ಐಟಂ ಸಾಂಗ್ಗೆ ಕುಣಿಯಲು ನಿಮ್ ಮನೇಲಿ ಯಾರಾದ್ರು ಇದ್ದಾರಾ ನೋಡು; ಖುಷ್ಬೂ ಕೆಂಡಾಮಂಡಲ
ರಜನಿಕಾಂತ್ ಹೀರೊ ಆಗಿ ಸುಂದರ್ ಸಿ. ನಿರ್ದೇಶನದ ಸಿನಿಮಾ ನಿಂತು ಹೋಗಿದೆ. ವಾರದ ಹಿಂದೆ ಸಿನಿಮಾ ಘೋಷಣೆ ಆಗಿತ್ತು. ಕಮಲ್ ಹಾಸನ್ ತಮ್ಮದೇ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ದಿಢೀರನೆ ನಿರ್ದೇಶಕ ಚಿತ್ರದಿಂದ ಹೊರಬಂದಿರುವುದಾಗಿ ಘೋಷಿಸಿದ್ದಾರೆ.
ಸುಂದರ್ ಸಿ. ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ದಶಕಗಳ ಹಿಂದೆ ರಜನಿಕಾಂತ್ ನಟಿಸಿದ್ದ ಸೂಪರ್ ಹಿಟ್ 'ಅರುಣಾಚಲಂ' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಸುಂದರ್ ಸಿ. ಈ ನಿರ್ಧಾರಕ್ಕೆ ಬಂದಿರುವುದು ಗೊತ್ತಾಗ್ತಿದೆ. ಇದೇ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಅಂದಹಾಗೆ ಈ ವಿಚಾರಕ್ಕೆ ಕೆಲವರು ನಿರ್ದೇಶಕ ಸುಂದರ್ ಸಿ. ಪತ್ನಿ ನಟಿ ಖುಷ್ಬು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಆಕೆ ತಿರುಗೇಟು ನೀಡಿದ್ದಾರೆ.

ರಜನಿಕಾಂತ್- ಸುಂದರ್ ಸಿ. ಕಾಂಬಿನೇಷನ್ನಲ್ಲಿ ಬರಬೇಕಿದ್ದ ತಲೈವಾ 173 ಸಿನಿಮಾ ನಿಂತು ಹೋಗಲು ಕಾರಣ ಏನು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ನೆಟ್ಟಿಗರು ತಮ್ಮದೇ ಕೋನದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಸಿನಿಮಾ ಯಾಕೆ ನಿಂತಿರಬಹುದು, ಖುಷ್ಬು ಐಟಂ ಸಾಂಗ್ ಬೇಕು ಅಂತ ರಜನಿಕಾಂತ್ ಕೇಳಿರಬಹುದಾ? ಎಂದು ವ್ಯಂಗ್ಯವಾಗಿ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ. ಇದು ಖುಷ್ಬೂ ಗಮನಕ್ಕೆ ಬಂದಿದೆ.
ನೆಟ್ಟಿಗನ ಟ್ವೀಟ್ಗೆ ರಿಪ್ಲೇ ಮಾಡಿರುವ ನಟಿ ಖುಷ್ಬು "ಇಲ್ಲ, ನಿಮ್ಮ ಮನೆಯಲ್ಲಿ ಇರುವ ಯಾರನ್ನಾದರೂ ಐಟಂ ಸಾಂಗ್ಗೆ ಕುಣಿಸಬೇಕು ಎಂದುಕೊಂಡೆವು" ಅಂತ ತಿರುಗೇಟು ನೀಡಿದ್ದಾರೆ. ಮೇಡಂ ನೀವು ಇಂತಹವರಿಗೆಲ್ಲಾ ಯಾಕೆ ರಿಪ್ಲೇ ಮಾಡ್ತೀರಾ? ಇವರೆಲ್ಲಾ ಬೇಕೆಂದೇ ಈ ರೀತಿ ಕಾಮೆಂಟ್ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ, ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.
ನವೆಂಬರ್ 5ರಂದು ತಲೈವಾ 173 ಸಿನಿಮಾ ಘೋಷಣೆ ಆಗಿತ್ತು. ಬಹಳ ದಿನಗಳ ಬಳಿಕ ಒಂದು ಚಿತ್ರಕ್ಕೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕೈ ಜೋಡಿಸಿದ್ದರು. ಕಮಲ್ ನಿರ್ಮಾಣದ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ವಾರ ಕಳೆಯುವ ಮುನ್ನ ನಿರ್ದೇಶಕ ಸುಂದರ್ ಸಿ ಚಿತ್ರದಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ.
"ಅನಿರೀಕ್ಷಿತ ಮತ್ತು ಅನಿವಾರ್ಯ ಸಂದರ್ಭಗಳಿಂದಾಗಿ, ಪ್ರತಿಷ್ಠಿತ ತಲೈವರ್ 173 ಸಿನಿಮಾದಿಂದ ನಾನು ಹಿಂದೆ ಸರಿಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. "ದಂತಕಥೆಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ಸಿನಿಮಾ ನಿಜಕ್ಕೂ ನನಗೆ ಒಂದು ಕನಸು ನನಸಾದಂತೆ ಆಗಿತ್ತು. ಜೀವನದಲ್ಲಿ, ನಮ್ಮ ಕನಸುಗಳಿಂದ ಭಿನ್ನವಾಗಿದ್ದರೂ ಸಹ, ನಮಗಾಗಿ ನಿಗದಿಪಡಿಸಿದ ಮಾರ್ಗವನ್ನು ನಾವು ಅನುಸರಿಸಬೇಕಾದ ಕ್ಷಣಗಳಿವೆ. ಇವರಿಬ್ಬರ ಒಡನಾಟವು ಬಹಳ ಹಿಂದಿನದು. ನಾನು ಅವರನ್ನು ಯಾವಾಗಲೂ ಅತ್ಯುನ್ನತ ಗೌರವದಿಂದ ಕಾಣುತ್ತೇನೆ. ಕಳೆದ ಕೆಲವು ದಿನಗಳಿಂದ ನಾವು ಹಂಚಿಕೊಂಡ ವಿಶೇಷ ಕ್ಷಣಗಳನ್ನು ನಾನು ಶಾಶ್ವತವಾಗಿ ಪಾಲಿಸುತ್ತೇನೆ. ಅವರು ನನಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದ್ದಾರೆ. ಮುಂದೆ ಕೂಡ ಅವರ ಮಾರ್ಗದರ್ಶನ ಪಡೆಯುತ್ತೇನೆ" ಎಂದು ನಿರ್ದೇಶಕ ಸುಂದರ್ ಸಿ. ಪತ್ರದಲ್ಲಿ ತಿಳಿಸಿದ್ದಾರೆ.
ಸುಂದರ್ ಸಿ. ಹೇಳಿದ ಒನ್ಲೈನ್ ಸ್ಟೋರಿ ಕೇಳಿ ರಜನಿಕಾಂತ್, ಕಮಲ್ ಚಿತ್ರಕ್ಕೆ ಒಪ್ಪಿದ್ದರು. ಮುಂದುವರೆದಂತೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಹಾಗಾಗಿ ಈ ಸಿನಿಮಾ ಸಹವಾಸ ಬೇಡ ಎಂದು ನಿರ್ದೇಶಕರು ಈ ನಿರ್ಣಯ ಕೈಗೊಂಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ತಲೈವಾ ನಟನೆಯ 173ನೇ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಬಹುದು ಎನ್ನಲಾಗ್ತಿದೆ.


Click it and Unblock the Notifications











