ಪತ್ನಿ ಪ್ರೇಮಲತಾ ಜೊತೆ ನಟ ವಿಜಯ್ಕಾಂತ್ ಎಂದೆಂದಿಗೂ ಶಾಶ್ವತ!; ಪ್ರೀತಿಯಿಂದ ಆಕೆ ಮಾಡಿದ್ದೇನು?
ತಮಿಳು ನಟ, ರಾಜಕೀಯ ಮುಖಂಡ ವಿಜಯಕಾಂತ್ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದರು. ಹಲವು ವರ್ಷಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ನ್ಯೂಮೋನಿಯಾ ಮತ್ತು ಕೊರೊನಾ ಸೋಂಕಿನಿಂದಾಗಿ ಚೆನ್ನೈನ ಎಂಐಒಟಿ ಇಂಟರ್ನ್ಯಾಷನಲ್ ಆಸ್ಪತ್ರೆಯಲ್ಲಿ ಅಭಿಮಾನಿಗಳ ಪ್ರೀತಿಯ ಕ್ಯಾಪ್ಟನ್ ಕೊನೆಯುಸಿರೆಳೆದಿದ್ದರು. ಪತ್ನಿ ಪ್ರೇಮಲತಾ ಮತ್ತು ಇಬ್ಬರು ಪುತ್ರರನ್ನು ಅವರು ಅಗಲಿದ್ದರು.
150ಕ್ಕೂ ಅಧಿಕ ಸಿನಿಮಾಗಳಲ್ಲಿ ವಿಜಯಕಾಂತ್ ನಟಿಸಿದ್ದರು. ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ ಸ್ಥಾಪಿಸಿ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಡಿಸೆಂಬರ್ 28ರಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ ವಿಜಯಕಾಂತ್ ಅಂತ್ಯಕ್ರಿಯೆ ಕೊಯಂಬೆಡು ಡಿಎಂಡಿಕೆ ಪ್ರಧಾನ ಕಾರ್ಯಾಲಯದಲ್ಲಿ ನಡೆದಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತ್ತು.

ದೊಡ್ಡಮಟ್ಟದಲ್ಲಿ ಅಭಿಮಾನಿಗಳು ವಿಜಯಕಾಂತ್ ಅಂತಿಮ ದರ್ಶನ ಪಡೆದಿದ್ದರು. ವಿಜಯಕಾಂತ್ ಅಗಲಿ ತಿಂಗಳು ಕಳೆದಿದೆ. ಅವರ ಸಮಾಧಿಗೆ ಅಭಿಮಾನಿಗಳು, ರಾಜಕೀಯ ಮುಖಂಡರು, ಸಿನಿತಾರೆಯರು ಭೇಟಿ ನೀಡಿ ನಮನ ಸಲ್ಲಿಸುತ್ತಲೇ ಇದ್ದಾರೆ. ತಮಿಳುನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಅನ್ನದಾನ ಕೂಡ ನಡೀತಿದೆ.
ವಿಜಯಕಾಂತ್ ಅಗಲಿಕೆ ತಮಿಳುನಾಡಿಗೆ ಆಘಾತ ತಂದಿತ್ತು. ಕುಟುಂಬ ಸದಸ್ಯರು ಇನ್ನು ನೋವಿನಲ್ಲೇ ದಿನ ದೂಡುತ್ತಿದ್ದಾರೆ. ಇದೀಗ ವಿಜಯಕಾಂತ್ ಮೇಲಿನ ಪ್ರೀತಿಗಾಗಿ ಪತ್ನಿ ಪ್ರೇಮಲತಾ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಬಲಗೈ ಮೇಲೆ ಪತಿಯ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದು ವಿಡಿಯೋ ವೈರಲ್ ಆಗ್ತಿದೆ.
ಇನ್ನು ವಿಜಯಕಾಂತ್ ಅಗಲಿಕೆಗೂ ಮುನ್ನ ಪತ್ನಿ ಪ್ರೇಮಲತಾ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದರು. 18, ಮಾರ್ಚ್ 1969ರಲ್ಲಿ ಚೆನ್ನೈನಲ್ಲಿ ಹುಟ್ಟಿ ಬೆಳೆದ ಪ್ರೇಮಲತಾ 1990ರಲ್ಲಿ ವಿಜಯಕಾಂತ್ ಕೈಹಿಡಿದಿದ್ದರು. ಅವರದ್ದು ಅಂರೇಜ್ಡ್ ಮ್ಯಾರೇಜ್ ಆಗಿತ್ತು.

ಪ್ರೇಮಲತಾ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಸ್ಟೋರಿ ಬಿಚ್ಚಿಟ್ಟಿದ್ದರು. "ವಿಜಯಕಾಂತ್ ಅವರನ್ನು ನಮ್ಮ ಅಪ್ಪ ಮೊದಲ ಬಾರಿ ನೋಡಿದಾಗಲೇ ಈತನೇ ನನ್ನ ಮಗಳಿಗೆ ಸರಿಯಾದ ವರ ಎಂದು ನಿರ್ಧರಿಬಿಟ್ಟಿದ್ದರು. ಅವರ ಆಟಿಟ್ಯೂಡ್ ತಂದೆಗೆ ಇಷ್ಟವಾಗಿತ್ತು. ನನ್ನನ್ನು ಮೊದಲಿಗೆ ನೋಡಲು ಬಂದಾಗ ಬಹಳ ಸಿಂಪಲ್ ಆಗಿ ಬಂದಿದ್ದರು. ಹೀರೊ ಎನ್ನುವ ಹಮ್ಮುಬಿಮ್ಮು ಇರಲಿಲ್ಲ. ಇದು ನಮ್ಮ ತಂದೆ ಇಷ್ಟವಾಗಿತ್ತು" ಎಂದಿದ್ದರು.
ಐದಾರು ವರ್ಷಗಳಿಂದ ವಿಜಯಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ತಮ್ಮ ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಕಷ್ಟವಾಗಿತ್ತು. ಡಿಸೆಂಬರ್ ಮೊದಲ ವಾರದಲ್ಲೇ ವಿಜಯಕಾಂತ್ ಆರೋಗ್ಯ ಸ್ಥತಿ ಗಂಭೀರವಾಗಿತ್ತು. ಬಳಿಕ ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ಡಿಸೆಂಬರ್ ಕೊನೆ ವಾರದಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾದ ವಿಜಯಕಾಂತ್ ಚೇತರಿಸಿಕೊಳ್ಳಲೇ ಇಲ್ಲ.
ಟ್ರೆಂಡ್ ಸೆಟ್ಟರ್ ಸಿನಿಮಾಗಳಿಂದ ವಿಜಯಕಾಂತ್ ಕಾಲಿವುಡ್ನಲ್ಲಿ ಮಿಂಚಿದರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ವಿಜಯರಾಜ್ ಎಂಜಿಆರ್ ಅಭಿಮಾನಿ ಆಗಿದ್ದರು. ಎಂಜಿಆರ್ ಪ್ರೇರಣೆಯಿಂದಲೇ ಚಿತ್ರರಂಗಕ್ಕೆ ಬಂದು ವಿಜಯಕಾಂತ್ ಸಕ್ಸಸ್ ಕಂಡರು. ಹಲವು ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ನಾಯಕನಾಗಿ ಸಿನಿರಸಿಕರಿಗೆ ಹತ್ತಿರವಾಗಿದ್ದರು. 'ಕ್ಯಾಪ್ಟನ್' ಸಿನಿಮಾ ಹಿಟ್ ಆಗಿ ಅಭಿಮಾನಿಗಳು ಅದೇ ಹೆಸರಿನಿಂದ ಅವರನ್ನು ಪ್ರೀತಿಯಿಂದ ಕರೆಯುವಂತಾಯಿತು.
ವಿಜಯಕಾಂತ್ ಜೊತೆ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ತೆರೆ ಹಂಚಿಕೊಂಡಿದ್ದರು. 'ವಲ್ಲರಸು' ತಮಿಳು ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚೆನ್ನೈ ಆಕ್ಟಿಂಗ್ ಸ್ಕೂಲ್ನಲ್ಲಿ ಕಲಿಯುತ್ತಿದ್ದ ದರ್ಶನ್ ಅದೇ ಪರಿಚಯದಿಂದ ತಮಿಳು ಸಿನಿಮಾದಲ್ಲಿ ನಟಿಸುವಂತಾಯಿತು. ಅದಾಗಿ ಎರಡು ವರ್ಷಕ್ಕೆ 'ಮೆಜೆಸ್ಟಿಕ್' ಚಿತ್ರದ ಮೂಲಕ ಹೀರೊ ಆಗಿ ಗೆದ್ದರು.


Click it and Unblock the Notifications











