ಕರೂರು ಕಾಲ್ತುಳಿತ ಪ್ರಕರಣ; ಯಾವುದೇ ಕ್ಷಣದಲ್ಲಿ ನಟ ವಿಜಯ್ ಅರೆಸ್ಟ್?
ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿದೆ. 50ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳು ನಟ, ಟಿವಿಕೆ ಪಕ್ಷದ ಸ್ಥಾಪಕ ದಳಪತಿ ವಿಜಯ್ ನಡೆಸುತ್ತಿದ್ದ ರ್ಯಾಲಿಯಲ್ಲಿ ಈ ದುರಂತ ಸಂಭವಿಸಿದೆ. ಪ್ರಕರಣದ ಸಂಬಂಧ ಯಾವುದೇ ಕ್ಷಣದಲ್ಲಿ ನಟ ವಿಜಯ್ ಬಂಧನವಾಗಬಹುದು ಎನ್ನುವ ಚರ್ಚೆ ಶುರುವಾಗಿದೆ.
ಸೂಪರ್ ಹಿಟ್ ಸಿನಿಮಾಗಳ ಮೂಲಕ ತಮಿಳು ಜನರ ಮನಗೆದ್ದ ನಟ ವಿಜಯ್ ರಾಜಕೀಯರಂಗಕ್ಕೆ ಧುಮುಕಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಕೆಲಸ ಮಾಡುತ್ತಾರೆ. ಹಾಗಾಗಿ ದೊಡ್ಡ ದೊಡ್ಡ ಸಮಾವೇಶ, ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಲಕ್ಷಾಂತರ ಜನ ಈ ಸಮಾವೇಶಗಳಲ್ಲಿ ಭಾಗಿ ಆಗುತ್ತಿದ್ದಾರೆ. ನಿನ್ನೆ ಕರೂರು ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಕಾಲ್ತುಳಿತ ಘಟನೆ ನಡೆದಿದೆ.

ದುರಂತ ಸಂಬಂಧ ಪರ ವಿರೋಧ ಚರ್ಚೆ ನಡೀತಿದೆ. ಹೆಚ್ಚು ಜನರನ್ನು ಸೇರಿಸಿದ್ದು ತಪ್ಪು ಎನ್ನುವುದು ಒಂದು ವಾದವಾದರೆ ಡಿಎಂಕೆ ನೇತೃತ್ವದ ಸರ್ಕಾರ ಸರಿಯಾದ ಪೊಲೀಸ್ ಭದ್ರತೆ ನೀಡಲು ವಿಫಲವಾಗಿದೆ ಎನ್ನುವ ಆರೋಪ ಕೆಲವರದ್ದು. ಇನ್ನು ದುರಂತದ ಬೆನ್ನಲ್ಲೇ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ವಿಮಾನ ಏರಿ ಚೆನ್ನೈನಲ್ಲಿರುವ ತಮ್ಮ ನಿವಾಸ ತಲುಪಿದ್ದಾರೆ.
ಮಧ್ಯರಾತ್ರಿ ಪೊಲೀಸರು ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದರು. ಅದನ್ನು ನೋಡಿ ಅವರನ್ನು ಬಂಧಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಅವರ ಮನೆಗೆ ಭದ್ರತೆ ನೀಡಲು ಪೊಲೀಸರು ಹೋಗಿದ್ದರು ಎನ್ನುವ ಮಾತುಗಳು ಕೇಳಿಬರ್ತಿದೆ. ರಜನಿಕಾಂತ್ ಬಿಟ್ಟರೆ ತಮಿಳುನಾಡಿನಲ್ಲಿ ವಿಜಯ್ ಜನಪ್ರಿಯತೆ ಜೋರಾಗಿದೆ. ಅವರ ಎಲ್ಲೇ ಹೋದರೂ ಜನ ಮುತ್ತಿಕೊಳ್ಳುತ್ತಾರೆ. ಕರೂರು ರ್ಯಾಲಿಗೆ 10 ಸಾವಿರ ಜನ ಸೇರಬಹುದು ಎಂದು ಆಯೋಜಕರು ನಿರೀಕ್ಷಿಸಿದ್ದರು. ಆದರೆ 30 ಸಾವಿರ ಜನ ಸೇರಿದ್ದರು ಎನ್ನಲಾಗ್ತಿದೆ.

ದುರಂತದ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ನಟರಾದ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ಈಗಾಗಲೇ ತನಿಖೆ ಶುರುವಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರೆದಿದೆ. 6 ಮಂದಿ ಮಕ್ಕಳು ಸೇರಿದಂತೆ 39 ಜನ ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.
"ತಮಿಳುನಾಡಿನ ಯಾವುದೇ ರಾಜಕೀಯ ರ್ಯಾಲಿಯಲ್ಲಿ ಇಂಥ ದೊಡ್ಡ ದುರಂತ ಎಂದಿಗೂ ಸಂಭವಿಸಿರಲಿಲ್ಲ" ಎಂದಿರುವ ತಮಿಳುನಾಡು ಸಿಎಂ ಸ್ವಾಲಿನ್ ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಘೋಷಣೆ ಮಾಡಿದ್ದಾರೆ. ದಳಪತಿ ವಿಜಯ್ ಮಾತ್ರ ದುರಂತದ ಬಗ್ಗೆ ಇನ್ನು ಪ್ರತಿಕ್ರಿಯಿಸಿಲ್ಲ. ನಿವಾಸ ಸೇರಿಕೊಂಡಿರುವ ವಿಜಯ್ ಮೌನಕ್ಕೆ ಜಾರಿದ್ದಾರೆ. ಈಗಾಗಲೇ ಘಟನೆಯ ತನಿಖೆ ಆರಂಭವಾಗಿದೆ.
ಈ ಹಿಂದೆ 'ಪುಷ್ಪ'-2 ಸಿನಿಮಾ ಬಿಡುಗಡೆ ಸಮಯದಲ್ಲಿ ನಡೆದ ಕಾಲ್ತುಳಿದ ಪ್ರಕರಣದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಪೊಲೀಸರು ಬೇಡ ಎಂದು ಹೇಳಿದರೂ ಕೇಳದೇ ನಟ ಅಲ್ಲು ಅರ್ಜುನ್ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಲು ಬಂದಿದ್ದಕ್ಕೆ ಈ ಘಟನೆ ನಡೀತು. ಹಾಗಾಗಿ ಅವರನ್ನು ಬಂಧಿಸಲಾಗಿತ್ತು. ಒಂದು ದಿನ ಜೈಲಿನಲ್ಲಿದ್ದ ಅಲ್ಲು ಅರ್ಜುನ್ ಬಳಿಕ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಅದೇ ರೀತಿ ಈಗ ನಟ ವಿಜಯ್ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ ಎನ್ನಲಾಗ್ತಿದೆ.
ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷ ಜಾದೂ ಮಾಡುತ್ತದೆ ಎಂದು ಕೆಲವರು ಭಾವಿಸಿದ್ದಾರೆ. ತಮಿಳುನಾಡಿನ ಮುಂದಿನ ಸಿಎಂ ದಳಪತಿ ವಿಜಯ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











