Kanguva Box Office Day 2 ; ಬಾಕ್ಸಾಫೀಸ್ನಲ್ಲಿ 'ಕಂಗುವ' ಖಲ್ಲಾಸ್, ಹಾಕಿದ ಬಂಡವಾಳವಾದರೂ ಮರಳಿ ಬರುತ್ತಾ ?
ಅತಿಯಾದರೆ ಅಮೃತವೂ ವಿಷ ಅನ್ನುವುದಕ್ಕೆ ಕಂಗುವಾ ಸದ್ಯದ ತಾಜಾ ಉದಾಹರಣೆ. ಹೌದು, ಭಾಷೆಯ ಭೇದ ಭಾವ ಇಲ್ಲದೇ ಎಲ್ಲರು ಪ್ಯಾನ್ ಇಂಡಿಯಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಹೀಗೆ ತಯಾರಾದ ಎಲ್ಲ ಚಿತ್ರಗಳನ್ನು ಪ್ರೇಕ್ಷಕರು ಮುಗಿ ಬಿದ್ದು ನೋಡಲು ತಯಾರಿಲ್ಲ. ಯಾಕೆಂದರೆ ಪ್ಯಾನ್ ಇಂಡಿಯಾ ಹೆಸರಿನಲ್ಲಿ ಅನೇಕರು ಇಲ್ಲಿ ಯಾಮಾರಿಸುತ್ತಿದ್ದಾರೆ ಎನ್ನುವ ಸತ್ಯ ಪ್ರೇಕ್ಷಕರಿಗೆ ಗೊತ್ತಾಗಿದೆ. ಪ್ಯಾನ್ ಇಂಡಿಯಾ ಸಹವಾಸ ಸಾಕು, ಪ್ರಾದೇಶಿಕತೆಯ ಸಿನಿಮಾ ಬೇಕು ಎಂದು ಅನಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ 'ಕಂಗುವ' ಬಕ್ಕಬೋರಲು ಬಿದ್ದಿದೆ. ಸೂರ್ಯ ವೃತ್ತಿ ಬದುಕಿನ ಅತ್ಯಂತ ಕಳಪೆ ಚಿತ್ರ ಎನ್ನುವ ಕುಖ್ಯಾತಿಗೆ ಕೂಡ ಕಂಗುವ ಪಾತ್ರವಾಗಿದೆ.
ಹೌದು, ಅಸಲಿಗೆ ಗಜಿನಿ, ಪಿತಾಮಗನ್, ಕಾಕ್ಕ-ಕಾಕ್ಕದಂತಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ತಮಿಳು ನಟ ಸೂರ್ಯ. ಸಿಂಗಂ ಅನ್ನೋ ಸರಣಿ ಸಿನಿಮಾವಂತೂ ಸೂರ್ಯನನ್ನು ಜಗದ್ವಿಖ್ಯಾತಿ ಮಾಡಿತ್ತು. ಇಂಥ ಸೂರ್ಯ ಕಂಗುವ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಕನಸು ಕಾಣುವ ಅವಶ್ಯಕತೆ ಇರಲಿಲ್ಲ. ಯಾಕೆಂದರೆ.. ಸೂರ್ಯ ಆ ಕಾಲದಲ್ಲಿಯೇ ಭಾರತದೆಲ್ಲೆಡೆ ಗುರುತಿಸಿಕೊಂಡವರು. ಆದರೂ.. ಎಲ್ಲರಂತೆ ತಾನು ಪ್ಯಾನ್ ಇಂಡಿಯಾ ಜಾತ್ರೆಯಲ್ಲಿ ಭಾಗಿಯಾಗಬೇಕೆಂಬ ಉಮೇದಿಗೆ ಬಿದ್ದ ಸೂರ್ಯ ಅವರನ್ನು ಕಂಗುವ ಅಕ್ಷರಶ ಕಂಗಾಲಾಗಿಸಿದೆ.

ವಿಶ್ವದೆಲ್ಲೆಡೆ ಮೊದಲ ದಿನ ₹58.62 ಕೋಟಿಯನ್ನು ಗಳಿಸಿದ್ದ ಕಂಗುವ ಭಾರತದಲ್ಲಿ ₹24 ಕೋಟಿಯನ್ನು ಗಳಿಸಿತ್ತು. ಅದು ಸಹಜ ಕೂಡ. ಯಾಕೆಂದರೆ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದವು. ಹೀಗಾಗಿ ಮೊದಲ ದಿನ ನೂಕು ನುಗ್ಗಲಿನ ವಾತಾವರಣ ಕಂಡು ಬಂದಿತ್ತು. ಆದರೆ ಆ ನಿರೀಕ್ಷೆಯ ಮಟ್ಟವನ್ನು ದಾಟುವುದಿರಲಿ ಚಿತ್ರ ತಲುಪಿಯೂ ಇಲ್ಲವೆನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾದ ನಂತರ ಪ್ರೇಕ್ಷಕರು ಚಿತ್ರಮಂದಿರದಿಂದ ವಿಮುಖರಾದರು. ಪರಿಣಾಮ ಭಾರತದಲ್ಲಿ ನಿನ್ನೆ ಈ ಚಿತ್ರ ಗಳಿಸಿದ್ದು ಕೇವಲ ₹09ಕೋಟಿಯನ್ನಷ್ಟೇ.
ಇನ್ನೂ ಚೆನ್ನೈನಲ್ಲಿಯೇ ಈ ಚಿತ್ರಕ್ಕೆ ಪ್ರೇಕ್ಷಕರ ಬರ ಎದುರಾಗಿರುವುದು ದೌರ್ಭಾಗ್ಯ. ಮೊದಲ ದಿನ ಚೆನ್ನೈನ ಚಿತ್ರಮಂದಿರಗಳು ಶೇಕಡಾ 67.25% ಭರ್ತಿಯಾಗಿದ್ದವು. ಆದರೆ ನಿನ್ನೆ 1500 ವರ್ಷಗಳ ಹಿಂದಿನ ಕಥೆಯನ್ನು ಹೊಂದಿರುವ 'ಕಂಗುವ' ಚಿತ್ರವನ್ನು ಕಣ್ತುಂಬಿಕೊಳ್ಳಲು 30.00% ಪ್ರೇಕ್ಷಕರು ಮಾತ್ರ ಬಂದಿದ್ದರು. ಹೀಗೆ ಒಂದು ಕಡೆ ಪ್ರೇಕ್ಷಕರ ಕೊರತೆ ಮತ್ತೊಂದು ಕಡೆ ವ್ಯಕ್ತವಾದ ಅಭಿಪ್ರಾಯಗಳಿಂದ ಹೈರಾಣಾದ ಚಿತ್ರಮಂದಿರದ ಮಾಲೀಕರು ಕಂಗುವಗೆ ಕೈ ಮುಗಿದ ಪರಿಣಾಮ ಚೆನ್ನೈನಲ್ಲಿ ಪ್ರದರ್ಶನದ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅನೇಕ ಕಡೆ ಕಂಗುವ ಬದಲು ಬೇರೆ ಚಿತ್ರಕ್ಕೆ ಮಣೆ ಹಾಕಲಾಗುತ್ತಿದೆ.
ಅಂದ್ಹಾಗೇ ಕಂಗುವ ಚಿತ್ರಕ್ಕೆ ನೂರು, ಇನ್ನೂರು ಅಲ್ಲ ಬದಲಿಗೆ ಮುನ್ನೂರೈವತ್ತು ಕೋಟಿಯನ್ನು ಸುರಿಯಲಾಗಿದೆ. ಚಿತ್ರದ ಸದ್ಯದ ಪ್ರದರ್ಶನವನ್ನು ನೋಡುತ್ತಿದ್ದರೆ, ಲಾಭ ಬಿಡಿ ಹಾಕಿದ ಬಂಡವಾಳದಲ್ಲಿ ಅರ್ಧದಷ್ಟು ಕೂಡ ಮರಳಿ ಬರುವುದಿಲ್ಲ ಅನ್ನುವ ಮಾತು ಸದ್ಯಕ್ಕೆ ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಂಗುವ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸೂರ್ಯ ಇಮೇಜ್ ಕಂಗುವ ಮೂಲಕ ಉತ್ತರ ಭಾರತದಲ್ಲಿ ಡ್ಯಾಮೇಜ್ ಆಗಿದೆ.
ಒಟ್ನಲ್ಲಿ ಭಾರೀ ನಿರೀಕ್ಷೆಯೊಂದಿಗೆ ಬಂದಿದ್ದ ಕಂಗುವ ಪ್ರೇಕ್ಷಕರನ್ನು ನಿರಾಸೆ ಮಾಡಿದೆ. ಕಾಲಿವುಡ್ಗೆ ಆಘಾತವನ್ನು ನೀಡಿದೆ. ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ನೆಲಕಚ್ಚುತ್ತಿದೆ. ಈ ಸೋಲಿನಿಂದ ಪಾಠ ಕಲಿತು ಸ್ಟಾರ್ಗಳ ಇನ್ನಾದರೂ ಪ್ಯಾನ್ ಇಂಡಿಯಾ ಎಂಬ ಭ್ರಮೆಯಿಂದ ಆಚೆ ಬರುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











