ಶಾಪಗ್ರಸ್ತ ಚೆಲುವೆ ; ಬಿಡುಗಡೆಯಾಗದೇ ಡಬ್ಬಾದಲ್ಲಿಯೇ ಕೊಳೆಯುತ್ತಿವೆ ಈ ಖ್ಯಾತ ನಟಿಯ 3 ಚಿತ್ರಗಳು
''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ''ಲಕ್'' ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಆದರೆ ಇದನ್ನರಿಯದ ಅನೇಕರು ಬಣ್ಣದ ಲೋಕದಲ್ಲಿ ಡಿಮ್ಯಾಂಡ್ ಇದ್ದಾಗ, ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳುತ್ತಾರೆ. ಇನ್ನು ತಡೆಯುವರು ಯಾರು ಇಲ್ಲ ಎಂಬ ಭ್ರಮೆಯಲ್ಲಿ ಓಡಾಡಲು ಶುರು ಮಾಡುತ್ತಾರೆ.
ಹೇಗೂ ''ಓಡುವ ಕುದುರೆ'' ಎಂದು ಬಣ್ಣದ ಮಂದಿ ಇವರ ಮೇಲೆ ಬಾಜಿ ಕಟ್ತಾರೆ ಕೂಡ. ಆದರೆ.. ಸಮಯ, ಕೆಲವೊಮ್ಮೆ ಸಮಸ್ಯೆಯನ್ನ ತಂದೊಡ್ಡುತ್ತದೆ. ಅದೃಷ್ಟ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತದೆ. ಕೃತಿ ಶೆಟ್ಟಿ ಇದಕ್ಕೆ ಸದ್ಯದ ಉದಾಹರಣೆ.

ಹೌದು. ಕೃತಿ ಶೆಟ್ಟಿ .. ನಾಲ್ಕು ವರ್ಷದ ಹಿಂದೆ, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಬೇಡಿಕೆಯಲ್ಲಿದ್ದ ''ಮಂಗ್ಳೂರು ಮೀನು''. ''ಉಪ್ಪೇನ'' ಚಿತ್ರದ ಮೂಲಕ, ಸಿಹಿಯಾದ ಲಿಂಬು ಉಪ್ಪಿನಕಾಯಿಯನ್ನ ಸವಿದ ಕೃತಿ, ಆ ನಂತರ ಎರಡು ಬ್ಲಾಕ್ ಬಸ್ಟರ್ ಚಿತ್ರಗಳನ್ನ ನೀಡುವುದರ ಮೂಲಕ ಬೇಡಿಕೆಯನ್ನ ಹೆಚ್ಚಿಸಿಕೊಂಡಿದ್ದರು. ಎರಡು ಕೋಟಿ ಕಡಿಮೆ ಒಂದು ರೂಪಾಯಿಯನ್ನೂ ತೆಗೆದುಕೊಳ್ಳಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಸುದ್ದಿಯಾಗಿದ್ದರು. ಸಂಚಲನವನ್ನೂ ಸೃಷ್ಟಿಸಿದ್ದರು.
ಇನ್ನೂ.. ''ಬಿಕಿನಿ''ಯಲ್ಲಿ ಕಾಣಿಸಿಕೊಳ್ಳಬೇಕೆಂದರೆ ಎರಡಲ್ಲ ಐದು ಕೋಟಿಯನ್ನ ಕೋಡಬೇಕೆಂದು, ಕೃತಿ ಶೆಟ್ಟಿ ಷರತ್ತು ಹಾಕಿದ್ದರು. ಆಂಧ್ರದಲ್ಲಿ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೀಡಾಗಿತ್ತು. ''ಹಣ''ದ ಮೇಲೆ ಕೃತಿಗೆ ಇರುವ ಪ್ರೀತಿಯನ್ನ ಕಂಡು ಟಾಲಿವುಡ್ಡಿಗೆ ಟಾಲಿವುಡ್ಡೇ ಬೆಚ್ಚಿ ಬಿದ್ದಿತ್ತು. ಆದರೆ ಆ ನಂತರ ಹಣದ ಮೇಲೆ ಕೃತಿ ಶೆಟ್ಟಿಗೆ ಇದ್ದ ಇದೇ ''ಮೋಹ-ದಾಹ'' ಇವರನ್ನ ಮೂಲೆಗುಂಪಾಗಿಸಿತು.
ಇಂಥಾ ಕೃತಿ ಶೆಟ್ಟಿ ಸದ್ಯ ಮತ್ತೆ ಮೈಕೊಡವಿ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ತೆಲುಗಿನ ಜೊತೆ ಮಲಯಾಳಂನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ.. ''ಉಪ್ಪೇನ್'' ಚಿತ್ರದಲ್ಲಿ ಇವರಿಗೆ ಸಿಕ್ಕ ಹೆಸರು ಬೇರೆ ಯಾವ ಚಿತ್ರದಲ್ಲಿ ಕೂಡ ಸಿಗಲಿಲ್ಲ. ಹೀಗಾಗಿಯೇ ತಮಿಳು ಚಿತ್ರರಂಗದತ್ತ ಕೂಡ ಮುಖ ಮಾಡಿರುವ ಕೃತಿ ಶೆಟ್ಟಿ ಒಂದಲ್ಲ.. ಎರಡಲ್ಲ.. ಮೂರು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ದುರಾದೃಷ್ಟ. ಬಿಡುಗಡೆಯ ಭಾಗ್ಯ ಸಿಗದ ಈ ಮೂರು ಚಿತ್ರಗಳು ಡಬ್ಬಾದಲ್ಲಿಯೇ ಕೊಳೆಯುತ್ತಿವೆ.
ಹೌದು, ''ಲವ್ ಇನ್ಸೂರೆನ್ಸ್ ಕಂಪನಿ''.. ''ವಾ ವಾತಿಯಾರೆ''..ಮತ್ತು ''ಜೆನ್ನಿ''.. ಕಾಲಿವುಡ್ನಲ್ಲಿ ಕೃತಿ ಮಾಡಿರುವ ಮೂರು ಪ್ರಯತ್ನಗಳು. ''ಲವ್ ಇನ್ಸೂರೆನ್ಸ್ ಕಂಪನಿ'' ಚಿತ್ರಕ್ಕೆ ನಯನತಾರಾ ಗಂಡ ವಿಘ್ನೇಶ್ ಶಿವನ್ ನಿರ್ದೇಶನ ಇದೆ. ತಮಿಳಿನ ನಯಾ ಸೂಪರ್ ಸ್ಟಾರ್ ಪ್ರದೀಪ್ ರಂಗನಾಥನ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ವರ್ಷದ ಏಪ್ರಿಲ್ನಲ್ಲಿಯೇ ಈ ಚಿತ್ರದ ಚಿತ್ರೀಕರಣ ಮುಗಿದಿದೆ. ಆದರೂ.. ಬಿಡುಗಡೆಯ ಭಾಗ್ಯ ಈ ಚಿತ್ರಕ್ಕೆ ಸಿಕ್ಕಿಲ್ಲ.

ಇನ್ನು ವಿಕ್ರಂ ಪ್ರಭು ಜೊತೆ ಅಭಿನಯಿಸಿರುವ ''ವಾ ವಾತಿಯಾರೆ'' ಚಿತ್ರದ ಕಥೆಕ ಕೂಡ ಸೇಮ್. 2023ರ ಮಾರ್ಚ್ನಲ್ಲಿ ಶುರುವಾಗಿದ್ದ ಈ ಚಿತ್ರೀಕರಣ ಈ ವರ್ಷದ ಜೂನ್ನಲ್ಲಿ ಮುಕ್ತಾಯಗೊಂಡಿದೆ. ಆದರೆ.. ಡಿಸೆಂಬರ್ ಆದರೂ ಕೂಡ ಬಿಡುಗಡೆಯಾಗಿಲ್ಲ. ಮನರಂಜನೆಯ ರಸದೌತಣ ಖಿಚಿತ ಎಂದೇ ತಮ್ಮ ಚಿತ್ರದ ಪ್ರಚಾರವನ್ನು ಮಾಡಿದ್ದ ''ಜೆನ್ನಿ'' ತಂಡ ಕೂಡ ಬಿಡುಗಡೆಯ ಬಗ್ಗೆ ಮಾತನಾಡುತ್ತಿಲ್ಲ.
ಹೀಗಾಗಿಯೇ ಕಾದು, ಬೇಸತ್ತು, ಸದ್ಯ ತಾಳ್ಮೆಯನ್ನು ಕಳೆದುಕೊಂಡಿರುವ ಕೃತಿ ಶೆಟ್ಟಿ ಅವರ ಅಭಿಮಾನಿಗಳು ಸದ್ಯ ರೊಚ್ಚಿಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಆದರೆ ಮೂರು ಚಿತ್ರಗಳ ನಿರ್ಮಾಪಕರು ಮಾತ್ರ ಮೌನವಾಗಿದ್ದಾರೆ. ನೆಮ್ಮದಿಯಿಂದ ಇದ್ದಾರೆ.
ನಿರ್ಮಾಪಕರ ಈ ಮೌನ ಕಾಲಿವುಡ್ನಲ್ಲಿ ಕೂಡ ಚರ್ಚೆಗೆ ನಾಂದಿ ಹಾಡಿದೆ. ಒಬ್ಬಳೇ ನಟಿಯ ಮೂರು ಚಿತ್ರಗಳು ಹೀಗೆ ತಡವಾಗಲು ಹೇಗೆ ಸಾಧ್ಯ..? ಇದು ಖಂಡಿತ ಕಾಕತಾಳೀಯವಾಗಿರಲು ಸಾಧ್ಯ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಬಾಡಿದಂತೆ ತಮಿಳಿನಲ್ಲಿ ಶುರುವಾಗುವ ಮುನ್ನವೇ ಕೃತಿ ಶೆಟ್ಟಿ ವೃತ್ತಿ ಬದುಕು ಮುಕ್ತಾಯವಾಗುತ್ತಾ..? ಎನ್ನುವ ಆತಂಕ ಕೂಡ ಸದ್ಯ ಕೃತಿ ಶೆಟ್ಟಿ ಅವರ ಅಭಿಮಾನಿಗಳನ್ನು ಮತ್ತು ಸಿನಿಮಾ ಪಂಡಿತರನ್ನು ಕಾಡುತ್ತಿದೆ.ಮತ್ತೊಂದು ಕಡೆ ಶ್ರೀಲೀಲಾ ಸೇರಿ ಹಲವು ನಾಯಕಿಯರು ಮಿಂಚುತ್ತಿದ್ದಾರೆ. ತಮ್ಮ ಸ್ಥಾನ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೃತಿ ಭವಿಷ್ಯ ಮಾತ್ರ ಇನ್ನೂ ಅತಂತ್ರವಾಗಿಯೇ ಇದೆ.
ಒಟ್ನಲ್ಲಿ ಕೃತಿ ಶೆಟ್ಟಿಗೆ ಅತ್ಯುತ್ತಮವಾದ ಪುನರಾರಂಭ ಸದ್ಯ ಬೇಕಿದೆ. ಅನಿಶ್ಚಿತತೆಗಳಲ್ಲ. ತಮ್ಮ ಚಿತ್ರಗಳ ಬಿಡುಗಡೆ ದಿನಾಂಕ ಕೃತಿಗೆ ಗೊತ್ತಾಗಬೇಕಿದೆ. ನಿರ್ಮಾಪಕರ ಮೌನವಲ್ಲ. ಮತ್ತೆ ಸೋಲು-ತಿರಸ್ಕಾರ ಕೃತಿಗೆ ಈಗ ಬೇಕಿಲ್ಲ. ಬದಲಿಗೆ ಒಂದು ತಿರುವು ಬೇಕಿದೆ. ಆ ತಿರುವು 2026ರಲ್ಲಾದರೂ ಸಿಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











