ನಿಮ್ಮ ತಾಯಿ, ನಿಮ್ಮ ಹೆಂಡ್ತಿ ಫೋಟೊ ಹಾಕೋ ಪೊರ್ಕಿ ನಾಯಿ; ನಟಿ ಖುಷ್ಬೂ ಆಕ್ರೋಶ
ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೆಲೆಬ್ರೆಟಿಗಳು ಇದರಿಂದ ಹೆಚ್ಚು ಕಿರುಕುಳ ಅನುಭವಿಸುವಂತಾಗಿದೆ. ಅದರಲ್ಲೂ ನೇರಾನೇರ ಮಾತನಾಡುವ ಗಟ್ಟಿಗಿತ್ತಿ ನಟಿಯರನ್ನು ಟಾರ್ಗೆಟ್ ಮಾಡುವುದು, ಕೆಟ್ಟ ಕೆಟ್ಟದಾಗಿ ಪೋಸ್ಟ್ ಮಾಡುವುದು ಹೆಚ್ಚಾಗಿದೆ. ಇದೇ ರೀತಿ ತಮ್ಮನ್ನು ಟ್ರೋಲ್ ಮಾಡುವವರಿಗೆ ನಟಿ, ಬಿಜೆಪಿ ನಾಯಕಿ ಖುಷ್ಬು ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಇರುವವರನ್ನು ಟೀಕಿಸುವ ಹೊಸದೇನು ಅಲ್ಲ. ಸೋಶಿಯಲ್ ಮೀಡಿಯಾ ಅದಕ್ಕೆ ದೊಡ್ಡ ಆಯುಧವಾಗಿದೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮುಖ ತೋರಿಸದೇ ಯಾವುದೋ ಮೂಲೆಯಲ್ಲಿ ಕೂತು ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುತ್ತಾರೆ. ಇತ್ತೀಚೆಗೆ ಮಾರ್ಪ್ ಮಾಡಿದ ಫೋಟೊ, ವೀಡಿಯೋ ಹಂಚಿಕೊಂಡು ಹೆಚ್ಚು ಕಿರುಕುಳ ನೀಡುತ್ತಿದ್ದಾರೆ. ಅದಕ್ಕೆ ಖ್ಯಾತ ನಟ, ನಟಿಯರು ಬಲಿಯಾಗುವಂತಾಗಿದೆ.

ಇತ್ತೀಚೆಗೆ ಕಿಡಿಗೇಡಿಯೊಬ್ಬ ನಟಿ ಖುಷ್ಬೂ ಫೋಟೊ ಮಾರ್ಪ್ ಮಾಡಿ ಕೆಟ್ಟದಾಗಿ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾನೆ. ಅದು ಗಮನಕ್ಕೆ ಬರುತ್ತಿದ್ದಂತೆ ನಟಿ ಖುಷ್ಬೂ ಕೆಂಡಮಂಡಲವಾಗಿದ್ದಾರೆ. ಆತನ ಪೋಸ್ಟ್ ರೀ-ಟ್ವೀಟ್ ಮಾಡಿ ಕೆಂಡ ಕಾರಿದ್ದಾರೆ. "ಇದೇ ರೀತಿ ನಿಮ್ಮ ತಾಯಿ, ನಿಮ್ಮ ಹೆಂಡ್ತಿ ಫೋಟೊ ಹಾಕೋ ಪೊರ್ಕಿ ಬೀದಿನಾಯಿ. ಫೋಟೊ ಮಾರ್ಪ್ ಮಾಡಿ ಹಾಕೋ ಚರಂಡಿ ಹಂದಿ. ಡಿಎಂಕೆ ಮಹಿಳೆಯರನ್ನು ಬೆಳೆಯಲು ಎಂದಿಗೂ ಬಿಡುವುದಿಲ್ಲ ಎಂದು ಸಾಬೀತುಪಡಿಸಲು ಹಠ ಹಿಡಿದಂತೆ ಕಾಣುತ್ತಿದೆ. ನಿಮ್ಮಂತಹ ಪರಾವಲಂಬಿಗಳು ನನ್ನ ಮೇಲೆ ದಾಳಿ ಮಾಡಲು ಬಿಡಲ್ಲ ಎಂದು ಖುಷ್ಬೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟಿ ಖುಷ್ಬೂ ಅವರಿಗೆ ಸೋಶಿಯಲ್ ಮೀಡಿಯಾ ಟ್ರೋಲ್ ಹೊಸದೇನು ಅಲ್ಲ, ಈ ಹಿಂದೆ ಕೂಡ ಇದೇ ರೀತಿ ಪೋಸ್ಟ್ ಮಾಡಿದ್ದಾಗ ತಿರುಗೇಟು ನೀಡಿದ್ದರು. ಇದೀಗ ಮತ್ತೆ ಗರಂ ಆಗಿದ್ದಾರೆ. ಸಾಕಷ್ಟು ಜನ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಒಂದ್ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ಖುಷ್ಬೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತಮಿಳು ಚಿತ್ರಗಳಲ್ಲಿ ಬಣ್ಣ ಹಚ್ಚಿರುವುದೇ ಹೆಚ್ಚು.

ಇತ್ತೀಚಿನ ವರ್ಷಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವುದೇ ಹೆಚ್ಚು. ಆದರೂ ಸಿನಿಮಾಗಳಿಗಿಂತ ರಾಜಕೀಯರಂಗದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. 15 ವರ್ಷಗಳ ಹಿಂದೆ ನಟಿ ಖುಷ್ಬೂ ಡಿಎಂಕೆ ಪಕ್ಷ ಸೇರಿದ್ದರು. 4 ವರ್ಷಗಳ ಬಳಿಕ ಡಿಎಂಕೆ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದರು. 5 ವರ್ಷಗಳ ಹಿಂದೆ ಕಾಂಗ್ರೆಸ್ನಿಂದ ಬಿಜೆಪಿ ಪಕ್ಷಕ್ಕೆ ಬಂದಿದ್ದರು. ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ನಿನ್ನೆಯಷ್ಟೆ(ಜುಲೈ 30) ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆ ಸ್ಥಾನ ಸಿಕ್ಕಿದೆ.
ಆಕೆಗೆ ಬಿಜೆಪಿ ಪಕ್ಷದಲ್ಲಿ ಒಳ್ಳೆ ಹುದ್ದೆ ಸಿಗುತ್ತಿದಂತೆ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಕಿಡಿಗೇಡಿ ಒಬ್ಬ ಮಾಡಿದ ಪೋಸ್ಟ್ಗೆ ಖುಷ್ಬೂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಾಲನಟಿಯಾಗಿ ಬಾಲಿವುಡ್ ಪ್ರವೇಶಿಸಿ ಖುಷ್ಬೂ ಬಳಿಕ ನಾಯಕಿಯಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ಸಿಕ್ಕಿತ್ತು. ಕೊನೆಗೆ ತಮಿಳು ನಿರ್ದೇಶಕ ಸಿ. ಸುಂದರ್ ಕೈ ಹಿಡಿದು ಚೆನ್ನೈನಲ್ಲೇ ನೆಲೆಸಿದರು.
'ರಣಧೀರ' ಸಿನಿಮಾ ಮೂಲಕ ಖುಷ್ಬೂ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಹಲವು ಸಿನಿಮಾಗಳಲ್ಲಿ ಮಿಂಚಿದರು. 'ನಾನಲ್ಲ' ಕನ್ನಡದಲ್ಲಿ ಆಕೆ ನಟಿಸಿದ ಕೊನೆಯ ಚಿತ್ರ. 'ನೆಸಿಪ್ಪಯ್ಯ' ಎಂಬ ತಮಿಳು ಚಿತ್ರದಲ್ಲಿ ಕೊನೆಯದಾಗಿ ಕ್ಯಾಮರಾ ಎದುರಿಸಿದ್ದರು.


Click it and Unblock the Notifications











