ಚಿತ್ರಮಂದಿರದಲ್ಲಿ 100 ಪರ್ಸೆಂಟ್ ಆಸನ ಭರ್ತಿಗೆ ಮದ್ರಾಸ್ ಹೈ ಕೋರ್ಟ್ ನಿರಾಕರಣೆ
ಚಿತ್ರಮಂದಿರಗಳಲ್ಲಿ ಶೇಕಡಾ 100 ಆಸನ ಭರ್ತಿ ಮಾಡಿ ಪ್ರದರ್ಶನ ಮುಂದುವರಿಸಲು ತಮಿಳುನಾಡು ಸರ್ಕಾರ ಆದೇಶ ಜಾರಿ ಮಾಡಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮದ್ರಾಸ್ ಹೈ ಕೋರ್ಟ್ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು.
ಈ ಅರ್ಜಿ ವಿಚಾರಣೆ ಮಾಡಿದ ಮದ್ರಾಸ್ ನ್ಯಾಯಾಲಯ ''ಜನವರಿ 11ನೇ ತಾರೀಖಿನವರೆಗೂ ಚಿತ್ರಮಂದಿರದಲ್ಲಿ 50 ಪರ್ಸೆಂಟ್ ಮಾತ್ರ ಮುಂದುವರಿಸಿ'' ಎಂದು ಸೂಚನೆ ನೀಡಿದೆ.
ರಾಜ್ಯ ಸರ್ಕಾರದ ಆದೇಶದ ವಿರುದ್ಧ ಸಲ್ಲಿಕೆಯಾಗಿರುವ ಆಕ್ಷೇಪಣೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ''ನಾವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದ್ದು, ಅದು ಆರ್ಥಿಕ ವಿಚಾರಗಳ ಮೇಲಿನ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ'' ಎಂದು ಅಭಿಪ್ರಾಯಪಟ್ಟಿದೆ.

ಮದ್ರಾಸ್ ಹೈ ಕೋರ್ಟ್ನ ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್ ಮತ್ತು ಎಸ್ ಅನಂತಿ ಅವರಿದ್ದ ವಿಭಾಗೀಯ ಪೀಠವೂ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸದ್ಯಕ್ಕೆ ತಮಿಳುನಾಡು ರಾಜ್ಯ ಸರ್ಕಾರಕ್ಕೆ ತಾತ್ಕಾಲಿಕ ಹಿನ್ನಡೆ ಆಗಿದೆ.
ಚಿತ್ರಮಂದಿರಗಳಲ್ಲಿ ಜನವರಿ 13 ರಿಂದ 100 ಪರ್ಸೆಂಟ್ ಭರ್ತಿ ಮಾಡಿ ಪ್ರದರ್ಶನ ಮಾಡಲು ರಾಜ್ಯ ಸರ್ಕಾರ ಜನವರಿ 5 ರಂದು ಆದೇಶಿಸಿತ್ತು. ಈಗ ಕೋರ್ಟ್ ಜನವರಿ 11ರವರೆಗೂ ಯಥಾಸ್ಥಿತಿ ಮುಂದುವರಿಸುವಂತೆ ಸೂಚಿಸಿದೆ.
ಈ ಮಧ್ಯೆ ತಮಿಳುನಾಡು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದಿದ್ದು, ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಹೇಳಿತ್ತು. ವಿಪತ್ತು ನಿರ್ವಹಣೆ ಕಾಯ್ದೆ ಉಲ್ಲಂಘನೆ ಮಾಡಲಾಗುತ್ತಿದೆ, ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು ಎಂದು ತಿಳಿಸಿತ್ತು.

ಈ ಕೇಸ್ಗೆ ಸಂಬಂಧಿಸಿದಂತೆ ಜನವರಿ 11 ರಂದು ಮದ್ರಾಸ್ ಹೈ ಕೋರ್ಟ್ನಲ್ಲಿ ಮುಂದಿನ ವಿಚಾರಣೆ ನಡೆಯಲಿದ್ದು, 100 ರಷ್ಟು ಅವಕಾಶ ಸಿಗುತ್ತಾ ಇಲ್ಲವೋ ಎಂದು ಕಾದು ನೋಡಬೇಕಿದೆ. ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅವಕಾಶ ಸಿಕ್ಕಿರುವ ಹಿನ್ನೆಲೆ ತಮಿಳು ನಟ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಜನವರಿ 13 ರಂದು ತೆರೆಗೆ ಬರ್ತಿದೆ.


Click it and Unblock the Notifications











