ವಿಶಾಲ್ ವಿರುದ್ಧ ದಾವೆ ಹೂಡಿದ್ದ ನಿರ್ಮಾಣ ಸಂಸ್ಥೆಗೆ ಹಿನ್ನಡೆ: ದಂಡ ವಿಧಿಸಿದ ನ್ಯಾಯಾಲಯ
ತಮಿಳು ನಟ ವಿಶಾಲ್ ವಿರುದ್ಧ ಪ್ರಖ್ಯಾತ ನಿರ್ಮಾಣ ಸಂಸ್ಥೆಯೊಂದು ದಾವೆ ಹೂಡಿ, ವಿಶಾಲ್ರ ಮುಂಬರುವ ಸಿನಿಮಾಗಳು ಬಿಡುಗಡೆ ಆಗದಂತೆ ತಡೆ ಹಿಡಿಯಬೇಕು ಮತ್ತು ನಿರ್ಮಾಣ ಸಂಸ್ಥೆ ಕೋಟ್ಯಂತರ ಹಣ ನಷ್ಟ ಪರಿಹಾರ ನೀಡಬೇಕು ಎಂದು ಕೋರಿತ್ತು. ಆದರೆ ನಿರ್ಮಾಣ ಸಂಸ್ಥೆಗೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಿದೆ.
ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿರುವ ಲೈಕಾ ನಟ ವಿಶಾಲ್ ವಿರುದ್ಧ ದಾವೆ ಹೂಡಿತ್ತು. ವಿಶಾಲ್ 30 ಕೋಟಿ ರುಪಾಯಿ ಸಾಲವನ್ನು ಪ್ರೊಡಕ್ಷನ್ ಹೌಸ್ಗೆ ಮರುಪಾವತಿ ಮಾಡುವಂತೆ ನ್ಯಾಯಾಲಯ ಸೂಚಿಸಬೇಕು ಎಂದು ಮನವಿ ಮಾಡಿತ್ತು. ಆದರೆ ಲೈಕಾ ಪ್ರೊಡಕ್ಷನ್ನ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ ಅಲ್ಲದೆ ವಿಶಾಲ್ಗೆ ಐದು ಲಕ್ಷ ದಂಡ ಕಟ್ಟಿಕೊಡಬೇಕೆಂದು ಸಹ ಆದೇಶಿಸಿದೆ.
2016 ರಲ್ಲಿ ವಿಶಾಲ್ ಅನ್ಬುಚೆಳಿಯನ್ ಅವರಿಂದ 15 ಕೋಟಿ ಮೊತ್ತದ ಸಾಲ ಪಡೆದಿದ್ದ ಆ ಸಾಲಕ್ಕೆ ಬಡ್ಡಿ ಸೇರಿ ಬೆಳೆದು 21.60 ಕೋಟಿಯಾಗಿತ್ತು. ಆಗ ಮಧ್ಯ ಪ್ರವೇಶಿಸಿದ ಲೈಕಾ ಪ್ರೊಡಕ್ಷನ್, ನಾವು ಅನ್ಬುಚೆಳಿಯನ್ ಸಾಲ ತೀರಿಸುತ್ತೇವೆ, ನೀವು ನಮಗೆ ಒಟ್ಟು ಸೇರಿ 30 ಕೋಟಿ ವಾಪಸ್ ಮಾಡು ಅಲ್ಲಿಯವರೆಗೆ ನಿನ್ನ ಸಿನಿಮಾಗಳಲ್ಲಿ ನಮಗೂ ಹಕ್ಕಿರುತ್ತದೆ'' ಎಂದಿತ್ತು.

'ತುಪ್ಪರಿವಾಳನ್ 2' ಸಿನಿಮಾ ಬಿಡುಗಡೆ ತಡವಾಗಿದೆ
ಇದಕ್ಕೆ ವಿಶಾಲ್ ಒಪ್ಪಿಕೊಂಡು ತಮ್ಮ 'ತುಪ್ಪರಿವಾಳನ್-2' ಸಿನಿಮಾ ಬಿಡುಗಡೆ ಆದ ಕೂಡಲೇ ಸಾಲ ತೀರಿಸುವುದಾಗಿ ಹೇಳಿದ್ದರು. ಆದರೆ ಕೊರೊನಾ ಕಾರಣದಿಂದ 'ತುಪ್ಪರಿವಾಳನ್ 2' ಇನ್ನೂ ಬಿಡುಗಡೆ ಆಗಿಲ್ಲ. ಅದಕ್ಕೆ ಮುನ್ನ 'ಚಕ್ರ' ಸಿನಿಮಾ ಬಿಡುಗಡೆ ಆಯಿತು. ಈ ಸಮಯ 'ಚಕ್ರ' ಸಿನಿಮಾದ ಲಾಭವನ್ನು ತಮಗೆ ನೀಡಬೇಕು ಎಂದು ಲೈಕಾ ಪ್ರೊಡೊಕ್ಷನ್ ಹೌಸ್ ಕೇಳಿದಾಗ ವಿಶಾಲ್ ಅದಕ್ಕೆ ಒಲ್ಲೆ ಎಂದಿದ್ದಾರೆ. ಹೀಗಾಗಿ ಲೈಕಾ ಪ್ರೊಡಕ್ಷನ್ಸ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಐದು ಲಕ್ಷ ದಂಡ ಕಟ್ಟುವಂತೆ ಸೂಚನೆ
ಆದರೆ ಲೈಕಾ ಪ್ರೊಡಕ್ಷನ್ ಅರ್ಜಿಯನ್ನು ವಜಾ ಮಾಡಿರುವ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಜಯಚಂದ್ರನ್, ''ಲೈಕಾ ಹಾಕಿರುವ ಅರ್ಜಿಯಲ್ಲಿ ಕೆಲವು ಸುಳ್ಳುಗಳಿವೆ. ವಿಶಾಲ್ ಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂಬುದು ಸುಳ್ಳು. ಅಲ್ಲದೆ ದುರುದ್ದೇಶಪೂರ್ವಕವಾಗಿ ಲೈಕಾ ದಾವೆ ಹೂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ'' ಎಂದೂ ಅವರು ಹೇಳಿದ್ದಾರೆ. ಆದರೆ ಇದರ ಜೊತೆಗೆ, ಲೈಕಾ ಪ್ರೊಡಕ್ಷನ್ಸ್ ತಮ್ಮ ಮುಂದಿನ ಅಫಿಡವಿಟ್ ಸಲ್ಲಿಸುವವರೆಗೆ ವಿಶಾಲ್ ತಮ್ಮ 'ಚಕ್ರ' ಸಿನಿಮಾದ 50% ಲಾಭವನ್ನು ಮೀಸಲು ಇಡಬೇಕಾಗಿಯೂ ಆದೇಶದಲ್ಲಿ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸತ್ಯಕ್ಕೆ ಜಯವಾಗಿದೆ ಎಂದ ವಿಶಾಲ್
ಆದೇಶ ಹೊರಬೀಳುತ್ತಿದ್ದಂತೆ ಟ್ವಿಟ್ಟರ್ನಲ್ಲಿ ಸಂದೇಶ ಪ್ರಕಟಿಸಿರುವ ವಿಶಾಲ್, ''ನನ್ನ ಹಾಗೂ 'ಚಕ್ರ' ಸಿನಿಮಾದ ವಿರುದ್ಧ ಲೈಕಾ ಪ್ರೊಡಕ್ಷನ್ ಹೌಸ್ನಿಂದ ಹೂಡಲಾಗಿದ್ದ ಸುಳ್ಳು ಪ್ರಕರಣವನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಅಲ್ಲದೆ ಸುಳ್ಳು ಪ್ರಕರಣ ದಾಖಲಿಸಿದ್ದಕ್ಕೆ ನನಗೆ ಐದು ಲಕ್ಷ ದಂಡ ವಿಧಿಸುವಂತೆ ಸೂಚಿಸಿದೆ. ಸತ್ಯಕ್ಕೆ ಸದಾ ಜಯ ಆಗಿಯೇ ತೀರುತ್ತದೆ ಎಂಬ ನಂಬಿಕೆ ನನಗೆ ಮೊದಲಿನಿಂದಲೂ ಇತ್ತು'' ಎಂದಿದ್ದಾರೆ. ಲೈಕಾ ಆರ್ಟ್ಸ್ ವಿಶಾಲ್ ಮೇಲೆ ಮಾತ್ರವೇ ಅಲ್ಲದೆ ಜನಪ್ರಿಯ ನಿರ್ದೇಶಕ ಶಂಕರ್ ವಿರುದ್ಧವೂ ದಾವೆ ಹೂಡಿತ್ತು, ಆ ಪ್ರಕರಣದಲ್ಲಿಯೂ ಶಂಕರ್ಗೆ ಮೇಲುಗೈ ಆಯಿತು.

ಪ್ರಕರಣ ದಾಖಲಿಸಿರುವ ಟ್ರಿಡೆಂಟ್ ಆರ್ಟ್ಸ್ ಸಂಸ್ಥೆ
ವಿಶಾಲ್ ವಿರುದ್ಧ 'ಆಕ್ಷನ್' ಸಿನಿಮಾಕ್ಕೆ ಸಂಬಂಧಿಸಿದಂತೆಯೂ ಪ್ರಕರಣ ದಾಖಲಾಗಿದೆ. 'ಆಕ್ಷನ್' ಸಿನಿಮಾದ ನಿರ್ಮಾಣ ಸಂಸ್ಥೆ ಟ್ರಿಡೆಂಟ್ ಆರ್ಟ್ಸ್ ದಾವೆ ಹೂಡಿದ್ದು ಸಿನಿಮಾದಲ್ಲಿ ಆಗಿರುವ ನಷ್ಟದಲ್ಲಿ ವಿಶಾಲ್ ಪಾಲು ಸಹ ಇದ್ದು ನಷ್ಟವನ್ನು ವಿಶಾಲ್ ತುಂಬಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ವಿಶಾಲ್ ಹಾಗೂ ತಮನ್ನಾ ನಟನೆಯ 'ಆಕ್ಷನ್' ಸಿನಿಮಾ 2019ರಲ್ಲಿ ಬಿಡುಗಡೆ ಆಗಿ ಇನ್ನಿಲ್ಲದಂತೆ ಸೋತಿತ್ತು. ಹಾಗಾಗಿ ಒಪ್ಪಂದದಂತೆ ನಷ್ಟದ ಭಾಗವನ್ನು ವಿಶಾಲ್ ತುಂಬಿಕೊಡಬೇಕು ಎಂದು ಟ್ರಿಡೆಂಟ್ ಆರ್ಟ್ಸ್ ಮನವಿ ಮಾಡಿದೆ.


Click it and Unblock the Notifications











