ಮಫ್ತಿ ತಮಿಳು ರಿಮೇಕ್ ಪತ್ತುತಲ ನೋಡಿದವ್ರು ಏನಂದ್ರು? ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು?
ಮಫ್ತಿ.. ಕನ್ನಡ ಸಿನಿ ರಸಿಕರ ನೆಚ್ಚಿನ ಚಿತ್ರಗಳ ಪಟ್ಟಿಯಲ್ಲಿ ಅನೇಕ ವರ್ಷಗಳ ಕಾಲ ಉಳಿದುಕೊಳ್ಳಲಿರುವ ಚಿತ್ರ. ಐದು ವರ್ಷಗಳ ಹಿಂದೆ 2017ರಲ್ಲಿ ಬಿಡುಗಡೆಯಾದ ಈ ಚಿತ್ರ ಸಿನಿ ರಸಿಕರನ್ನು ಹುಚ್ಚೆಬ್ಬಿಸಿತ್ತು. ಶ್ರೀಮುರಳಿ ಹಾಗೂ ಶಿವ ರಾಜ್ಕುಮಾರ್ ಕಾಂಬಿನೇಶನ್ನ ಚಿತ್ರ ಎಂದು ಚಿತ್ರಮಂದಿರಕ್ಕೆ ತೆರಳಿದ್ದ ಸಿನಿ ರಸಿಕರು ನಿರ್ದೇಶಕ ನರ್ತನ್ ಅವರ ಸೂಪರ್ ನಿರ್ದೇಶನವನ್ನು ಕೊಂಡಾಡಿದ್ದರು.
ಹೌದು, ಉಗ್ರಂ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಜತೆ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದ ನರ್ತನ್ ಅದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದರು. ಚಿತ್ರಮಂದಿರಕ್ಕೆ ಬಂದಿದ್ದ ಸಿನಿ ರಸಿಕರ ನಿರೀಕ್ಷೆಗೂ ಮೀರಿದ ಕಥೆಯನ್ನು ಹೆಣೆದಿದ್ದರು. ಗಣನಾಗಿ ಶ್ರೀಮುರಳಿ ಮೊದಲಾರ್ಧದಲ್ಲಿ ಮಾಸ್ ಅಂಡರ್ಕವರ್ ಪೊಲೀಸ್ ಆಗಿ ಕಾಣಿಸಿಕೊಂಡರೆ, ಮಧ್ಯಂತರದ ವೇಳೆಗೆ ಹೆಲಿಕಾಪ್ಟರ್ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದ ಶಿವ ರಾಜ್ಕುಮಾರ್ ಕಿಕ್ಕೇರಿಸಿದ್ದರು. ಭೈರತಿ ರಣಗಲ್ ಅಬ್ಬರ ಹಾಗೂ ರವಿ ಬಸ್ರೂರು ಬ್ಯಾಕ್ಗ್ರೌಂಡ್ ಮ್ಯೂಸಿಕ್ ಚಿತ್ರಮಂದಿರವನ್ನು ಸ್ಟೇಡಿಯಂ ಮಾಡಿತ್ತು.

ಈ ಚಿತ್ರದ ಬಗ್ಗೆ ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಚಿತ್ರರಂಗದ ಸಿನಿ ರಸಿಕರೂ ಸಹ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಅಲ್ಲದೇ ಈ ಚಿತ್ರಕ್ಕೆ ತಮಿಳು ಚಿತ್ರರಂಗದಿಂದ ರಿಮೇಕ್ ಬೇಡಿಕೆಯೂ ಸಹ ಬಂದಿತ್ತು. ನಿರ್ದೇಶಕ ನರ್ತನ್ ಅವರೇ ಅಲ್ಲಿಯೂ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಂಭವಿಸಲಿಲ್ಲ. ಸದ್ಯ ಈ ಚಿತ್ರ ತಮಿಳಿಗೆ ರಿಮೇಕ್ ಆಗಿ ನಿನ್ನೆ ( ಮಾರ್ಚ್ 30 ) ರಾಮನವಮಿ ಪ್ರಯುಕ್ತ ಬಿಡುಗಡೆಗೊಂಡಿದ್ದು, ಚಿತ್ರದಲ್ಲಿ ಶಿವ ರಾಜ್ಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ಸಿಳಂಬರಸನ್ ಮಾಡಿದ್ದು, ಶ್ರೀಮುರಳಿ ಪಾತ್ರವನ್ನು ಗೌತಮ್ ಕಾರ್ತಿಕ್ ಮಾಡಿದ್ದಾರೆ.
ಪತ್ತು ತಲ ಎಂಬ ಶೀರ್ಷಿಕೆ ಅಡಿಯಲ್ಲಿ ಈ ಚಿತ್ರ ತೆರೆಗೆ ಬಂದಿದ್ದು, ಚಿತ್ರ ಬಿಡುಗಡೆ ದಿನ ಬಹುತೇಕ ಹಿಟ್ ವಿಮರ್ಶೆಗಳನ್ನು ಪಡೆದುಕೊಂಡಿದೆ. ಇನ್ನು ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 14 ಕೋಟಿ ಕಲೆಕ್ಷನ್ ಮಾಡಿದ್ದು ಈ ವರ್ಷ ಬಿಡುಗಡೆಗೊಂಡ ತಮಿಳು ಸಿನಿಮಾಗಳ ಪೈಕಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಮೂರನೇ ಸಿನಿಮಾ ಎನಿಸಿಕೊಂಡಿದೆ. ಇನ್ನು ಚಿತ್ರ ವೀಕ್ಷಿಸಿದ ಸಿನಿ ರಸಿಕರು ಚಿತ್ರದ ಬಗ್ಗೆ ಈ ಕೆಳಕಂಡಂತೆ ವಿಮರ್ಶೆಗಳನ್ನು ನೀಡಿದ್ದಾರೆ.

ಕೇಶ್ ಎಂಬ ಸಿನಿ ರಸಿಕ ಪತ್ತುತಲ ಚಿತ್ರವನ್ನು ವೀಕ್ಷಿಸಿದ ಬಳಿಕ ತನ್ನ ವಿಮರ್ಶೆಯನ್ನು ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ಸಿಳಂಬರಸನ್ ಮಾಸ್ ಫಾರ್ಮ್ ಮುಂದುವರಿದಿದೆ ಎಂದು ಬರೆದುಕೊಂಡಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಫೈಟ್, ಎ ಅರ್ ರಹಮಾನ್ ಬಿಜಿಎಂ, ಡೈಲಾಗ್ಸ್ ಹಾಗೂ ಮಧ್ಯಂತರ ಚಿತ್ರದ ಹೈಲೈಟ್ ಎಂದು ಇವರು ತಿಳಿಸಿದ್ದು, ಚಿತ್ರಕಥೆ ನಿಧಾನಗತಿಯಲ್ಲಿ ಸಾಗುವುದೊಂದೇ ಚಿತ್ರದ ಮೈನಸ್ ಪಾಯಿಂಟ್ ಎಂದಿದ್ದಾರೆ. ಅದನ್ನು ಹೊರತುಪಡಿಸಿದರೆ ಚಿತ್ರ ನೋಡಲು ಅರ್ಹ ಎಂದು ತಿಳಿಸಿದ್ದಾರೆ ಹಾಗೂ 10ಕ್ಕೆ 7.8 ಅಂಕಗಳನ್ನು ನೀಡಿದ್ದಾರೆ.
ಜಯ್ ಮೆನನ್ ಎಂಬುವವರು ಚಿತ್ರದ ವಿಮರ್ಶೆಯನ್ನು ಪ್ರಕಟಿಸಿದ್ದು, ಸಿಳಂಬರಸನ್ ಅರ್ಧ ಚಿತ್ರದಲ್ಲಿ ಮಾತ್ರ ಇದ್ದರೂ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಸಾಮಾನ್ಯ ಚಿತ್ರಕಥೆಯನ್ನು ನಿರ್ದೇಶಕ ಕೃಷ್ಣ ವಾವ್ ಎನಿಸುವಂತೆ ಮಾಡಿದ್ದಾರೆ. ಎಆರ್ ರಹಮಾನ್ ಸಂಗೀತ ಅದ್ಭುತ. ಇನ್ನುಳಿದಂತೆ ಗೌತಮ್ ಕಾರ್ತಿಕ್, ಪ್ರಿಯಾ ಭವಾನಿ ಶಂಕರ್ ಹಾಗೂ ಅನು ಸಿತಾರಾ ನಟನೆ ಚೆನ್ನಾಗಿದೆ ಎಂದು ಇವರು ಉಲ್ಲೇಖಿಸಿದ್ದಾರೆ.
ಕುಮಾರ್ ಸ್ವಯಮ್ ಎಂಬುವನ್ನು ಭಯಂಕರ ಎಂದು ಚಿತ್ರವನ್ನು ಹೊಗಳಿದ್ದಾರೆ. ಸಿಳಂಬರಸನ್ ಭರ್ಜರಿಯಾಗಿ ಎಂಟ್ರಿ ಕೊಟ್ಟು ದ್ವಿತೀಯಾರ್ಧವನ್ನು ಆವರಿಸಿಕೊಂಡಿದ್ದಾರೆ. ಉಳಿದ ಕಲಾವಿದರು ಉತ್ತಮ ಅಭಿನಯ ಮಾಡಿದ್ದಾರೆ. ಎಆರ್ ರಹಮಾನ್ ಸಂಗೀತ ಸೂಪರ್. ಪ್ರೊಡಕ್ಷನ್ ವ್ಯಾಲ್ಯೂಸ್ ಸೂಪರ್. ಚಿತ್ರಕಥೆ ಕೆಲಸ ಮಾಡಿದೆ. ಆಕ್ಷನ್ ದೃಶ್ಯಗಳು ಭರ್ಜರಿಯಾಗಿವೆ ಎಂದು ಬರೆದುಕೊಂಡು 5ಕ್ಕೆ 3.5 ಸ್ಟಾರ್ ನೀಡಿದ್ದಾರೆ.
ಹೀಗೆ ಪತ್ತು ತಲ ಚಿತ್ರವನ್ನು ವೀಕ್ಷಿಸಿ ವಿಮರ್ಶೆ ನೀಡಿರುವ ಪೈಕಿ ಬಹುತೇಕರು ಚಿತ್ರಕ್ಕೆ ಉತ್ತಮ ಚಿತ್ರ ಎಂದೇ ಸ್ಟಾರ್ಗಳನ್ನು ನೀಡಿದ್ದಾರೆ. ಚಿತ್ರಕಥೆ ನಿಧಾನ ಎಂದು ಬಹುತೇಕರು ಉಲ್ಲೇಖಿಸಿದ್ದು, ಇದನ್ನು ಹೊರತುಪಡಿಸಿ ಚಿತ್ರದ ಬಗ್ಗೆ ಮತ್ಯಾವುದೇ ಸಹ ನೆಗೆಟಿವ್ ಅಂಶ ಕೇಳಿ ಬಂದಿಲ್ಲ.


Click it and Unblock the Notifications











