ಕೆಲವರು ಡಿಎನ್ಎ ಸಾಬೀತುಪಡಿಸಲು ಹಠಕ್ಕೆ ಬಿದ್ದಿದ್ದಾರೆ ; ‘ಇಡ್ಲಿ ನಟಿ’ ಎಂದ ರವಿ ಮೋಹನ್ಗೆ ಖುಷ್ಬೂ ಖಡಕ್ ತಿರುಗೇಟು
ಸಂಸಾರ ಅಂದ ಮೇಲೆ ಅಲ್ಲಿ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ಗಂಡ-ಹೆಂಡತಿಯ ನಡುವೆ ಮೂರನೇ ವ್ಯಕ್ತಿ ಪ್ರವೇಶ ಆದರೆ, ಆ ಸುಂದರ ಸಂಸಾರ ಒಡೆದ ಹಾಲಾಗಲು ಹೆಚ್ಚಿನ ಸಮಯ ಬೇಕಾಗಲ್ಲ. ಇಂದು ನಾವು ಬದುಕುತ್ತಿರುವುದು 5G ಯುಗದಲ್ಲಿ ಅಲ್ಲ. ಬದಲಿಗೆ ಸೋಶಿಯಲ್ ಮೀಡಿಯಾ ಜಡ್ಜ್ಮೆಂಟ್ ಕಾಲದಲ್ಲಿ.
ಈ ಕಾಲದಲ್ಲಿ ಚಿತ್ರರಂಗದ ಧ್ರುವತಾರೆಯರ ವೈಯಕ್ತಿಕ ಬದುಕು ಬೀದಿ ರಂಪ ಆದರೆ ಸಾಕು ಹಲವರು ಸೈಬರ್ ದಾಳಿ ಮಾಡಲು ಮುಂದಾಗುತ್ತಾರೆ. ಯಾರದ್ದೋ ಸಂಸಾರ ಮುರಿದಿದ್ದಕ್ಕೆ, ಇನ್ಯಾರಿಗೋ ವಿಲನ್ ಪಟ್ಟ ಕಟ್ಟುತ್ತಾರೆ. ಸದ್ಯ ಇಂತಹದ್ದೇ ಸೈಬರ್ ಬುಲ್ಲಿಂಗ್ ವಿರುದ್ಧ ಹಿರಿಯ ನಟಿ ಖುಷ್ಭೂ ತಿರುಗಿ ಬಿದ್ದಿದ್ದಾರೆ.

ಹೌದು, ರವಿ ಮೋಹನ್ ಅಲಿಯಾಸ್ ಜಯಂ ರವಿ ಅವರ ದಾಂಪತ್ಯ ಕಲಹ ಬೀದಿಗೆ ಬಿದ್ದಿರುವುದು ಎಲ್ಲರಿಗೆ ಗೊತ್ತಿರುವುದೇ. ಕೆಲವರ ಪ್ರಕಾರ ಇವರ ದಾಂಪತ್ಯ ಮುರಿದು ಬೀಳಲು ಗಾಯಕಿ ಕೆನಿಶಾ ಕಾರಣ. ಈ ಹಿನ್ನೆಲೆ ಮೊನ್ನೆ ಮೊನ್ನೆಯವರೆಗೆ ಕೆನಿಶಾ ಅವರನ್ನು ಕುಂತಲ್ಲಿ ನಿಂತಲ್ಲಿ ಹಲವರು ನಿಂದಿಸುತ್ತಿದ್ದರು. ತಮ್ಮ ಮೇಲಾಗುತ್ತಿರುವ ಈ ಸೈಬರ್ ದಾಳಿಯಿಂದ ಹೈರಾಣಾದ ಕೆನಿಶಾ ಕೊನೆಗೆ ಊರನ್ನೇ ಬಿಟ್ಟರು.
ಇದರಿಂದ ನೊಂದು ಬೆಂದು ಹೋದ ಜಯಂ ರವಿ ನಿನ್ನೆ (ಮೇ 16) ಏಕಾಏಕಿ ಮಾಧ್ಯಮದವರ ಮುಂದೆ ಪ್ರತ್ಯಕ್ಷರಾದರು. ಮೊದಲಿಗೆ ತಮ್ಮ ಪತ್ನಿ ಆರತಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಜಯಂ ರವಿ ನನ್ನ ಮೌನ ನನ್ನ ದೌರ್ಬಲ್ಯವಲ್ಲ ಎಂದು ಹೇಳಿದರು. ಒಬ್ಬಳು ನಟಿ ಇದ್ದಾಳೆ ಅವಳಿಂದನೇ ನನ್ನ ಕುಟುಂಬ ಛಿದ್ರ ಛಿದ್ರವಾಯ್ತು ಎಂದು ಕಿಡಿ ಕಾರಿದರು.
ಹೆಸರು ಹೇಳಿದರೆ ಕೇಸ್ ಆಗುತ್ತೆ ಅದಕ್ಕೆ ಇಡ್ಲಿ ನಟಿ ಎಂದುಕೊಳ್ಳೋಣ ಎಂದು ಹೇಳಿದ ಜಯಂ ರವಿ, ಮೂವರು ಹಿರಿಯ ನಟರು ಆಕೆಯ ಬಗ್ಗೆ ನನಗೆ ಹೇಳಿದ್ದರು, ನಮ್ಮ ಕುಟುಂಬ ಹಾಳುಮಾಡಲು ಯತ್ನಿಸಿದವಳು ಆಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನನ್ನ ಜೀವನದ ಬಗ್ಗೆ ಮಾತಾಡ್ತಾಳೆ. ಬೇರೆ ಏನಾದರೂ ವಿಷಯ ಮಾತಾಡಿದ್ರೆ, ತಾನೊಬ್ಬಳು ಫೆಮಿನಿಸ್ಟ್ ಅಂತ ಹೇಳ್ಕೊಳ್ತಾಳೆ ಎಂದು ಗುಡುಗಿದ್ದ ಜಯಂ ರವಿ, ಇದೆಂಥಾ ನಾಟಕ..? ನನ್ನ ಬಗ್ಗೆ ಮಾತಾಡೋಕೆ ನಿನಗೆ ಯಾವ ಯೋಗ್ಯತೆ ಇದೆ..? ಇಂಥಾ ಮನುಷ್ಯರು ಇರ್ತಾರಾ..? ಎಂದು ಪ್ರಶ್ನೆ ಮಾಡಿದ್ದರು. ನನಗಿಂತ ಚೆನ್ನಾಗಿ ಆಕ್ಟಿಂಗ್ ಮಾಡ್ತೀಯಾ..? ಮಾಡು, ಬೇಕಿದ್ದರೆ ನಾನೇ ನಿನ್ನ ಕಾಲಿಗೆ ಬೀಳ್ತೀನಿ. ಅವಾರ್ಡ್ ಬೇಕಾ..? ತಗೋ ಎಂದು ಪತ್ರಿಕಾಗೋಷ್ಠಿಯಲ್ಲಿ ಧಗಧಗಿಸಿದ್ದರು.

ಜಯಂ ರವಿ ಆಡಿದ ಈ ಮಾತುಗಳನ್ನು ಕೇಳಿ ಹಲವರು ಆ 'ಇಡ್ಲಿ ನಟಿ' ಬೇರೆ ಯಾರು ಅಲ್ಲ ಬದಲಿಗೆ ಖುಷ್ಬೂ ಎನ್ನುವ ತೀರ್ಮಾನಕ್ಕೆ ಬಂದರು. ಮೊನ್ನೆ ಮೊನ್ನೆಯವರೆಗೆ ಗಾಯಕಿ ಕೆನಿಶಾ ಹಿಂದೆ ಬಿದ್ದಿದ್ದವರೆಲ್ಲರೂ ಖುಷ್ಬೂ ಕಡೆ ತಿರುಗಿದರು.
ರೊಚ್ಚಿಗೆದ್ದ ಜಯಂ ರವಿ ಅಭಿಮಾನಿಗಳು ಖುಷ್ಬೂ ಅವರನ್ನು ಗುರಿಯಾಗಿಸಿಕೊಂಡು ಕಾಮೆಂಟ್ ಮಾಡತೊಡಗಿದರು. ಖುಷ್ಬೂ ವಿರುದ್ದ ಪೋಸ್ಟ್ ಮಾಡತೊಡಗಿದರು. ಇದಕ್ಕೆ ಪೂರಕವಾಗಿ ಖುಷ್ಬೂ ಹೆಸರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕೂಡ ಆಗಿತ್ತು.
ತಮ್ಮ ಮೇಲಾಗುತ್ತಿರುವ ಈ ಸೈಬರ್ ದಾಳಿಗೆ ಮತ್ತು ಜಯಂ ರವಿ ಆಡಿದ ಇಡ್ಲಿ ಮಾತಿಗೆ ಖುಷ್ಬೂ ಈಗ ತಿರುಗೇಟು ಕೊಟ್ಟಿದ್ಧಾರೆ. ''ಕೆಲವರು ತಮ್ಮ ಡಿಎನ್ಎಯನ್ನು ಸಾಬೀತು ಮಾಡುವ ಗರಿಷ್ಠ ಪ್ರಯತ್ನ ಮಾಡುತ್ತಾರೆ. ನಾನು ಸರಿ ಎಂದು ಸಾಬೀತು ಪಡಿಸಿದ್ದಕ್ಕೆ ಧನ್ಯವಾದಗಳು'' ಎಂದಿದ್ಧಾರೆ.
ಅಂದ್ಹಾಗೇ ಇದಕ್ಕೂ ಮೊದಲು ಕೆನಿಶಾ ಊರು ಬಿಡುವ ಮೊದಲು, ವಿಡಿಯೋ ಮೂಲಕ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದರು. ಬಿಕ್ಕಿ ಬಿಕ್ಕಿ ಅತ್ತಿದ್ದರು.ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿದ್ದಾಗ ರವಿ ಮೋಹನ್ ನನ್ನ ಹತ್ತಿರ ಚಿಕಿತ್ಸೆ ಪಡೆಯಲು ಬಂದಿದ್ದರು ಎಂದು ಹೇಳಿದ್ದ, ಕೆನಿಶಾ ಹೀಗೆ ಪರಿಚಯವಾದ ನಾವು ಇಬ್ಬರು ಆ ನಂತರ ಸ್ನೇಹಿತರಾದೆವು ಎಂದು ಹೇಳಿದ್ದರು.
ಅವರ ಕುಟುಂಬದವರ ಜೊತೆ ಸೇರಿ ಬದುಕಿ ಬಾಳುವಂತೆ ನಾನು ಹಲವಾರು ಬಾರಿ ಅವರಿಗೆ ತಿಳಿ ಹೇಳಿದ್ದೇನೆ ಎಂದು ಹೇಳಿದ್ದ ಕೆನಿಶಾ, ರವಿ ಮೋಹನ್ ಅವರೇನು ಸಣ್ಣ ಮಗುವಲ್ಲ, ಯಾರ ಜೊತೆ ಮಾತನಾಡಬೇಕು, ಜೀವನ ಹೇಗೆ ನಡೆಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು ಎಂದ್ದಿದ್ದರು. ಕೆನಿಶಾ ಅವರ ಈ ಮಾತುಗಳಿಗೆ ಕೂಡ ಖೂಷ್ಭೂ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರು. ಮೋಸದ ಪ್ರಪಂಚವೇ ಅವರಿಗೆ ಮನೆ ಇದ್ದ ಹಾಗೇ ಎಂದು ಹೇಳಿದ್ದರು.
ಖುಷ್ಬೂ ಟ್ವೀಟ್
ಬೇರೆಯವರದ್ದನ್ನು ಆಸೆಪಡಬೇಡಿ ಎನ್ನುವ ಬೈಬಲ್ ಮಾತುಗಳನ್ನು ನಂಬುತ್ತೇವೆ ಅಂತ ಹೇಳಿಕೊಳ್ಳುವವರು ಒಂದು ಮಾತು ಚೆನ್ನಾಗಿ ತಿಳ್ಕೋಬೇಕು. ನಿಮ್ಮ ನಡತೆಯೇ ನಿಮ್ಮ ಅಸಲಿ ಮುಖವನ್ನು ತೋರಿಸುತ್ತದೆ. ನಂಬಿಕೆ ದ್ರೋಹ ಮಾಡಿ, ಕಳ್ಳತನ ಮಾಡುವವರನ್ನು ನೋಡಿ ನನಗೇನು ಆಶ್ಚರ್ಯ ಆಗುತ್ತಿಲ್ಲ. ಯಾಕಂದ್ರೆ, ವಂಚನೆ ಮಾಡುವುದು ತಮ್ಮ ಡಿಎನ್ಎಯಲ್ಲೇ ಇದೆ ಅನ್ನೋದನ್ನ ಅವರು ಸಾಬೀತು ಮಾಡಿದ್ದಾರೆ. ಮೋಸದ ಪ್ರಪಂಚವೇ ಅವರಿಗೆ ಮನೆ ಇದ್ದ ಹಾಗೆ.
ತನ್ನ ಅಸಲಿ ಬಣ್ಣವನ್ನು ಜಗತ್ತಿಗೆ ತೋರಿಸಿ, ತಾನು ಎಲ್ಲಿಂದ ಬಂದವನು ಎಂಬುದನ್ನು ಸಾಬೀತು ಮಾಡಿದ ಆ ಒಬ್ಬ ಅಮಾನವೀಯ ವ್ಯಕ್ತಿಯನ್ನು ಬೈದು ಯಾವುದೇ ಪ್ರಯೋಜನವಿಲ್ಲ. ಆದರೆ, ಇಂತಹವರಿಗೆ ಮಾತನಾಡಲು ವೇದಿಕೆ ಮಾಡಿಕೊಟ್ಟು, ತೆರೆಯ ಮರೆಯಲ್ಲಿ ಅಡಗಿ ಕುಳಿತಿರುವ ಆ ಇನ್ನೊಬ್ಬ ವ್ಯಕ್ತಿಯನ್ನು ನಾನು ಬ್ಲೇಮ್ ಮಾಡುತ್ತೇನೆ. ನೀವು ಮಾಡುವ ಆಯ್ಕೆಗಳಿಗೆ ತಕ್ಕ ಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ ಮತ್ತು ನೀವು ಕೊಡುವ ಗಾಯಗಳು ಜೀವನಪೂರ್ತಿ ಉಳಿಯುತ್ತವೆ ಎಂಬುದನ್ನು ನೆನಪಿಡಿ.ಒಂದನ್ನು ನೆನಪಿನಲ್ಲಿಡಿ, ಬೈಬಲ್ ಹೇಳುವಂತೆ ಯಾರ ಮನಸ್ಸು ಮತ್ತು ಹೃದಯ ಶುದ್ಧವಾಗಿರುತ್ತದೆಯೋ, ಅವರು ಮಾತ್ರ ದೇವರಿಗೆ ಹತ್ತಿರವಾಗಿರುತ್ತಾರೆ ಎಂದು ಖುಷ್ಬೂ ಬರೆದುಕೊಂಡಿದ್ದರು.
ಖುಷ್ಬೂ ಅವರ ಈ ಪೋಸ್ಟ್ ಈಗ ಮತ್ತೊಂದು ಹಂತದ ಸೋಶಿಯಲ್ ಮೀಡಿಯಾ ಸಮರಕ್ಕೆ ನಾಂದಿ ಹಾಡಿದೆ. ಖುಷ್ಬೂ ಅವರ ಈ ಪೋಸ್ಟ್ಗೆ ಜಯಂ ರವಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications