ವಿಜಯ್ ವೈಯಕ್ತಿಕ ಜೀವನಕ್ಕೂ ಜನರಿಗೂ ಯಾವುದೇ ಸಂಬಂಧವಿಲ್ಲ; ಖುಷ್ಬೂ ಸುಂದರ್
ತಮಿಳು ನಟ ವಿಜಯ್, ಪತ್ನಿ ಸಂಗೀತಾ ಡಿವೋರ್ಸ್ ಪ್ರಕರಣದ ನಡುವೆ ನಟಿ ತ್ರಿಶಾ ಹೆಸರು ಕೇಳಿಬಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಏಕಾಏಕಿ ತ್ರಿಶಾ ಜೊತೆ ವಿಜಯ್ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದರು. ಕೆಲವರು ಅದು ಅವರ ವೈಯಕ್ತಿಕ ವಿಚಾರ ಬಿಡಿ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಸಾರ್ವಜನಿಕ ಜೀವನದಲ್ಲಿ ಇರುವವರು ಹೀಗೆ ಮಾಡಬಹುದಾ? ಎಂದು ಕೆಲವರು ಟೀಕಿಸುತ್ತಿದ್ದಾರೆ.
ತಮಿಳು ನಿರ್ದೇಶಕ, ನಟ ಸಮುದ್ರ ಖನಿ ಹಾಗೂ ನಟ, ನಿರ್ದೇಶಕ ಪಾರ್ತಿಬನ್ ಈ ಬಗ್ಗೆ ಪ್ರತಿಕ್ರಿಯಿಸಿ ಆಡಿದ್ದ ಮಾತುಗಳು ವೈರಲ್ ಆಗುತ್ತಿದೆ. ಟಿವಿಕೆ ಪಕ್ಷ ಸ್ಥಾಪಿಸಿ ರಾಜಕೀಯರಂಗಕ್ಕೆ ವಿಜಯ್ ಧುಮುಕಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಇಂತಹ ಸಮಯದಲ್ಲಿ ಪತ್ನಿ ಸಂಗೀತಾ ಡಿವೋರ್ಸ್ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿವಾದದ ಬಗ್ಗೆ ಹಿರಿಯ ನಟಿ, ತಮಿಳುನಾಡು ಬಿಜೆಪಿ ನಾಯಕಿ ಖುಷ್ಬು ಪ್ರತಿಕ್ರಿಯಿಸಿದ್ದಾರೆ.

ನಟಿ ಖುಷ್ಬೂ IANS ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ. ಇದು ಅವರ ವೈಯಕ್ತಿಕ ವಿಚಾರ, ಈ ಬಗ್ಗೆ ನಿಮಗೆಲ್ಲಾ ಯಾಕಿಷ್ಟು ಕುತೂಹಲ, ಜನರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ, ಇದನ್ನು ದೊಡ್ಡದು ಮಾಡುವುದು ಬೇಡ ಎಂದಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಹತ್ತರವಾಗ್ತಿದೆ. ವಿಜಯ್ ಕೂಡ ರಾಜಕೀಯರಂಗ ಪ್ರವೇಶಿಸಿದ್ದಾರೆ. ಇಂತಹ ಸಮಯಲ್ಲಿ ಹೀಗೆ ತ್ರಿಶಾ ಜೊತೆ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಈ ಬಗ್ಗೆ ಏನು ಹೇಳ್ತೀರಾ ಎನ್ನುವ ಪ್ರಶ್ನೆಗೆ "ಈ ಘಟನೆಗೂ ಜನರಿಗೂ ಏನು ಸಂಬಂಧ ಅಂತ ನನಗೆ ಅರ್ಥವಾಗುತ್ತಿಲ್ಲ. ಅದು ಅವರ ವೈಯಕ್ತಿಕ ಜೀವನ. ಒಂದು ವೇಳೆ ಅವರ ವೈಯಕ್ತಿಕ ಜೀವನ ಜನರ ಮೇಲೆ ಪರಿಣಾಮ ಬೀರುವಂತಿದ್ದರೆ, ನಾವು ಈ ಬಗ್ಗೆ ಮಾತನಾಡಬಹುದು. ವೈಯಕ್ತಿಕ ಜೀವನಕ್ಕೂ ಜನರಿಗೂ ಯಾವುದೇ ಸಂಬಂಧವಿಲ್ಲ ಎಂದಮೇಲೆ ಇದನ್ನೇಕೆ ದೊಡ್ಡ ವಿಷಯವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ? ಅವರು ತಮ್ಮ ಜೀವನವನ್ನು ನೋಡುತ್ತಾರೆ. ಜನರಿಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವಿವಾದದಿಂದ ವಿಜಯ್ ಜನಪ್ರಿಯತೆ ಮೇಲೆ ಪರಿಣಾಮ ಬೀರುತ್ತಾ ಎನ್ನುವ ಪ್ರಶ್ನೆಗೆ ಇಲ್ಲ ಎಂದು ಖುಷ್ಬೂ ಹೇಳಿದ್ದಾರೆ. "ಜನರಿಗೆ ಎಲ್ಲಾ ಗೊತ್ತು. ಯಾರಿಗೆ ವೋಟ್ ಹಾಕಬೇಕು ಎನ್ನುವ ಅರಿವು ಜನರಿಗಿದೆ. ಇದು ಯಾರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನನಗೆ ಅನ್ನಿಸಲ್ಲ. ವಿಜಯ್ ಕೂಡ ಒಬ್ಬ ಮನುಷ್ಯ. ಅವರು ನಾಯಕರಾಗಿದ್ದರೂ ಅಥವಾ ಇಲ್ಲದಿರಲಿ. ಅವರು ನಮ್ಮಂತೆಯೇ ಸಾಮಾನ್ಯ ಮನುಷ್ಯ. ಅವರಿಗೆ ಜನರ ವೈಯಕ್ತಿಕ ಜೀವನಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಖುಷ್ಬೂ ವಿವರಿಸಿದ್ದಾರೆ.
ವಿಜಯ್ ಹಾಗೂ ಖುಷ್ಬೂ ಎರಡು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. 'ಮಿನ್ಸಾರ ಕಣ್ಣ' ಎಂಬ ಚಿತ್ರದಲ್ಲಿ ಖುಷ್ಬೂ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 'ವಿಲ್ಲು' ಚಿತ್ರದ ಸ್ಪೆಷಲ್ ಸಾಂಗ್ನಲ್ಲಿ ದಳಪತಿ ಜೊತೆ ಹೆಜ್ಜೆ ಹಾಕಿದ್ದರು. ಸದ್ಯ ಸಿನಿಮಾ ಹಾಗೂ ರಾಜಕೀಯರಂಗದಲ್ಲಿ 'ರಣಧೀರ' ನಟಿ ಬ್ಯುಸಿಯಾಗಿದ್ದಾರೆ.
ವಿಜಯ್ ತಮ್ಮ ಸಹೋದರ ಎಂದು ಆಗಾಗ್ಗೆ ಖುಷ್ಬು ಹೇಳುತ್ತಿರುತ್ತಾರೆ. ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ರಾಜಕೀಯರಂಗ ಪ್ರವೇಶಿಸಿರುವ ಬಗ್ಗೆ ಖುಷ್ಬೂ ಸಂತಸ ವ್ಯಕ್ತಪಡಿಸಿದ್ದರು. ವಿಜಯ್ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. 30 ವರ್ಷಗಳ ಹಿಂದೆ ರಜನಿಕಾಂತ್ ಕ್ರೇಜ್ ಹೇಗಿತ್ತೋ ಈಗ ವಿಜಯ್ ಕ್ರೇಜ್ ಆ ರೀತಿ ಇದೆ. ಆದರೆ ವಿಜಯ್ ನೋಡಲು ಅಭಿಮಾನಿಗಳು ಸೇರಿದ ಮಾತ್ರಕ್ಕೆ ವೋಟ್ ಬೀಳುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಜನಪ್ರಿಯತೆ ವೋಟ್ ಆಗಿ ಪರಿವರ್ತನೆ ಆಗುವುದು ಕಷ್ಟ ಎನ್ನುವುದು ಈ ಹಿಂದೆ ಸಾಕಷ್ಟು ಬಾರಿ ನಾವು ನೋಡಿದ್ದೇವೆ ಎಂದಿದ್ದರು.


Click it and Unblock the Notifications











