Maharaja: ವಿಜಯ್ ಸೇತುಪತಿ 50ನೇ ಚಿತ್ರ 'ಮಹಾರಾಜ' ಫಸ್ಟ್ ಲುಕ್ ಬಿಡುಗಡೆ
ಬಾಲಿವುಡ್ ನಟ ಶಾರುಖ್ ಖಾನ್ ಅವರ ಜವಾನ್ ಸಿನಿಮಾದಲ್ಲಿ 'ಕಾಲಿ' ಆಗಿ ಅಬ್ಬರಿಸಿರುವ ನಟ ವಿಜಯ್ ಸೇತುಪತಿ ಅವರ 50ನೇ ಚಿತ್ರ ಘೋಷಣೆಯಾಗಿದೆ. ಚಿತ್ರಕ್ಕೆ 'ಮಹಾರಾಜ' ಎಂದು ಹೆಸರಿಡಲಾಗಿದ್ದು, ಚಿತ್ರಕ್ಕೆ ನಿರ್ದೇಶಕ ನಿಥಿಲನ್ ಆಕ್ಷನ್ ಕಟ್ ಹೇಳಲಿದ್ದಾರೆ.
ನಟ ವಿಜಯ್ ಸೇತುಪತಿ ಅವರ 50ನೇ ಚಿತ್ರ ಮಹಾರಾಜ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಭಾನುವಾರ ಚೆನ್ನೈನಲ್ಲಿ ನಡೆದ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ನಟ ವಿಜಯ್ ಸೇತುಪತಿ ತಮ್ಮ ಸಿನಿ ಜರ್ನಿ ನೆನೆದು ಭಾವುಕರಾಗಿದ್ದಾರೆ.

'ಮಹಾರಾಜ' ಪೋಸ್ಟರ್
ಮಹಾರಾಜ ಪೋಸ್ಟರ್ನಲ್ಲಿ ವಿಜಯ್ ಸೇತುಪತಿ ರಕ್ತದಿಂದ ತೊಯ್ದ ಶರ್ಟ್ ಮತ್ತು ಪ್ಯಾಂಟ್ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಪೊಲೀಸ್ ಠಾಣೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ನಟ ವಿಜಯ್ ಅವರ ಎಡ ಭಾಗದ ಕಿವಿಗೆ ಬ್ಯಾಂಡೆಜ್ ಹಾಕಲಾಗಿದೆ. ಗಂಭೀರವಾಗಿ ಕುಳಿತಿರುವ ವಿಜಯ್ ಕಡೆಗೆ ಪೊಲೀಸ್ ಅಧಿಕಾರಿಗಳು ಆತಂಕದಿಂದ ನೋಡುತ್ತಿರುವುದನ್ನು ಪೋಸ್ಟರ್ ಚಿತ್ರೀಸಿದೆ.
50ನೇ ಸಿನಿಮಾದ ನಿರೀಕ್ಷೆ ಇರಲಿಲ್ಲ!
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿಜಯ್ ಸೇತುಪತಿ "ನಿಮ್ಮ ಮೆಚ್ಚುಗೆ ಮತ್ತು ವಿಮರ್ಶೆಗಳಿಗೆ ಧನ್ಯವಾದಗಳು. 50 ನೇ ಸಿನಿಮಾದ ನಿರೀಕ್ಷೆಯಿರಲಿಲ್ಲ. ಇದೊಂದು ಮೈಲಿಗಲ್ಲಿನಂತಿದೆ. ನಾವು ಎಷ್ಟು ದೂರ ಬಂದಿದ್ದೇವೆ ಎಂಬುದೇ ನಮಗೆ ಭರವಸೆ ನೀಡುತ್ತದೆ. ಅಲ್ಲದೆ, ಇದು ಬಹಳಷ್ಟು ಅನುಭವ, ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ತನ್ನೊಳಗೆ ಸೇರಿಸಿಕೊಂಡಿದೆ. ನನಗೆ ಒಳ್ಳೆಯ ಅನುಭವ ನೀಡಿದ ಎಲ್ಲಾ ನಿರ್ದೇಶಕರು ಮತ್ತು ಕಲಾವಿದರಿಗೆ ಧನ್ಯವಾದಗಳು" ಎಂದಿದ್ದಾರೆ.
"ನಾನ್ ಮಹಾನ್ ಅಲ್ಲಾ ಚಿತ್ರದ ಡಬ್ಬಿಂಗ್ ಮುಗಿದ ನಂತರ, ಅರುಳದಾಸ್ ಅಣ್ಣನ್ ಮತ್ತು ನಾನು ಪರಸ್ಪರರ ದೂರವಾಣಿ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡೆವು. ಇದ್ದಕ್ಕಿದ್ದಂತೆ ಒಂದು ದಿನ ಎರಡು ಮಿಸ್ಡ್ ಕಾಲ್ಗಳು ಬಂದವು. ನಾನು ಮತ್ತೆ ಕರೆ ಮಾಡಿದಾಗ, ನಮ್ಮ ಸ್ನೇಹಿತ ಸೀನು ರಾಮಸಾಮಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಸಿನಿಮಾ ಮಾಡು ಎಂದು ಹೇಳಿದ್ದರು. ಆಗ ನನಗೂ ಅವನಿಗೂ ದೊಡ್ಡ ಸಂಬಂಧವಿರಲಿಲ್ಲ. ಆಮೇಲೆ ಹೋಗಿ ಸೀನು ರಾಮಸಾಮಿ ಸರ್ ಅವರನ್ನು ಭೇಟಿಯಾದೆ. ಈಗ ಈ ಹಂತ ತಲುಪಿದ್ದೇನೆ. ನಾನು ಇಲ್ಲಿ ಇರುವುದಕ್ಕೆ ಎರಡು ಕಾರಣಗಳಿವೆ. ತುಂಬಾ ಧನ್ಯವಾದಗಳು ಅರುಳದಾಸ್. ಧನ್ಯವಾದಗಳು ಸೀನು ಸರ್. ಈ ಕ್ಷಣಕ್ಕೆ ಧನ್ಯವಾದಗಳು" ಎಂದು ಭಾವುಕರಾಗಿ ಮಾತನಾಡಿದ್ದಾರೆ.

'ಮಹಾರಾಜ' ಸಿನಿಮಾ
ಮಹಾರಾಜ ಸಿನಿಮಾ ಬಗ್ಗೆ ಮಾತನಾಡಿದ ವಿಜಯ್ ಸೇತುಪತಿ, "ನಟ್ಟಿ ಸರ್, ಅರುಳದಾಸ್ ಅಣ್ಣ, ಸಿಂಗಂಬುಲಿ ಅಣ್ಣ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಅಭಿರಾಮಿ ಮತ್ತು ಮಮತಾ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ವಿರುಮಂಡಿಯಿಂದಲೂ ಅಭಿರಾಮಿ ಅವರ ಅಭಿಮಾನಿ. ಮಹಾರಾಜ ವಾಣಿಜ್ಯಿಕವಾಗಿಯೂ ಉತ್ತಮ ಚಿತ್ರ, ನಿರ್ದೇಶಕ ನಿಥಿಲನ್ ಅದನ್ನು ನಿರ್ಮಾಪಕರಿಗೆ ಎರಡು ಅಥವಾ ಮೂರು ಪಟ್ಟು ಲಾಭವನ್ನು ಗಳಿಸುವ ಚಿತ್ರ ಎಂದು ತಿಳಿಸಿದ್ದಾರೆ" ಎಂದು ಭರವಸೆ ನೀಡಿದ್ದಾರೆ.
ಮಹಾರಾಜ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನೂ ವಿಜಯ್ ನೆನಪಿಸಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ಅವರು ನಿರ್ದೇಶಕರಷ್ಟೇ ಅಲ್ಲ ಉತ್ತಮ ನಟರೂ ಹೌದು. ನಾನು ಫೋನ್ ಮಾಡಿದೆ. ಖಂಡಿತಾ ಮಾಡುತ್ತೇನೆ ಎಂದು ಹೇಳಿ ಬಂದು ನಟಿಸಿದ್ದಾರೆ" ಎಂದು ಹೇಳಿದ್ದಾರೆ.
ವಿಜಯ್ ಸೇತುಪತಿ ಇತ್ತೀಚೆಗೆ ಶಾರುಖ್ ಖಾನ್ ಅವರ ಜವಾನ್ ಚಿತ್ರದಲ್ಲಿ ಖಳನಾಯಕ ಕಾಲಿಯಾಗಿ ಮಿಂಚಿದ್ದಾರೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಚಿತ್ರ 300 ಕೋಟಿ ಕ್ಲಬ್ ಸೇರುವ ಹಂತದಲ್ಲಿದೆ.


Click it and Unblock the Notifications











