ನಿರ್ದೇಶಕ ಮಣಿರತ್ನಂಗೆ ಕೋವಿಡ್ ಲಕ್ಷಣ, ಆಸ್ಪತ್ರೆಗೆ ದಾಖಲು
ಜನಪ್ರಿಯ ತಮಿಳು ಸಿನಿಮಾ ನಿರ್ದೇಶಕ ಮಣಿರತ್ನಂ ಅವರಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಮಣಿರತ್ನಂ ಅವರಿಗೆ ಕೋವಿಡ್ ಲಕ್ಷ್ಣಗಳು ಕಾಣಿಸಿಕೊಂಡಿದ್ದರಿಂದ ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿಲ್ಲ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಮಣಿರತ್ನಂ ವಯಸ್ಸು, ಅವರ ದೇಹಾರೋಗ್ಯ ಗಮನಿಸಿ ಮುನ್ನೆಚ್ಚರಿಕೆಯಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸಾಧಾರಾಣವಾಗಿಯೇ ಇದೆ ಎಂದು ಕುಟುಂಬದ ಮೂಲಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿವೆ.

ಆರು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದಿರುವ ನಿರ್ದೇಶಕ ಮಣಿರತ್ನಂ ದೀರ್ಘ ಶೆಡ್ಯೂಲ್ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕಾರ್ಯವನ್ನು ಈಗಷ್ಟೆ ಮುಗಿಸಿದ್ದಾರೆ. ನಿರ್ದೇಶಕ 'ಪೊನ್ನಿಯನ್ ಸೆಲ್ವನ್' ಸಿನಿಮಾದ ಬಿಡುಗಡೆ ಮುಂದಿನ ತಿಂಗಳು ಆಗುತ್ತಿದ್ದು, ಸುದೀರ್ಘ ಅವಧಿಯಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ ಹಾಗೂ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಗೆ ಸಹ ದೀರ್ಘ ಸಮಯ ಹಿಡಿದಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ.
ಸಿನಿಮಾದ ಪ್ರಚಾರ ಶುರುವಾಗುವ ವೇಳೆಗೆ ಈಗ ಮಣಿರತ್ನಂ ಆಸ್ಪತ್ರೆ ಸೇರಿರುವುದು ಚಿತ್ರತಂಡಕ್ಕೆ ಆತಂಕ ತಂದಿದೆ. ಆದರೆ ಮಣಿರತ್ನಂ ಶೀಘ್ರವಾಗಿ ಗುಣಮುಖರಾಗುವ ವಿಶ್ವಾಸವೂ ಇದೆ.
'ಪೊನ್ನಿಯನ್ ಸೆಲ್ವನ್' ಸಿನಿಮಾದ ಸಂಬಂಧ ನಿರ್ದೇಶಕ ಮಣಿರತ್ನಂ ಹಾಗೂ ನಾಯಕ ವಿಕ್ರಂ ಅವರಿಗೆ ಎರಡು ದಿನಗಳ ಹಿಂದಷ್ಟೆ ನೊಟೀಸ್ ಒಂದು ಬಂದಿದೆ. ಸಿನಿಮಾದಲ್ಲಿ ಚೋಳರ ಇತಿಹಾಸ ತಿರುಚಲಾಗಿದೆ ಎಂದು ಆರೋಪಿಸಿ ಕೆಲವರು ಪ್ರಕರಣ ದಾಖಲಿಸಿದ್ದು, ವಿಕ್ರಂ ಹಾಗೂ ಮಣಿರತ್ನಂಗೆ ನೊಟೀಸ್ ನೀಡಲಾಗಿದೆ.
'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಆದಿತ್ಯ ಕರಿಕಾಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪೋಸ್ಟರ್ನಲ್ಲಿ ಕರಿಕಾಲನ್ಗೆ ತಿಲಕವಿದೆ. ಅದೇ ಟೀಸರ್ನಲ್ಲಿ ತಿಲಕವಿಲ್ಲ. ಹೀಗಾಗಿ ಇತಿಹಾಸವನ್ನು ತಿರುಚಲಾಗಿದೆ ಎಂದು ಸೆಲ್ವನ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ವಕೀಲರಾಗಿರುವ ಸೆಲ್ವನ್ ಕೋರ್ಟ್ ಮೆಟ್ಟಿಲೇರಿದ್ದಷ್ಟೇ ಅಲ್ಲ. ಚಿತ್ರತಂಡಕ್ಕೆ ವಿಶೇಷ ಪ್ರದರ್ಶನ ಏರ್ಪಡಿಸುವಂತೆ ಒತ್ತಡ ಹೇರಿದ್ದಾರೆ. ಆದರೆ, ಈ ವಿವಾದದ ಬಗ್ಗೆ ನಿರ್ದೇಶಕ ಮಣಿರತ್ನಂ ಆಗಲಿ, ನಟ ಚಿಯಾನ್ ವಿಕ್ರಮ್ ಆಗಲಿ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











