ತಮಿಳು ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸೋಕೆ ಒಪ್ಪಿದ ಕಿಚ್ಚ ಸುದೀಪ್; ಯಾವ್ದು ಆ ಸಿನಿಮಾ?
'ಮಾರ್ಕ್' ಬಳಿಕ ಕಿಚ್ಚ ಸುದೀಪ್ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. 'ಕೆಡಿ' ಚಿತ್ರದ ಅತಿಥಿ ಪಾತ್ರದಲ್ಲಿ ಮಾತ್ರ ನಟಿಸಿದ್ದರು. ಶೀಘ್ರದಲ್ಲೇ 'ಬಿಲ್ಲ ರಂಗ ಬಾಷ' ಚಿತ್ರೀಕರಣದಲ್ಲಿ ಭಾಗಿ ಆಗ್ತಾರೆ ಎನ್ನಲಾಗಿತ್ತು. ಈ ನಡುವೆ 4 ಸಿನಿಮಾಗಳನ್ನು ಆರಂಭಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ದಿಢೀರನೆ ಒಂದು ತಮಿಳು ಚಿತ್ರ ಒಪ್ಪಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ ಕಿಚ್ಚ ಸುದೀಪ್. ಈಗಾಗಲೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಸುದೀಪ್ ಕೆಲಸ ಮಾಡಿದ್ದಾರೆ. ರಾಜಮೌಳಿ, ರಾಮ್ಗೋಪಾಲ್ ವರ್ಮಾ ರೀತಿಯ ಖ್ಯಾತ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದ್ದಾರೆ. ಚಿರಂಜೀವಿ, ಅಮಿತಾಬ್ ಬಚ್ಚನ್, ವಿಜಯ್, ಸಲ್ಮಾನ್ ಖಾನ್ ಸೇರಿದಂತೆ ಪರಭಾಷೆಯ ದೊಡ್ಡ ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ವಿಶೇಷ ಪಾತ್ರ ಅಥವಾ ಅತಿಥಿ ಪಾತ್ರದಲ್ಲಿ ನಟಿಸುವಂತೆ ಪರಭಾಷೆಗಳಿಂದ ಬೇಡಿಕೆ ಇದ್ದೇ ಇರುತ್ತದೆ. ಆದರೆ ಎಲ್ಲವನ್ನು ಕಿಚ್ಚ ಒಪ್ಪಿಕೊಳ್ಳಲ್ಲ.

ಇದೀಗ 'ಅಂಡರ್ 18' ಎಂಬ ತಮಿಳು ಚಿತ್ರದಲ್ಲಿ ನಟಿಸಲು ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಧಿಕೃತವಾಗಿ ಚಿತ್ರತಂಡವೇ ಈ ಬಗ್ಗೆ ಮಾಹಿತಿ ನೀಡಿದೆ. ತಮಿಳು ನಿರ್ದೇಶಕ ವೆಟ್ರಿಮಾರನ್ ಶಿಷ್ಯ ಕಾರ್ತಿಕ್ ಪೆರುಮಾಳ್ ಸ್ವಾಮಿ ನಿರ್ದೇಶನದ ಸಿನಿಮಾ ಇದು. ವಿಕ್ರಾಂತ್ ಹಾಗೂ ಐಶ್ವರ್ಯ ರಾಜೇಶ್ ಚಿತ್ರದ ಲೀಡ್ ರೋಲ್ಗಳಲ್ಲಿ ನಟಿಸುತ್ತಿದ್ದಾರೆ. ಅತಿಥಿ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಲಿದ್ದಾರೆ. ಸ್ಯಾಮ್ ಸಿಎಸ್ ಸಂಗೀತ ಹಾಗೂ ವೇಲ್ರಾಜ್ ಆರ್ ಛಾಯಾಗ್ರಹಣ ಚಿತ್ರಕ್ಕಿದೆ.
ಎಸ್ಆರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಿ ಜಗದೀಶ್ 'ಅಂಡರ್ 18' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೊಸೂರು, ಚೆಂಗಲ್ಪಟ್ಟು ಮತ್ತು ಚೆನ್ನೈನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ರೈನೋಸ್ ತಂಡದಲ್ಲಿ ವಿಕ್ರಾಂತ್ ಆಡುತ್ತಿದ್ದಾರೆ. ಹಾಗಾಗಿ ಸುದೀಪ್ ಜೊತೆಗೂ ಒಳ್ಳೆ ಒಡನಾಟವಿದೆ. ಇದೇ ಕಾರಣಕ್ಕೆ ಕಿಚ್ಚ ನಟಿಸೋಕೆ ಒಪ್ಪಿಕೊಂಡಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ಮಾರ್ಕ್' ಚಿತ್ರದಲ್ಲಿ ರುದ್ರ ಆಗಿ ಸುದೀಪ್ ಜೊತೆ ವಿಕ್ರಾಂತ್ ಅಬ್ಬರಿಸಿದ್ದರು.
ಪಾತಕ ಲೋಕದ ಕರಾಳ ಮುಖ ಹಾಗೂ ಅದರಿಂದ ಪ್ರಭಾವಿತವಾದ ಕುಟುಂಬವೊಂದರ ಭಾವನಾತ್ಮಕ ಪ್ರಕ್ಷುಬ್ಧತೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ. ಇದೊಂದು ಎಮೋಷನಲ್ ಡ್ರಾಮಾ ಸಿನಿಮಾ ಎಂದು ಹೇಳಲಾಗುತ್ತಿದೆ. ಅಷ್ಟೇನು ಪರಿಚಯವಿಲ್ಲದ ತಮಿಳುನಾಡಿನ ಅಪರಾಧ ಜಗತ್ತಿನ ಬಗ್ಗೆ ಆಳವಾದ ಸಂಶೋಧನೆ ನಡೆಸಿ, ಅದರ ವಾಸ್ತವ ಚಿತ್ರಣವನ್ನು ಕುಟುಂಬವೊಂದರ ಭಾವೋದ್ವೇಗದ ಜೊತೆ ಸೇರಿಸಿ ನಿರ್ದೇಶಕರು ಸಿನಿಮಾ ಕಟ್ಟಿಕೊಡುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಕಾರ್ತಿಕ್ ಪೆರುಮಾಳ್ ಸ್ವಾಮಿ ತಮ್ಮ ಗುರುಗಳಾದ ವೆಟ್ರಿಮಾರನ್ ಅವರಿಂದ 'ಅಂಡರ್ 18' ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿಸಿದ್ದರು. ಚಿತ್ರಕ್ಕಾಗಿ 14, 15, 16, 17 ವರ್ಷ ವಯಸ್ಸಿನ ಹದಿಹರೆಯದವರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಬಾಲಾಪರಾಧಿಗಳ ವಿಚಾರಣೆ, ಸರ್ಕಾರಿ ವೀಕ್ಷಣಾ ಗೃಹದ ಕಾರಿಡಾರ್ನಿಂದ ಹುಟ್ಟಿಕೊಳ್ಳುವ ಕಥೆ ಚಿತ್ರದಲ್ಲಿದೆ.
ಸುದೀಪ್ ಎಂಟ್ರಿಯಿಂದ 'ಅಂಡರ್ 18' ಚಿತ್ರಕ್ಕೆ ಆನೆಬಲ ಬಂದಂತಾಗಿದೆ. ಕಿಚ್ಚನಿಗೆ ತಮಿಳು ಚಿತ್ರರಂಗ ಹೊಸದೇನು ಅಲ್ಲ. ವಿಜಯ್ ನಟಿಸಿದ್ದ 'ಪುಲಿ' ಸಿನಿಮಾ ಮೂಲಕ ಕಾಲಿವುಡ್ ಪ್ರವೇಶಿಸದ್ದರು. 'ಕೋಟಿಗೊಬ್ಬ- 2' ಸಿನಿಮಾ ಏಕಕಾಲಕ್ಕೆ ತಮಿಳು ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿತ್ತು. 'ಮ್ಯಾಕ್ಸ್' ಹಾಗೂ 'ಮಾರ್ಕ್' ಚಿತ್ರಗಳು ಕೂಡ ತಮಿಳಿಗೆ ಡಬ್ ಆಗಿತ್ತು.
ಇತ್ತೀಚೆಗೆ ಟಿವಿ9 ಸಂದರ್ಶನದಲ್ಲಿ ನಟ ಕಿಚ್ಚ ಸುದೀಪ್ ಮಾತನಾಡಿದ್ದರು. "ಪರಭಾಷೆಯಿಂದ ಸಾಕಷ್ಟು ಅವಕಾಶಗಳು ಬರುತ್ತವೆ. ಆದರೆ ಎಲ್ಲವನ್ನು ಒಪ್ಪಿಕೊಳ್ಳಲ್ಲ. ಕಾರಣ ನಾವು ಇಲ್ಲಿ ನಮ್ಮ ಸಿನಿಮಾ ಮಾಡುವಾಗ ಅಲ್ಲಿ ಹೋಗಿ 60 ದಿನ, 100 ದಿನ ಬ್ಲಾಕ್ ಆಗುವುದು ಇಷ್ಟವಿಲ್ಲ. ನಮ್ಮಲ್ಲಿ ಕನ್ನಡ ಸಿನಿಮಾ ಮಾಡೋಣ" ಎಂದಿದ್ದರು.
ಗಲಾಟ ತಮಿಳು ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿದ್ದ ಕಿಚ್ಚ "ನಾನು ಸ್ನೇಹಕ್ಕಾಗಿ ಬೇರೆ ಭಾಷೆಗಳಲ್ಲಿ ನಟಿಸಿದ್ದೀನಿ. ನಾನು ನಟಿಸಬೇಕು ಎಂದು ಕೇಳಿಕೊಂಡಾಗ ಈ ಪಾತ್ರಕ್ಕೆ ನೀವೇ ಸೂಕ್ತ ಎಂದಾಗ ನಾನು ಹೋಗಿದ್ದೇನೆ. ಆದರೆ ಅಲ್ಲಿನ ಜನಪ್ರಿಯ ನಟರು ಕನ್ನಡಕ್ಕೆ ಯಾಕೆ ಬರಲ್ಲ ಎನ್ನುವ ಬೇಸರ ಇದೆ. ನಾನೇ ಖುದ್ದಾಗಿ ಕೇಳಿದಾಗಲೂ ಕೆಲವರು ನಯವಾಗಿ ಜಾರಿಕೊಳ್ತಾರೆ. ಅವ್ರು ಬಂದ್ರೆ ನಮ್ಮ ಭಾಷೆಗೂ ಗೌರವ, ನಮ್ಮ ಜನ ಕೂಡ ಒಪ್ಪಿಕೊಳ್ತಾರೆ. ಒಂದು ಹಾಡಿಗೋ, ಸನ್ನಿವೇಶಕ್ಕೋ ಬಂದು ನಟಿಸಿದ್ರೆ ಚೆನ್ನಾಗಿರುತ್ತದೆ" ಎಂದಿದ್ದರು.


Click it and Unblock the Notifications