ತಂದೆಗೆ ತಕ್ಕ ಮಗಳು ; ಸರಳವಾಗಿ ಮದುವೆಯಾದ ತಮಿಳು ನಟ ವಿವೇಕ್ ಮಗಳು, ಉಡುಗೊರೆಯಾಗಿ ಕೊಟ್ಟಿದ್ದೇನು..?
ಒಂದು ಕಾಲದಲ್ಲಿ ಹೊಟ್ಟೆಪಾಡಿಗಾಗಿ ಟೆಲಿಫೋನ್ ಆಪರೇಟರ್ ಕೆಲಸ ಮಾಡಿಕೊಂಡು, ಕೆ. ಬಾಲಚಂದರ್ ಅವರ ಕೈಗೆ ಸಿಕ್ಕ ನಂತರ ಬಣ್ಣದ ಬದುಕಿಗೆ ಬಂದಿದ್ದವರು ವಿವೇಕ್. ತನ್ನ ಅಭಿನಯದ ಮೂಲಕವೇ ಹಾಸ್ಯದ ರಸದೌತಣ ಬಡಿಸಿದ್ದ ವಿವೇಕ್ ಅವರ ಮಗಳು ತೇಜಸ್ವಿನಿಯ ಮದುವೆ ಗುರುವಾರ ಸರಳವಾಗಿ ನೆರವೇರಿದೆ.ಚೆನ್ನೈನ ವಿರುಗಂಬಾಕ್ಕಂ ಪದ್ಮಾವತಿ ನಗರದಲ್ಲಿನ ತಮ್ಮ ನಿವಾಸದಲ್ಲಿ, ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ತೇಜಸ್ವಿನಿ ಭರತ್ ಜೊತೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಇನ್ನೂ ವಿವೇಕ್ ಕೇವಲ ನಟ ಮಾತ್ರ ಆಗಿರಲಿಲ್ಲ. ಪ್ರಗತಿಪರ ಚಿಂತನೆಗಳನ್ನ ಹಾಸ್ಯದ ಮೂಲಕ ಹೇಳುತ್ತಿದ್ದರು ವಿವೇಕ್. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಆತ್ಮೀಯರಾಗಿದ್ದ ಪದ್ಮಶ್ರೀ ಪುರಸ್ಕ್ರತ ನಟ ವಿವೇಕ್ ಹಸಿರನ್ನು ಬೆಳೆಸಬೇಕು, ಜನರಲ್ಲಿ ಆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕಲಾಂ ಅವರು ಹೇಳುತ್ತಿದ್ದ ಮಾತನ್ನ ಗಂಭೀರವಾಗಿ ತೆಗೆದುಕೊಂಡು ತಮ್ಮ ಮಗನ ಹೆಸರಲ್ಲಿ ಸಾಯಿಪ್ರಸನ್ನ ಟ್ರಸ್ಟ್ ಸ್ಥಾಪಿಸಿ ಅದರಲ್ಲಿ 'ಗ್ರೀನ್ ಕಲಾಂ' ಎನ್ನುವ ಯೋಜನೆ ರೂಪಿಸಿದ್ದರು. ಗಿಡ ನೆಡಲು ಶುರು ಮಾಡಿದ್ದರು. ಅನೇಕ ಹಾನಿಗೊಳಗಾದ ಮರಗಳನ್ನು ಕೂಡ ರಕ್ಷಿಸಿದರು ವಿವೇಕ್.

ಜಗತ್ತಿನಲ್ಲಿರುವ ಪರಿಸರ ಪ್ರೇಮಿಗಳ ಬಗ್ಗೆ ತಿಳಿದುಕೊಂಡಿದ್ದ ವಿವೇಕ್, ಒಂದು ವರದಿಯ ಪ್ರಕಾರ ತಮ್ಮ ಜೀವಿತಾವಧಿಯಲ್ಲಿ ಮೂವತ್ತು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡಿಸಿದ್ದರು. ಕೇವಲ ನಟನೆಯಿಂದ ಅಷ್ಟೇ ಅಲ್ಲದೇ ತಮ್ಮ ಈ ಪರಿಸರ ಸಂರಕ್ಷಣೆಯಿಂದನೇ ತಮಿಳುನಾಡಿನಲ್ಲಷ್ಟೇ ಅಲ್ಲದೇ ಭಾರತದೆಲ್ಲೆಡೆ ಮನೆ ಮಾತಾಗಿದ್ದರು. ಆದರೆ ಈಗ ವಿವೇಕ್ ನಮ್ಮೊಡನೆ ಇಲ್ಲ. ಆದರೆ ಅವರ ನೆನಪು ಹಾಗೂ ಅವರ ಆಶಯ ಇನ್ನೂ ಜೀವಂತವಾಗಿಯೇ ಇದೆ. ಹೀಗಾಗಿಯೇ ಸರಳವಾಗಿ ಮದುವೆಯ ಬಂಧನಕ್ಕೊಳಗಾದ ವಿವೇಕ್ ಅವರ ಪುತ್ರಿ ತೇಜಸ್ವಿನಿ ಮದುವೆಯ ನಂತರ ತಮ್ಮ ತಂದೆ ನೆನಪಿಗಾಗಿ ಸಸಿಗಳನ್ನ ನೆಟ್ಟಿದ್ದಾರೆ. ತಮ್ಮನ್ನ ಹರಸಿ ಹಾರೈಸಲು ಬಂದವರಿಗೆ ಗಿಡಗಳನ್ನೂ ವಿತರಿಸಿದ್ದಾರೆ.
2021ರಲ್ಲಿ ಕೊನೆಯುಸಿರೆಳೆದ ವಿವೇಕ್..!
ಕೊರೊನಾದಿಂದ ಜಗತ್ತು ಕಂಗಾಲಾದ ಸಮಯದಲ್ಲಿ, ಕೊರೊನಾ ಲಸಿಕೆ ಹಾಕಿಸಿಕೊಂಡು ಬಂದು, ಲಸಿಕೆಯ ಬಗ್ಗೆ ಸಂದೇಶವನ್ನೂ ನೀಡಿದ್ದ ವಿವೇಕ್ ಅವರಿಗೆ ಆ ನಂತರ ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗಿತ್ತು. ತಕ್ಷಣ ಟ್ರೀಟ್ ಮೆಂಟ್ ಕೊಡಿಸಲಾಗಿತ್ತಾದರೂ ಹೃದಯ ಶ್ರೀಮಂತಿಕೆಯನ್ನ ಹೊಂದಿದ್ದ ನಟನ ಹೃದಯ ಚಿಕಿತ್ಸೆಗೂ ಸ್ಪಂದಿಸದೆ ಸ್ತಬ್ದವಾಗಿತ್ತು. ಇವತ್ತಿಗೂ ಕೂಡ ವಿವೇಕ್ ಅವರ ಹಠಾತ್ ನಿಧನಕ್ಕೆ ಕೊರೊನಾ ಲಸಿಕೆ ಕಾರಣಾನಾ ಅನ್ನುವ ಚರ್ಚೆ ನಡೆಯುತ್ತಾನೇ ಇದೆ.
ಮಗನನ್ನು ಕಳೆದುಕೊಂಡು ಕುಗ್ಗಿ ಹೋಗಿದ್ದರು ವಿವೇಕ್..!
ಮೂಢ ನಂಬಿಕೆಗಳ ವಿರುದ್ಧ, ಪರಿಸರ ಸ್ನೇಹಿ, ಮನುಷ್ಯ ಸಂಬಂಧಗಳ ವಿಚಾರಗಳನ್ನ ತಮ್ಮದೇ ಶೈಲಿಯಲ್ಲಿ ಹೇಳುತ್ತಿದ್ದ ವಿವೇಕ್ 2016ರಲ್ಲಿ ತಮ್ಮ ಮಗನನ್ನ ಕಳೆದುಕೊಂಡಿದ್ದರು. ಚೆನ್ನೈ ಮಹಾನಗರಪಾಲಿಕೆಯೊಟ್ಟಿಗೆ ಸೇರಿ ಡೆಂಗ್ಯೂ ತಡೆಗಟ್ಟಲು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾಗಲೇ, ಹದಿನೈದು ವರ್ಷದ ತಮ್ಮ ಪುತ್ರನನ್ನ ಅದೇ ಡೆಂಗ್ಯೂನಿಂದ ಕಳೆದುಕೊಂಡಿದ್ದರು ವಿವೇಕ್. ಇಬ್ಬರು ಹೆಣ್ಣು ಮಕ್ಕಳ ನಂತರ ಹುಟ್ಟಿದ್ದ ಮಗನನ್ನ ಕಳೆದುಕೊಂಡ ವಿವೇಕ್ ನಂತರ ನೋವನ್ನು ನುಂಗಿಕೊಂಡೇ ಎದ್ದು ನಿಲ್ಲುವ ಪ್ರಯತ್ನ ಪಟ್ಟಿದ್ದರು. ಮಗನ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಗಿಡಗಳನ್ನೆಲ್ಲ ನೆಡುತ್ತಾ ಬಂದಿದ್ದರು

ಈಗ ವಿವೇಕ್ ಇಲ್ಲ ಆದರೆ ಅವರಲ್ಲಿದ್ದ ಪರಿಸರ ಕಾಳಜಿ ಅವರ ಪುತ್ರಿಯರಲ್ಲಿಯೂ ಇದೆ. ತಂದೆಯ ಆಸೆಯಂತೆ ಗಿಡಗಳನ್ನ ನೆಡುವ ಹಾಗೂ ಕೊಡುವ ಕೆಲಸವನ್ನ ವಿವೇಕ್ ಮಗಳು ಮಾಡುತ್ತಿದ್ದಾರೆ. ವಿವೇಕ್ ಮಗಳ ಈ ಪರಿಸರ ಪ್ರೇಮದಿಂದ ಅನೇಕರಿಗೆ ವಿವೇಕ್ ನೆನಪು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ವಿವೇಕ್ ಪುತ್ರಿ ತೇಜಸ್ವಿನಿಗೆ ಅನೇಕರು ಭಾವನಾತ್ಮಕವಾಗಿ ಶುಭಾಶಯಗಳನ್ನೂ ಕೋರುತ್ತಿದ್ದಾರೆ.


Click it and Unblock the Notifications











