ತಲೈವಾ 170ನೇ ಚಿತ್ರ ಘೋಷಣೆ: 'ಕಾಂತಾರ' ಪ್ರೀಕ್ವೆಲ್ನಲ್ಲಿ ರಜನಿ ನಟಿಸೋ ಕಥೆ ಏನಾಯ್ತು?
ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ 170ನೇ ಸಿನಿಮಾ ಘೋಷಣೆಯಾಗಿದೆ. ಚಿತ್ರಕ್ಕೆ ನಿರ್ಮಾಪಕರು, ನಿರ್ದೇಶಕರು ಕೂಡ ಫಿಕ್ಸ್ ಆಗಿದ್ದಾರೆ. ಸದ್ಯ 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ನಂತರ 'ಲಾಲ್ ಸಲಾಂ' ಎನ್ನುವ ಚಿತ್ರದ ವಿಶೇಷ ಪಾತ್ರದಲ್ಲಿ ತಲೈವಾ ಬಣ್ಣ ಹಚ್ಚಲಿದ್ದಾರೆ. ಆ ನಂತರ ತಲೈವಾ 170ನೇ ಸಿನಿಮಾ ಶುರುವಾಗಲಿದೆ.
ರಾಜಕೀಯರಂಗಕ್ಕೆ ಬರೋದಾಗಿ ಹೇಳಿದ್ದ ರಜನಿಕಾಂತ್ ಕೊನೆ ಕ್ಷಣದಲ್ಲಿ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಯಸ್ಸು 70 ದಾಟಿದ್ರು ತಲೈವಾ ಎನರ್ಜಿ, ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಕೆಲ ದಿನಗಳ ಹಿಂದೆಯೇ ತಲೈವಾ ಲೈಕಾ ಪ್ರೊಡಕ್ಷನ್ ಬ್ಯಾನರ್ ಜೊತೆ 2 ಚಿತ್ರಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರಲ್ಲಿ ಒಂದು ಸಿನಿಮಾ ಈಗಾಗಲೇ ಸೆಟ್ಟೇರಿದೆ. ಮತ್ತೊಂದು ಸಿನಿಮಾ ಈಗ ಘೋಷಣೆ ಆಗಿದೆ.

ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದ ಮುಖ್ಯ ಪಾತ್ರದಲ್ಲಿ ರಜನಿಕಾಂತ್ ನಟಿಸಲಿದ್ದಾರೆ. ಆ ಚಿತ್ರವನ್ನು ಕೂಡ ಲೈಕಾ ಸಂಸ್ಥೆ ನಿರ್ಮಾಣ ಮಾಡಲಿದೆ. ಇದೀಗ ತಲೈವಾ ನಟನೆಯ 170ನೇ ಚಿತ್ರವನ್ನು ಕೂಡ ತಮ್ಮದೇ ಬ್ಯಾನರ್ನಲ್ಲಿ ನಿರ್ಮಿಸುವುದಾಗಿ ಲೈಕಾ ಸಂಸ್ಥೆ ಘೋಷಿಸಿದೆ. ಲೈಕಾ ಸಂಸ್ಥೆಯ ಚೇರ್ಮನ್, ನಿರ್ಮಾಪಕ ಸುಭಾಕರನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ವಿಚಾರವನ್ನು ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ಚಿತ್ರವನ್ನು ಟಿಜೆ ಜ್ಞಾನವೇಲ್ ಕಟ್ಟಿಕೊಡಲಿದ್ದಾರೆ.
ಟಿಜೆ ಜ್ಞಾನವೇಲ್ ನಿರ್ದೇಶನದ 'ಜೈಭೀಮ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಸೂರ್ಯ ಹೀರೊ ಆಗಿ ನಟಿಸಿದ್ದರು. ಈ ಲೀಗಲ್ ಡ್ರಾಮಾ ಸಿನಿಮಾ ಸಿನಿರಸಿಕರ ಮನಗೆದ್ದಿತ್ತು. ಇದೀಹ ಜ್ಞಾನವೇಲ್ ಕಥೆಯನ್ನು ರಜನಿಕಾಂತ್ ಒಪ್ಪಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಲಾಲ್ ಸಲಾಂ' ಹಾಗೂ 170ನೇ ಸೇರಿ ಭಾರೀ ಮೊತ್ತದ ಸಂಭಾವನೆಯನ್ನು ರಜನಿಕಾಂತ್ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಇದೇ ಸಂಸ್ಥೆ '2.O' ಹಾಗೂ 'ದರ್ಬಾರ್' ಚಿತ್ರಗಳಲ್ಲಿ ತಲೈವಾ ನಟಿಸಿದ್ದರು.

ಇತ್ತೀಚೆಗೆ ನಟ ರಜನಿಕಾಂತ್ ಕನ್ನಡದ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆದು ಸನ್ಮಾನಿಸಿ ಕೆಲ ಹೊತ್ತು ಚರ್ಚಿಸಿದ್ದರು. ಇದನ್ನೆಲ್ಲಾ ನೋಡಿ 'ಕಾಂತಾರ' ಪ್ರೀಕ್ವೆಲ್ನಲ್ಲಿ ತಲೈವಾ ಕೂಡ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಯಿತು. 170ನೇ ಸಿನಿಮಾ 'ಕಾಂತಾರ' ಪ್ರೀಕ್ವೆಲ್ ಎನ್ನುವಮಟ್ಟಿಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಯಿತು. ಆದರೆ ಅಂತಹ ಯಾವುದೇ ಚರ್ಚೆ ಈವರೆಗೆ ಆಗಿಲ್ಲ ಎಂದು ಹೊಂಬಾಳೆ ಸಂಸ್ಥೆ ಮೂಲಗಳಿಂದ ಫಿಲ್ಮಿಬೀಟ್ಗೆ ಮಾಹಿತಿ ಸಿಕ್ಕಿತ್ತು.

ಸದ್ಯ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿದೆ. ಚಿತ್ರದಲ್ಲಿ ಕನ್ನಡ ನಟ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೂಡ ನಟಿಸ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು. ರಜನಿ- ಶಿವಣ್ಣ ಇಬ್ಬರು ಭಾಗವಹಿಸಿದ್ದರು. ನಂತರ ರಜನಿಕಾಂತ್ ಬೆಂಗಳೂರಿಗೆ ಬಂದಿದ್ದರು. ಶಿವರಾತ್ರಿ ಹಬ್ಬವನ್ನು ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆಚರಿಸಿದ್ದರು. ಚಿಕ್ಕಬಳ್ಳಾಪುರದ ಇಶಾ ಫೌಂಡೇಷನ್ಗೂ ಭೇಟಿ ನೀಡಿದ್ದರು. ಸಹೋದರನ ಹುಟ್ಟುಹಬ್ಬವನ್ನು ಆಚರಿಸಿದ್ದರು.


Click it and Unblock the Notifications











