ಇಳಯ ದಳಪತಿ ವಿಜಯ್ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮ ಗುರು,ಮತ ಹಾಕದಂತೆ ಆದೇಶ..!
ಇಳಯ ದಳಪತಿ ಎಂದೇ ಖ್ಯಾತರಾದವರು ವಿಜಯ್ ಸೇತುಪತಿ. ತಮ್ಮನ್ನು ತಾವು ಕೇವಲ ಚಿತ್ರರಂಗಕ್ಕೆ ಸೀಮಿತಗೊಳಿಸದೇ ವಿಜಯ್ ಮೊದಲಿಂದ ಸಮಾಜದ ಆಗುಹೋಗುಗಳ ಕುರಿತು ಮಾತನಾಡುತ್ತಾಲೇ ಬಂದಿದ್ದಾರೆ. ಕಾವೇರಿ ನೀರಿನ ಸಮಸ್ಯೆ, ಜಲ್ಲಿಕಟ್ಟು ಪ್ರತಿಭಟನೆ, ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶ, ನೀಟ್ ಪರೀಕ್ಷೆ ಸೇರಿ ಹೀಗೆ ಹತ್ತು ಹಲವು ವಿಚಾರಗಳ ಕುರಿತು ವಿಜಯ್ ತಮ್ಮ ಧ್ವನಿಯನ್ನು ಎತ್ತುತ್ತಾನೇ ಬಂದಿದ್ದಾರೆ.
ಅಂದಿನಿಂದ ಇದೆಲ್ಲವನ್ನೂ ನೋಡಿದವರು ವಿಜಯ್ ರಾಜಕೀಯದೆಡೆ ಹೊರಳುತ್ತಾರೆ ಎಂದೇ ಅಂದುಕೊಂಡಿದ್ದರು. ಅದು ಕೂಡ ನಿಜಾ ಆಗಿದೆ. ತಮ್ಮ ಪಕ್ಷಕ್ಕೆ 'ತಮಿಳಗ ವೆಟ್ರಿ ಕಳಗಂ' ಎಂದು ನಾಮಕರಣವನ್ನು ಮಾಡಿರುವ ವಿಜಯ್, ಸದ್ಯ ತಮ್ಮ ಕೊನೆಯ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಚುನಾವಣೆಗೆ ನಿಲ್ಲುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಇದರ ನಡುವೆ ಇದೀಗ ವಿಜಯ್ ವಿರುದ್ಧ ಅದೆಲ್ಲೋ ಕುಳಿತು ಆಲ್ ಇಂಡಿಯಾ ಮುಸ್ಲಿಂ ಜಮಾತ್ನ ಮೌಲಾನಾ ಶಹಾಬುದ್ದೀನ್ ರಾಜ್ವಿ ಗುಡುಗಿದ್ದಾರೆ. ಫತ್ವಾ ಹೊರಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಆಲ್ ಇಂಡಿಯಾ ಮುಸ್ಲಿಂ ಜಮಾತ್ನ ಮೌಲಾನಾ ಶಹಾಬುದ್ದೀನ್ ರಾಜ್ವಿ, ವಿಜಯ್ ಅವರಿಂದ ದೂರ ಇರುವಂತೆ ಮುಸಲ್ಮಾನರಿಗೆ ಕರೆಯನ್ನು ನೀಡಿದ್ದಾರೆ. ವಿಜಯ್ ಮೊದಲಿಂದ ಮುಸಲ್ಮಾನ್ರ ವಿರೋಧಿ ಎಂದು ಹೇಳಿ ವಿಜಯ್ ಅಭಿನಯದ ಬೀಸ್ಟ್ ಚಿತ್ರದ ಉದಾಹರಣೆಯನ್ನು ಕೂಡ ನೀಡಿದ್ದಾರೆ.
ದಿ ಬೀಸ್ಟ್ ಚಿತ್ರದಲ್ಲಿ ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರಂತೆ ಬಿಂಬಿಸಿದ್ದಾರೆ ಎಂದು ಕೆರಳಿ ಕೆಂಡವಾಗಿರುವ ಮೌಲಾನಾ ಶಹಾಬುದ್ದೀನ್ ರಾಜ್ವಿ ಮುಸಲ್ಮಾನರ ಭಾವನೆಗಳ ಜೊತೆ ವಿಜಯ್ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ವಿಜಯ್ ಅವರ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಮುಸ್ಲಿಂ ಸಮುದಾಯಕ್ಕೆ ಆದೇಶವನ್ನು ಕೂಡ ರಾಜ್ವಿ ಸಾಹೇಬರು ಆದೇಶಿಸಿದ್ದಾರೆ.
ಸದ್ಯ ಚುನಾವಣೆಯ ಹಿನ್ನೆಲೆ ವಿಜಯ್ ಅವರಿಗೆ ಮುಸ್ಲಿಂ ಸಮುದಾಯದವರು ನೆನಪಾಗಿದ್ದಾರೆ ಹೀಗಾಗಿ ಮತಗಳನ್ನು ಸೆಳೆಯುವ ಪ್ರಯತ್ನಗಳನ್ನು ವಿಜಯ್ ಮಾಡುತ್ತಿದ್ದಾರೆ ಎಂದಿರುವ ಮೌಲಾನಾ ಶಹಾಬುದ್ದೀನ್ ರಾಜ್ವಿ ವಿಜಯ್ ಅವರಂತಹ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಅವರ ಯಾವುದೇ ಕಾರ್ಯಕ್ರಮಗಳಿಗೆ ಹೋಗಬೇಡಿ ಎಂದು ಹೇಳಿದ್ದಾರೆ. ಮುಸ್ಲಿಂ ಧರ್ಮದ ಯಾವುದೇ ಕಾರ್ಯಕ್ರಮಕ್ಕೂ ಕೂಡ ವಿಜಯ್ ಅವರನ್ನು ಕರೆಯಬೇಡಿ ಎಂದು ಕೂಡ ಆಗ್ರಹಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ವಿಜಯ್ ಅವರ ಪಾರ್ಟಿ 'ತಮಿಳಗ ವೆಟ್ರಿ ಕಳಗಂ'ಗೆ ಮತ ಹಾಕದಂತೆ ಆದೇಶವನ್ನು ಕೂಡ ನೀಡಿದ್ದಾರೆ.
ಇನ್ನು ವಿಜಯ್ ಕಳೆದ ತಿಂಗಳು ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ಇಫ್ತಾರ್ ಕೂಟದ ಕುರಿತು ಕೂಡ ಆಕ್ರೋಶವನ್ನು ವ್ಯಕ್ತಪಡಿಸಿರುವ ಮೌಲಾನಾ ಶಹಾಬುದ್ದೀನ್ ರಾಜ್ವಿ ಉಪವಾಸವನ್ನು ವಿಜಯ್ ಆಚರಿಸಿಲ್ಲ, ಇಸ್ಲಾಂನ ಪದ್ದತಿಗಳನ್ನು ಕೂಡ ಅನುಸರಿಸಿಲ್ಲ ಎಂದು ಹೇಳಿದ್ದಾರೆ. ಇಫ್ತಾರ್ ಕೂಟಕ್ಕೆ ರೌಡಿಗಳನ್ನು ಕುಡುಕರನ್ನು ಕರೆಸಿ ಅಪಚಾರ ಎಸಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಂದ್ಹಾಗೇ ವಿಜಯ್ ಈ ಹಿಂದೆ ಇಫ್ತಾರ್ ಕೂಟ ಆಯೋಜನೆ ಮಾಡಿದಾಗ ಸುನ್ನತ್ ಜಮಾತ್ ಇಸ್ಲಾಮಿಕ್ ಸಂಘಟನೆಯ ಖಜಾಂಚಿ ಸೈಯದ್ ಘೌಸ್ ಈ ದೂರನ್ನು ನೀಡಿದ್ದಾಗಿ ವರದಿಯಾಗಿತ್ತು.ಇಫ್ತಾರ್ ಪಾರ್ಟಿಯಲ್ಲಿ ಸಾಮೂಹಿಕ ಭೇಟಿಯ ಪವಿತ್ರತೆಯ ಉಲ್ಲಂಘನೆ ಮಾಡಲಾಗಿದೆ. ಇಫ್ತಾರ್ ಅನ್ನೋದು ಸಾರ್ವಜನಿಕ ಸಮಾವೇಶ ಅಲ್ಲ. ಹಾಗೇ ರಾಜಕೀಯ ಸಭೆ ನಡೆಸುವ ಸ್ಥಳವೂ ಅಲ್ಲ. ಇದೊಂದು ಪವಿತ್ರ ಧಾರ್ಮಿಕ ಹಬ್ಬ ಎಂದು ಆರೋಪವನ್ನು ಸೈಯದ್ ಫೌಸ್ ಮಾಡಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿಯನ್ನು ಮಾಡಿದ್ದವು.
ಒಟ್ನಲ್ಲಿ ಸದ್ಯ ರಾಜಕೀಯಕ್ಕೆ ಬಂದಿರುವ ವಿಜಯ್ ವಿರುದ್ಧ ಮುಸ್ಲಿಂ ಧರ್ಮ ಗುರು ಮೌಲಾನಾ ಶಹಾಬುದ್ದೀನ್ ರಾಜ್ವಿ ಫತ್ವಾ ಹೊರಡಿಸಿದ್ದಾರೆ. ವಿಜಯ್ ಅವರನ್ನು ಹತ್ತಿರ ಸೇರಿಸಿಕೊಳ್ಳದಂತೆ ಕರೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ವಿಜಯ್ ರಾಜಕೀಯದ ನಡೆ ಮತ್ತು ನುಡಿ ಹೇಗಿರಲಿದೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ತಮಿಳುನಾಡು ರಾಜಕೀಯ ದಿನಗಳು ಉರುಳಿದಂತೆ ಕುತೂಹಲವನ್ನು ಕೆರಳಿಸುತ್ತಿದೆ.


Click it and Unblock the Notifications











