ತೆರಿಗೆ ವಿನಾಯಿತಿ ಕೋರಿ ಸೂರ್ಯ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್
ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಮತ್ತು ಧನುಷ್ ತಮ್ಮ ಐಷಾರಾಮಿ ಕಾರುಗಳಿಗೆ ತೆರಿಗೆ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ನಟ ಸೂರ್ಯ ಸಲ್ಲಿಸಿದ ಅರ್ಜಿಯನ್ನು ಮಡ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
2007-2008 ಮತ್ತು 2008 -2009 ಆರ್ಥಿಕ ವರ್ಷದ ಆದಾಯ ತೆರಿಗೆ ವಿಚಾರವಾಗಿ 2010ರಲ್ಲಿ ಆದಾಯ ತೆರಿಗೆ ಇಲಾಖೆ ಸೂರ್ಯನ ಆಸ್ತಿ ಮೇಲೆ ದಾಳಿ ನಡೆಸಿ 2011 ತೆರಿಗೆ ಪಾವತಿಸುವಂತೆ ಆದೇಶಿಸಿತ್ತು. 2007-08 ಮತ್ತು 2008-09ರ ಸಾಲಿಗೆ 3 ಕೋಟಿ 11 ಲಕ್ಷ 96 ಸಾವಿರ ರೂಪಾಯಿ ತೆರಿಗೆ ಪಾವತಿಸಬೇಕೆಂದು ಐಟಿ ಇಲಾಖೆಯೂ 2011ರಲ್ಲಿ ಸೂರ್ಯನಿಗೆ ಆದೇಶಿಸಿತ್ತು.
ಆದರೆ ನಟ ಸೂರ್ಯ ಆದಾಯ ತೆರಿಗೆ ವಿನಾಯಿತಿ ಕೋರಿ 2018ರಲ್ಲಿ ಸೂರ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಈ ಪ್ರಕರಣ ವಿಚಾರಣೆಗೆ ಬಂದಿದ್ದು ನ್ಯಾಯಾಧೀಶ ಎಂ. ಸುಬ್ರಮಣ್ಯಂ ನಟ ಸೂರ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಐಟಿ ಇಲಾಖೆಯು ವಿನಂತಿಸಿದ ಹೆಚ್ಚುವರಿ ಬಡ್ಡಿಯನ್ನು ಮರು ಪಾವತಿಸಲು ಸೂರ್ಯ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿ ತೆರಿಗೆ ಪಾವತಿಸುವಂತೆ ಆದೇಶ ನೀಡಿದೆ.

ಆದಾಯ ತೆರಿಗೆ ಮೌಲ್ಯಮಾಪನ ಪ್ರಕ್ರಿಯೆಗೆ ನಟ ಸೂರ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಸೂರ್ಯ ಬಡ್ಡಿ ಕಡಿತಕ್ಕೆ ಅರ್ಹರಲ್ಲ ಎಂದು ಆದಾಯ ತೆರಿಗೆ ಇಲಾಖೆ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿತ್ತು. ಪ್ರಕರಣವನ್ನು ಇಲಾಖೆಯ ಪರವಾಗಿ ತೀರ್ಪು ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ 2ಡಿ ಎಂಟಟೈನ್ ಮೆಂಟ್ ಸಿಇಒ ರಾಜೇಸ್ಕರ್ ಪಾಂಡಿಯನ್ ಪ್ರತಿಕ್ರಿಯೆ ನೀಡಿದ್ದು, "ತೆರಿಗೆ ಮತ್ತು ಬಡ್ಡಿಯನ್ನು ಸಂಪೂರ್ಣ ಸಹಕಾರದೊಂದಿಗೆ ಪಾವತಿಸಲಾಗಿದೆ. ನಮ್ಮ ಕಡೆಯಿಂದ ಯಾವುದೇ ಬಾಕಿ ಇಲ್ಲ" ಎಂದು ಹೇಳಿದ್ದಾರೆ.
2010ರಲ್ಲಿ ಆದಾಯ ತೆರಿಗೆ ಇಲಾಖೆ ನಟ ಸೂರ್ಯ ಮತ್ತು ಅವರ ಆಪ್ತರ ನಿವಾಸದ ಮೇಲೆ ದಿಢೀರ್ ದಾಳಿ ತಡೆದಿತ್ತು. ಐಟಿ ಅಧಿಕಾರಿಗಳು ನಟ ಸೂರ್ಯ ಅವರ ನಿವಾಸ, ಬೋಟ್ ಕ್ಲಬ್ ಬಂಗಲೆ ಮತ್ತು ವಿವಿಧ ಕಚೇರಿಗಳು ಮತ್ತು ಸೂರ್ಯ ಆಪ್ತರ ಸಂಬಂಧಿಕರ ನಿವಾಸದ ಮೇಲೆ ದಾಳಿ ನಡೆಸಿದ್ದರು.
ಇನ್ನು ಇತ್ತೀಚಿಗಷ್ಟೆ ನಟ ವಿಜಯ್ ಕಾರಿನ ತೆರಿಗೆ ವಿಚಾರವಾಗಿ ಸುದ್ದಿಯಾಗಿದ್ದರು. ಕೆಲವು ವರ್ಷಗಳ ಹಿಂದೆ ವಿಜಯ್ ವಿದೇಶದಲ್ಲಿ ಖರೀದಿಸಿ ಭಾರತಕ್ಕೆ ತರಿಸಿದ್ದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ತೆರಿಗೆ ಮನ್ನಾ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಂಡಿದ್ದರು.
ಆದರೆ ವಿಜಯ್ ಹಾಕಿದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ಕೆಂಡಾಮಂಡಲವಾಗಿ ವಿಜಯ್ಗೆ ಖಾರವಾಗಿಯೇ ತಪರಾಕಿ ಹಾಕಿದರು. ಜೊತೆಗೆ ದಂಡವನ್ನೂ ವಿಧಿಸಿದ್ದರು. ಇದಕ್ಕೆ ವಿಜಯ್ ಪರ ವಕೀಲರು ಅಸಮಾಧಾನದ ಪ್ರತಿಕ್ರಿಯೆ ನೀಡಿದ್ದರು. ಆದರೆ ಈಗ ವಿಜಯ್ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದು ಬಾಕಿ ಇರುವ ಎಲ್ಲ ತೆರಿಗೆಯನ್ನು ಪಾವತಿಸಿದ್ದರು.
ವಿಜಯ್ ಬೆನ್ನಲ್ಲೇ ನಟ ಧನುಷ್ ಕೂಡ ತೆರಿಗೆ ವಿಚಾರವಾಗಿ ಸುದ್ದಿಯಾಗಿದ್ದರು. ವಿದೇಶದಿಂದ ಆಮದು ಮಾಡಿಕೊಂಡ ಕಾರಿಗೆ ತೆರಿಗೆ ವಿನಾಯಿತಿ ಕೇಳಿದ್ದಕ್ಕಾಗಿ ಧನುಷ್ ಗೆ ನ್ಯಾಯಾಲಯವು ಛೀಮಾರಿ ಹಾಕಿತ್ತು.
2015 ರಲ್ಲಿ ನಟ ಧನುಷ್ ವಿದೇಶಿದಿಂದ ದುಬಾರಿ ರೋಲ್ಸ್ ರಾಯ್ಸ್ ಕಾರನ್ನು ಆಮದು ಮಾಡಿಕೊಂಡಿದ್ದರು. ಅದಕ್ಕೆ ಹೇರಲಾಗುವ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಹೂಡಿದ್ದರು. ಇದೀಗ ಆ ಅರ್ಜಿಯು ವಿಚಾರಣೆಗೆ ಬಂದಿದ್ದು ಇತ್ತೀಚೆಗೆ ನಡೆದ ಕೆಲವು ಘಟನೆಗಳಿಂದ ಎಚ್ಚೆತ್ತುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಲು ಧನುಷ್ ಯತ್ನಿಸಿದ್ದಾರೆ. ಆದರೆ ಇದಕ್ಕೆ ಮದ್ರಾಸ್ ಹೈಕೋರ್ಟ್ ಒಪ್ಪಿಗೆ ನೀಡಿಲ್ಲ.


Click it and Unblock the Notifications











