯ ಪೈಲೆಟ್ ಆಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











