ವಿಜಯ್ ತಾನು ಹೇಳಿಕೊಂಡಂತೆ ನಿಜವಾಗಿಯೂ ಬಡವ ಆಗಿರಲಿಲ್ಲ; 3ನೇ ತರಗತಿ ಸಹಪಾಠಿ ಗುದ್ದು
ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸ್ವಂತ ಪಕ್ಷ ಕಟ್ಟಿ ಚುನಾವಣೆಯಲ್ಲಿ ದಾಖಲೆ ಬರೆದು ನಟ ವಿಜಯ್ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಮೊನ್ನೆ(ಮೇ 10) ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಭಾಷಣದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಎಲ್ಲಾ ಸಮಸ್ಯೆಗಳನ್ನು ಮೀರಿ ಒಳ್ಳೆ ಅಧಿಕಾರ ನಡೆಸುವುದಾಗಿ ಮಾತು ಕೊಟ್ಟಿದ್ದಾರೆ.
ವಿಜಯ್ ತಮ್ಮ ಭಾಷಣದ ವೇಳೆ ಚಿಕ್ಕಂದಿನ ತಮ್ಮ ಕುಟುಂಬದ ಬಡತನದ ಬಗ್ಗೆ ಮಾತನಾಡಿದ್ದರು. "ಒಬ್ಬ ಸಿನಿಮಾ ಸಹ ನಿರ್ದೇಶಕನ ಮಗನಾಗಿ ಹುಟ್ಟಿದ ನನಗೆ ಕಷ್ಟ, ಹಸಿವು ಅಂದ್ರೆ ಏನು ಅಂತ ಗೊತ್ತು.. ಶ್ರೀಮಂತನ ಮನೆಯಿಂದ ಬಂದವನಲ್ಲ.. ನಿಮ್ಮಲ್ಲಿ ಒಬ್ಬ.. ನಿಮ್ಮ ಮಗನಲ್ಲಿ ಒಬ್ಬ, ನಿಮ್ಮ ಅಣ್ಣನಲ್ಲಿ ಒಬ್ಬ.. ಅದೇ ರೀತಿ ನೀವು ನನಗೆ ಸ್ಥಾನ ಕೊಟ್ಟಿದ್ದೀರಾ.. ನಿಮಗೆ ಧನ್ಯವಾದ ತಿಳಿಸಲು ನಾನು ರಾಜಕೀಯಕ್ಕೆ ಬಂದೆ" ಎಂದು ವಿಜಯ್ ಹೇಳಿದ್ದು ವೈರಲ್ ಆಗುತ್ತಿದೆ.

ನಾನು ಬಡತನದಿಂದ ಬಂದವನು, ಹಾಗಾಗಿ ನನಗೆ ಜನರ ಕಷ್ಟ ಗೊತ್ತು. ಹಾಗಾಗಿ ಒಳ್ಳೆ ಅಧಿಕಾರ ನಡೆಸುತ್ತೇವೆ. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಕೊಡುವುದಿಲ್ಲ. ಹಿಂದಿನ ಸರ್ಕಾರಗಳು 10 ಲಕ್ಷ ಕೋಟಿ ರೂ. ಸಾಲ ಮಾಡಿಟ್ಟು ಹೋಗಿದ್ದಾರೆ. ರಾಜ್ಯದ ಬೊಕ್ಕಸ ಖಾಲಿ ಆಗಿದೆ. ನಿಭಾಯಿಸಲಾಗದ ಜವಾಬ್ದಾರಿಯನ್ನು ಬಿಟ್ಟು ಹೋಗಿದ್ದಾರೆ. ಆದರೂ ಅದನ್ನೆಲ್ಲಾ ಮೀರಿ ಪಾರದರ್ಶಕವಾಗಿ ಅಧಿಕಾರ ನಡೆಸುತ್ತೇವೆ ಎಂದಿದ್ದರು. ಚಿಕ್ಕಂದಿನಲ್ಲಿ ನಾವು ಬಡವರು ಎಂದು ವಿಜಯ್ ಹೇಳಿರುವುದಕ್ಕೆ ಅವರ ಶಾಲಾ ಸಹಪಾಠಿ ಒಬ್ಬರು ತಿರುಗೇಟು ನೀಡಿದ್ದಾರೆ.
ಮನು ಜೋಸೆಫ್ ಎಂಬುವವರು ನಾನು 3ನೇ ತರಗತಿಯಲ್ಲಿ ವಿಜಯ್ ಸಹಪಾಠಿ ಆಗಿದ್ದೆ ಎಂದು ಟ್ವೀಟ್ ಮಾಡಿದ್ದಾರೆ. ಬಡತನದ ಬಗ್ಗೆ ವಿಜಯ್ ಹೇಳಿಕೆಯನ್ನು ಖಂಡಿಸಿದ್ದಾರೆ. "ತಮಿಳುನಾಡಿನ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಭಾಷಣದಲ್ಲಿ ವಿಜಯ್, ತಾವು ಬಡತನದಲ್ಲಿ ಬೆಳೆದು ಬಂದಿದ್ದು, ಹಸಿವು ಎಂದರೇನು ಎಂದು ತಮಗೆ ಗೊತ್ತು ಎಂದಿದ್ದಾರೆ. ಅದು ಸಂಪೂರ್ಣ ಸುಳ್ಳು, ಏಕೆಂದರೆ ಅವರು ಲೊಯೊಲಾ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ನನ್ನ ಸಹಪಾಠಿಯಾಗಿದ್ದರು" ಎಂದು ಮನು ಜೋಸೆಫ್ ಬರೆದುಕೊಂಡಿದ್ದಾರೆ.
ವಿಜಯ್ ತಂದೆ ಫಿಲ್ಮ್ ಮೇಕರ್ ಆಗಿದ್ದರು. ತಮ್ಮ ಮಗನನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದರು ಎಂದು ಮನು ಜೋಸೆಫ್ ಹೇಳಿದ್ದಾರೆ. "ಅನೇಕ ಫಿಲ್ಮ್ ಮೇಕರ್ಸ್ ರೀತಿ ವಿಜಯ್ ತಂದೆ ಕೆಲ ಆರ್ಥಿಕ ತೊಂದರೆಗಳನ್ನು ಎದುರಿಸಿರಬಹುದು, ಆದರೆ ಅದು ನಿಜವಾದ ಬಡತನದಂತೆಯೇ ಅಲ್ಲ. ಶ್ರೀಮಂತ ಕುಟುಂಬಗಳ ಹುಡುಗರು ಹಣದ ಕೊರತೆಯನ್ನು ಬಡತನ ಎಂದು ತಪ್ಪಾಗಿ ಭಾವಿಸುತ್ತಾರೆ. ಇವೆರಡೂ ಬಹಳ ವಿಭಿನ್ನ ವಿಷಯಗಳು" ಎಂದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಶಾಲಾ ಸಹಪಾಠಿಯ ಟ್ವೀಟ್ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ನಡೀತಿದೆ. ಒಂದು ವರ್ಷದ ಮಟ್ಟಿಗೆ ಸಹಪಾಠಿ ಆಗಿದ್ದ ಕಾರಣಕ್ಕೆ ಏನೋನೊ ಹೇಳಬೇಡ ಎಂದು ವಿಜಯ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಬಡತನದ ಬಗ್ಗೆ ಮಾತನಾಡುವುದು ಸಿಂಪಥಿ ಗಿಟ್ಟಿಸುವ ನಾಟಕ ಎಂದು ಮತ್ತೆ ಕೆಲವರು ಚರ್ಚೆ ಹುಟ್ಟಾಕ್ಕಿದ್ದಾರೆ. ಅಂದ ಹಾಗೆ ಈ ಟ್ವೀಟ್ ಅನ್ನು ತಮಿಳು ನಟಿ ಕಸ್ತೂರಿ ಹಂಚಿಕೊಂಡಿದ್ದಾರೆ.
ಇದು ಮುಜುಗರದ ಸಂಗತಿ. ವಿಜಯ್ ಅವರು ತಾನು ಕಷ್ಟಗಳನ್ನು ಎದುರಿಸಿದ್ದಾಗಿ ಹೇಳಿದ್ದನ್ನು ಸ್ವತಃ ಸಹಪಾಠಿ ಟೀಕಿಸಿದ್ದಾರೆ ಎಂದು ಕಸ್ತೂರಿ ವ್ಯಂಗ್ಯವಾಡಿದ್ದಾರೆ. ಈಗಾಗಲೇ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ನಿನ್ನೆ(ಮೇ 11) ವಿಧಾನಸಭೆ ಅಧಿವೇಶನ ನಡೀತು. ಚುನಾವಣೆಯಲ್ಲಿ ಗೆದ್ದ ಶಾಸಕರೆಲ್ಲಾ ಪ್ರಮಾಣವಚನ ಸ್ವೀಕರಿಸಿದರು. ಸದನದಲ್ಲಿ ಸದಾ ಎರಡು ಬದಿರು ಕೂರುತ್ತಿದ್ದ ಡಿಎಂಕೆ ಹಾಗೂ ಎಡಿಎಂಕೆ ಪಕ್ಷದ ನಾಯಕರು ಮೊದಲಬಾರಿ ಒಟ್ಟಿಗೆ ಆಡಳಿತ ಪಕ್ಷ ಟಿವಿಕೆ ನಾಯಕರ ಎದುರು ಕೂರುವಂತಾಗಿದೆ.


Click it and Unblock the Notifications