ಸನ್ರೈಸರ್ಸ್ ಗೆಲುವು, ಕಾವ್ಯಾ ಮಾರನ್ ಸಂಭ್ರಮಾಚರಣೆ, ರಜನಿಕಾಂತ್ ಆಸೆ ಈಡೇರಿತು
ಐಪಿಎಲ್ 17 ಸೀಸನ್ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಚುಟುಕು ಕ್ರಿಕೆಟ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕವಾಗುತ್ತಿದೆ. ನಿನ್ನೆ(ಮಾರ್ಚ್ 27) ನಡೆದ ಮುಂಬೈ ಇಂಡಿಯನ್ಸ್ Vs ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ಕೂಡ ಬಹಳ ರೋಚಕವಾಗಿತ್ತು. ಪಂದ್ಯದಲ್ಲಿ ದಾಖಲೆಯ ರನ್ ಹೊಳೆ ಹರಿಯಿತು.
ಈ ಬಾರಿಯ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೈದರಾಬಾದ್ ತಂಡ 31 ರನ್ಗಳ ಗೆಲುವು ಸಾಧಿಸಿತು. 20 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಹೈದರಾಬಾದ್ ತಂಡ ದಾಖಲೆಯ 277 ರನ್ ಪೇರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಕೂಡ ಪ್ರಬಲ ಪೈಪೋಟಿ ನೀಡಿತು. ರೋಹಿತ್ ಶರ್ಮಾ, ತಿಲಕ್ ವರ್ಮಾ, ಟಿಮ್ ಡೇವಿಡ್ ಭರ್ಜರ ಬ್ಯಾಟಿಂಗ್ ಪ್ರದರ್ಶಿಸಿದರು.

ಎರಡು ಇನ್ನಿಂಗ್ಸ್ ಸೇರಿ ಒಟ್ಟು 523 ರನ್ ಗಳಿಸಿದ್ದು ದಾಖಲೆಯೇ ಸರಿ. ಇನ್ನು ಪಂದ್ಯದಲ್ಲಿ 38 ಸಿಕ್ಸರ್ಗಳು ಸಿಡಿದು ಮತ್ತೊಂದು ದಾಖಲೆ ನಿರ್ಮಾಣವಾಯಿತು. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಓನರ್ ಕಾವ್ಯಾ ಮಾರನ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತಮ್ಮ ತಂಡ ಬ್ಯಾಟಿಂಗ್ನಲ್ಲಿ ಫೋರ್, ಸಿಕ್ಸರ್ ಬಾರಿಸಿದಾಗ ಕುಣಿದು ಕುಪ್ಪಳಿಸಿದರು. ಇನ್ನು ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ಗಳು ಉರುಳಿದಾಗ, ತಂಡ ಗೆದ್ದಾಗಲೂ ಪೆವಿಲಿಯನ್ನಲ್ಲಿ ಕೂತು ಕೇಕೆ ಹಾಕಿ ಸಂಭ್ರಮಿಸಿದರು.
ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಕಮ್ಮಿ ಎಂದೇ ಹೇಳಬಹುದು. ಒಮ್ಮೆ ಚಾಂಪಿಯನ್ ಆಗಿದ್ದರೆ ಒಮ್ಮೆ ರನ್ನರ್ ಅಪ್ ಆಗಿತ್ತು. ಉಳಿದ ಸೀಸನ್ಗಳಲ್ಲಿ ತಂಡದ ಪ್ರದರ್ಶನ ಅಷ್ಟೇನು ಹೇಳಿಕೊಳ್ಳುವಂತೆ ಇರಲಿಲ್ಲ. ಸನ್ ಪಿಕ್ಚರ್ಸ್ ಕಲಾನಿಧಿ ಮಾರನ್ ಸನ್ ರೈಸರ್ಸ್ ಹೈದರಾಬಾದ್ ಮಾಲೀಕರು. ಅವರ ಮಗಳು ಕಾವ್ಯಾ ಮಾರನ್ ತಮ್ಮ ತಂಡವನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೆ ಬರುತ್ತಾರೆ.
ತಮ್ಮ ತಂಡ ಕಳಪೆ ಪ್ರದರ್ಶನ ತೋರಿದಾಗಲೆಲ್ಲಾ ಕಾವ್ಯಾ ಬೇಸರದಿಂದ ನಿಟ್ಟುಸಿರು ಬಿಡುತ್ತಿದ್ದರು. ಹತಾಶೆಯಿಂದ ಕೂರುತ್ತಿದ್ದರು. ಸಾಕಷ್ಟು ಬಾರಿ ಇಂತಹ ಸನ್ನಿವೇಶಗಳನ್ನು ಐಪಿಎಲ್ ಪ್ರೇಮಿಗಳು ನೋಡಿದ್ದಾರೆ. ಇದೇ ವಿಚಾರದ ಬಗ್ಗೆ 'ಜೈಲರ್' ಸಿನಿಮಾ ಆಡಿಯೋ ಲಾಂಚ್ ವೇದಿಕೆಯಲ್ಲಿ ನಟ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿದ್ದರು.

ಕಲಾನಿಧಿ ಮಾರನ್ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 'ಜೈಲರ್' ಚಿತ್ರವನ್ನು ಕೂಡ ತಮ್ಮದೇ ಬ್ಯಾನರ್ನಲ್ಲಿ ಕಟ್ಟಿಕೊಟ್ಟಿದ್ದರು. ಆಡಿಯೋ ಲಾಂಚ್ ವೇದಿಕೆಯಲ್ಲಿ ತಲೈವಾ ಮಾತನಾಡುತ್ತಾ ನಿರ್ಮಾಪಕ ಧೈರ್ಯವನ್ನು ಮೆಚ್ಚಿಕೊಂಡಿದ್ದರು. ಜೊತೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಬಗ್ಗೆ ಸಲಹೆ ನೀಡಿದ್ದರು.
"ಕಲಾನಿಧಿ ಮಾರನ್ ಅವ್ರೇ ಮುಂದೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಿ. ಐಪಿಎಲ್ ಚೆನ್ನಾಗಿ ನಡೆಯುತ್ತಿದೆ. ಸನ್ ರೈಸರ್ಸ್ ಪಂದ್ಯದ ವೇಳೆ ನಮ್ಮ ಕಾವ್ಯ ಕೊಡುವ ಎಕ್ಸ್ಪ್ರೇಶನ್ ನೋಡಿದರೆ ನಮಗೆ ಟೆನ್ಷನ್ ಆಗುತ್ತದೆ. ಆಕೆಯನ್ನು ನೋಡುತ್ತಿದ್ದರೆ ನಮ್ಮ ಬಿಪಿ ಹೆಚ್ಚಾಗುತ್ತದೆ" ಎಂದಿದ್ದರು. ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಸನ್ ರೈಸರ್ಸ್ ಆರ್ಭಟ ಹಾಗೂ ಕಾವ್ಯಾ ಸಂಭ್ರಮ ನೋಡಿದವರು ಅಂತೂ ರಜನಿಕಾಂತ್ ಆಸೆ ಈಡೇರಿತು ಎನ್ನುತ್ತಿದ್ದಾರೆ.
17ನೇ ಸೀಸನ್ನಲ್ಲಿ ಈಗಾಗಲೇ 8 ಪಂದ್ಯಗಳು ಮುಕ್ತಾಯವಾಗಿದೆ. ಸನ್ ರೈಸರ್ಸ್ ತಂಡ 2 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿದ್ದರೆ ಮತ್ತೊಂದು ಪಂದ್ಯದಲ್ಲಿ ಸೋಲುಂಡಿದೆ. ಮಾರ್ಚ್ 23ರಂದು ಕೆಕೆಆರ್ ವಿರುದ್ಧ ಪಂದ್ಯದಲ್ಲಿ 4 ರನ್ಗಳಿಂದ ಪರಾಜಯ ಅನುಭವಿಸಿತ್ತು. ಭಾನುವಾರ(ಮಾರ್ಚ್ 31) ಗುಜರಾತ್ ಟೈಟನ್ಸ್ ತಂಡವನ್ನು ಎಸ್ಆರ್ಹೆಚ್ ಎದುರಿಸಲಿದೆ.


Click it and Unblock the Notifications











