ನಟರಿಗೆ ಅಪಮಾನ: ಹೈಕೋರ್ಟ್ ನ್ಯಾಯಮೂರ್ತಿ ಆದೇಶಕ್ಕೆ ವಿಜಯ್ ತಗಾದೆ
ನಟ ವಿಜಯ್ ವಿದೇಶದಿಂದ ಆಮದು ಮಾಡಿಕೊಂಡ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ತೆರಿಗೆ ವಿನಾಯಿತಿ ನೀಡಬೇಕೆಂಬ ನ್ಯಾಯಾಲಯಕ್ಕೆ ಹಾಕಿಕೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳ ಕಟುವಾದ ಮಾತುಗಳನ್ನಾಡಿದ್ದುದು ಕೆಲವು ದಿನಗಳ ಹಿಂದಷ್ಟೆ ವರದಿ ಆಗಿತ್ತು.
ಆದರೆ ವಿಜಯ್ ವಿರುದ್ಧ ಕಟುವಾದ ಮಾತುಗಳನ್ನಾಡಿ ಒಂದು ಲಕ್ಷ ದಂಡ ಹಾಕಿದ್ದ ನ್ಯಾಯಮೂರ್ತಿಗಳು ನೀಡಿದ್ದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ನ ದ್ವಿಸದಸ್ಯ ಪೀಠವು ತಡೆ ನೀಡಿದೆ.
ನಟ ವಿಜಯ್ ಕಾರಿನ ಸಂಪೂರ್ಣ ತೆರಿಗೆ ಪಾವತಿಸಲು ತಯಾರಾಗಿದ್ದಾರೆ. ಆದರೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯ್ ವಿರುದ್ಧ ಕಟುವಾದ ಮಾತುಗಳನ್ನಾಡಿದ್ದಾರೆ ಜೊತೆಗೆ ನಟರ ಸಮುದಾಯವನ್ನು ಅಪಮಾನಿಸುವ ರೀತಿಯ ಉಲ್ಲೇಖಗಳನ್ನು ಮಾಡಿದ್ದಾರೆ ಎಂದು ವಿಜಯ್ ಪರ ವಕೀಲರು ಮದ್ರಾಸ್ ಹೈಕೋರ್ಟ್ನಲ್ಲಿ ವಾದಿಸಿದ್ದಾರೆ.

ವಿಜಯ್ ಪರ ವಕೀಲರ ವಾದ ಆಲಿಸಿದ ದ್ವಿಸದಸ್ಯ ಪೀಠದ ಎಂ.ದೊರೆಸ್ವಾಮಿ ಮತ್ತು ಹೇಮಲತಾ ಈ ಹಿಂದಿನ ಆದೇಶಕ್ಕೆ ತಡೆ ನೀಡಿದ್ದಾರೆ.
ವಿಜಯ್ 2012 ರಲ್ಲಿ ಇಂಗ್ಲೆಂಡ್ನಿಂದ ರಾಲ್ಸ್ ರಾಯ್ಸ್ ಗೋಸ್ಟ್ ಕಾರು ಆಮದು ಮಾಡಿಕೊಂಡಿದ್ದರು. ಮೂಲ ಬೆಲೆಯ 20% ತೆರಿಗೆಯನ್ನು ವಿಜಯ್ ಪಾವತಿಸಬೇಕಾಗುತ್ತಿತ್ತು. ಹಾಗಾಗಿ ತೆರಿಗೆ ವಿನಾಯಿತಿ ನೀಡುವಂತೆ ವಿಜಯ್ ಮನವಿ ಮಾಡಿದ್ದರು.
ಬಾಕಿ ಉಳಿದಿದ್ದ ಆ ಪ್ರಕರಣದ ವಿಚಾರಣೆಯನ್ನು ಇತ್ತೀಚೆಗಷ್ಟೆ ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ, ತೆರಿಗೆ ವಿನಾಯಿತಿ ಕೇಳಿದ್ದಕ್ಕೆ ವಿಜಯ್ಗೆ 1 ಲಕ್ಷ ದಂಡ ವಿಧಿಸಿದ್ದರು. ಅಲ್ಲದೆ, 'ರೀಲ್ ಹೀರೊಗಳು ರಿಯಲ್ ಲೈಫ್ನಲ್ಲಿ ಹೀರೋಗಳಂತೆ ವರ್ತಿಸಲಿ' ಎಂದು ಕಟುವಾಗಿ ಮಾತನಾಡಿದ್ದರು. ವಿಜಯ್ ಸಲ್ಲಿಸಿರುವ ಅಫಿಡಿವಿಟ್ನಲ್ಲಿ ತಮ್ಮ ಉದ್ಯೋಗ ನಮೂದು ಮಾಡದೇ ಇರುವುದಕ್ಕೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
''ತಮಿಳುನಾಡಿನಲ್ಲಿ ಸಿನಿಮಾ ನಟರು ರಾಜ್ಯ ಆಳುವ ನಾಯಕರಾಗಿ ಹೊರಹೊಮ್ಮಿದ್ದಾರೆ ಹಾಗಾಗಿ ಅವರನ್ನು ಜನರು ಅನುಸರಿಸುತ್ತಾರೆ. ಹಾಗಾಗಿ ಅವರು ರೀಲ್ ಹೀರೋಗಳಾಗಿ ಮಾತ್ರವೇ ಉಳಿಯದೇ ನಿಜ ಜೀವನದ ಹೀರೋಗಳಾಗಿ ವರ್ತಿಸಬೇಕು'' ಎಂದಿದ್ದರು. ವಿಜಯ್ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಈ ರೀತಿಯ ಮಾತುಗಳನ್ನಾಡಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.


Click it and Unblock the Notifications











