ಕೇಸ್ ಹಾಕಬೇಕಿರುವುದು ತ್ರಿಶಾ, ನೀವಲ್ಲ!: ನಟ ಮನ್ಸೂರ್ ಅಲಿ ಖಾನ್ಗೆ ಛೀಮಾರಿ ಹಾಕಿದ ಮದ್ರಾಸ್ ಹೈಕೋರ್ಟ್
ಬಹುಭಾಷಾ ನಟಿ ತ್ರಿಶಾ ಮತ್ತು ತಮಿಳು ನಟ ಮನ್ಸೂರ್ ಅಲಿ ಖಾನ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಇಲ್ಲೂ ಕೂಡ ಮನ್ಸೂರ್ ಅಲಿ ಖಾನ್ ಅವರಿಗೆ ಮುಖಭಂಗವಾಗಿದೆ. ತ್ರಿಶಾ ವಿರುದ್ಧ ನಟ ಮನ್ಸೂರ್ ಅಲಿ ಖಾನ್ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಸೋಮವಾರ, ಡಿಸೆಂಬರ್ 11 ರಂದು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್, ಕೇಸ್ ಹಾಕಬೇಕಿದ್ದು ನೀವಲ್ಲ, ತ್ರಿಶಾ ನಿಮ್ಮ ವಿರುದ್ಧ ಮೊಕದ್ದಮೆ ಹೂಡಬೇಕಿತ್ತು ಎಂದು ಮನ್ಸೂರ್ ಅಲಿ ಖಾನ್ ಅವರಿಗೆ ಛೀಮಾರಿ ಹಾಕಿದೆ. ಇದು ಎರಡನೇ ಬಾರಿ ಮನ್ಸೂರ್ ಅಲಿ ಖಾನ್ ನ್ಯಾಯಾಲಯದಿಂದ ಟೀಕೆಗೆ ಒಳಗಾಗಿರುವುದು.

ಮತ್ತೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಮನ್ಸೂರ್ ಅಲಿ ಖಾನ್
ಮನ್ಸೂರ್ ಅಲಿ ಖಾನ್ ಅವರ ನಡೆಯನ್ನು ಮದ್ರಾಸ್ ಹೈಕೋರ್ಟ್ ಖಂಡಿಸಿದೆ. ನಟಿ ತ್ರಿಶಾ ಮತ್ತು ನಟ ಮನ್ಸೂರ್ ಅಲಿ ಖಾನ್ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಸೂಚನೆಯನ್ನು ನೀಡಿದೆ. ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಮನ್ಸೂರ್ ಅಲಿ ಖಾನ್ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಬೇಕು ಎಂದು ಆದೇಶ ನೀಡಿದೆ.
ಇದರ ಜೊತೆಗೆ ಸಾರ್ವಜನಿಕ ವ್ಯಕ್ತಿಗಳು ಸಾರ್ವಜನಿಕ ನಡವಳಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಬೇಕು ಎಂದು ನ್ಯಾಯಾಲಯ ಹೈಲೈಟ್ ಮಾಡಿದೆ. ಡಿಸೆಂಬರ್ 10 ರಂದು, ಹೈಕೋರ್ಟ್ ಮನ್ಸೂರ್ ಅವರ ಭಾಷಣಕ್ಕೆ ತರಾಟೆಗೆ ತೆಗೆದುಕೊಂಡಿದೆ. "ನೀವು ನಟರಾದಾಗ, ಯುವಕರು ನಿಮ್ಮನ್ನು ಮಾದರಿಯಾಗಿ ನೋಡುತ್ತಾರೆ. ನೀವು ಈ ರೀತಿ ಸಂಸ್ಕಾರಹೀನವಾಗಿ ವರ್ತಿಸುವುದು ಸರಿಯೇ?" ಎಂದು ಪ್ರಶ್ನಿಸಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ನಟನಿಗೆ ಸಲಹೆ ನೀಡುವಂತೆ ಮನ್ಸೂರ್ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.

ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆ
ನವೆಂಬರ್ನಲ್ಲಿ ಲಿಯೋ ಚಿತ್ರದ ಪ್ರಚಾರ ಸಂದರ್ಶನದಲ್ಲಿ ಮನ್ಸೂರ್ ಅಲಿ ಖಾನ್ ಮಾಡಿದ ಅಸಹ್ಯಕರ ಹೇಳಿಕೆಗಳಿಗೆ ಈ ಪ್ರಕರಣವು ಸಂಬಂಧಿಸಿದೆ. ಸಂದರ್ಶನದಲ್ಲಿ ಮನ್ಸೂರ್ ಅಲಿ ಖಾನ್ ಅವರು ವಿಜಯ್ ಮತ್ತು ತ್ರಿಶಾ ನಾಯಕಿಯಾಗಿ ನಟಿಸಿದ್ದ ಲಿಯೋ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು. ಸಿನಿಮಾದಲ್ಲಿ "ಅತ್ಯಾಚಾರದ ದೃಶ್ಯಗಳು" ಇಲ್ಲದಿದ್ದಕ್ಕಾಗಿ ನಾನು ನಿರಾಶೆಗೊಂಡಿದ್ದೇನೆ ಎಂದು ಹೇಳಿದ್ದರು.
ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ವ್ಯಕ್ತವಾಗಿತ್ತು. ನಟಿ, ಈಗ ರಾಜಕಾರಣಿಯಾಗಿರುವ ರೋಜಾ ಮತ್ತು ಖುಷ್ಬೂ ಅವರ ಬಗ್ಗೆಯೂ ಅವರು ಇದೇ ರೀತಿಯ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್, ಕಾರ್ತಿಕ್ ಸುಬ್ಬರಾಜ್, ಚಿನ್ಮಯಿ ಶ್ರೀಪಾದ, ಮಾಳವಿಕಾ ಮೋಹನನ್, ಮತ್ತು ಚಿರಂಜೀವಿ ಮುಂತಾದ ಚಲನಚಿತ್ರ ನಟರು ನಟಿಯರಿಗೆ ಬೆಂಬಲ ನೀಡಿದ್ದರು.
ಬಳಿಕ ಈ ವಿವಾದ ಕಾನೂನು ಸಮರವಾಗಿ ಬದಲಾಗಿತ್ತು. ಮನ್ಸೂರ್ ಅಲಿ ಖಾನ್ ಅವರಿಂದ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಯಿತು. ರಾಷ್ಟ್ರೀಯ ಮಹಿಳಾ ಆಯೋಗದ ಶಿಫಾರಸಿನ ಮೇರೆಗೆ ಚೆನ್ನೈನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಬಳಿಕ ನಟ, ತ್ರಿಶಾಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. ಇದಾದ ನಂತರ ತ್ರಿಶಾ ವಿರುದ್ಧ ಮಾನನಷ್ಟ ಮೊಕದಮೆ ಹೂಡಿದ್ದರು.


Click it and Unblock the Notifications











