ಪತ್ನಿಗೆ ಡಿವೋರ್ಸ್.. ಅಧಿಕೃತವಾಗಿ ಘೋಷಿಸಿದ 'ಪುಂಡ', 'ಉಲ್ಲಾಸ ಉತ್ಸಾಹ' ಸಂಗೀತ ನಿರ್ದೇಶಕ
ಚಿತ್ರರಂಗದಲ್ಲಿ ನಟ, ನಟಿಯರ ನಡುವೆ ಎಷ್ಟು ಬೇಗ ಲವ್ವಾಗುತ್ತೋ ಅಷ್ಟೇ ಬೇಗ ಬ್ರೇಕಪ್ ಆಗಿಬಿಡುತ್ತದೆ. ಇನ್ನು ಮದುವೆ ಆದವರು ಬಹಳ ವರ್ಷ ಜೊತೆಯಾಗಿ ಇರುತ್ತಾರೆ ಎನ್ನುವ ಗ್ಯಾರೆಂಟಿ ಕೂಡ ಇಲ್ಲ. 18 ವರ್ಷ, 12 ವರ್ಷ ಒಟ್ಟಿಗೆ ಜೀವನ ನಡೆಸಿದವರು ಕೊನೆಗೆ ನಾನೊಂದು ತೀರ ನೀನೊಂದು ತೀರ ಎಂದು ದೂರಾಗಿಬಿಡುತ್ತಾರೆ.
ತೆಲುಗು, ತಮಿಳಿನಲ್ಲಿ ತಾರಾ ದಂಪತಿಗಳ ಡಿವೋರ್ಸ್ ಸುದ್ದಿಗಳು ಹೆಚ್ಚಾಗುತ್ತಿದೆ. ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಮದುವೆಯಾಗಿ 18 ವರ್ಷಗಳ ಬಳಿಕ ದೂರಾಗಲು ನಿರ್ಧರಿಸಿದ್ದಾರೆ. ಇನ್ನು ಸಮಂತಾ ನಾಗಚೈತನ್ಯಾ, ನಿಹಾರಿಕಾ- ಚೈತನ್ಯಾ ಜೊನ್ನಲಗಡ್ಡ ಈಗಾಗಲೇ ಅಧಿಕೃತವಾಗಿ ವಿಚ್ಛೇದನ ಪಡೆದು ದೂರಾಗಿದ್ದಾರೆ. ಅದೇ ಸಾಲಿಗೆ ತಮಿಳು ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ಸೇರಿಕೊಳ್ಳುತ್ತಿದ್ದಾರೆ.

ಕೆಲ ದಿನಗಳಿಂದ ಜಿ.ವಿ ಪ್ರಕಾಶ್ ಹಾಗೂ ಸೈಂಧವಿ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಇದೀಗ ಅಧಿಕೃತವಾಗಿ ಇಬ್ಬರೂ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಈ ಸಂಬಂಧ ಇಬ್ಬರೂ ಪೋಸ್ಟ್ ಮಾಡಿದ್ದಾರೆ.
"ಬಹಳ ಯೋಚಿಸಿದ ನಂತರ ಸೈಂಧವಿ ಹಾಗೂ ನಾನು, ನಮ್ಮ 11 ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದೇವೆ. ನಾವು ಈ ನಿರ್ಧಾರವನ್ನು ಪರಸ್ಪರ ಗೌರವದಿಂದ ಮನಸ್ಸಿನ ಶಾಂತಿಗಾಗಿ ಮತ್ತು ಎರಡೂ ಜೀವನದಲ್ಲಿ ಉತ್ತಮಗೊಳಿಸುವುದಕ್ಕಾಗಿ ತೆಗೆದುಕೊಂಡಿದ್ದೇವೆ. ಇಂತಹ ನಿರ್ಣಾಯಕ ಸಮಯದಲ್ಲಿ ನಮ್ಮ ಗೌಪ್ಯತೆಗೆ ಭಂಗ ತರದಿರುವ ನಮ್ಮ ನಿರ್ಧಾರವನ್ನು ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ"
"ಇನ್ನು ಮುಂದೆ ನಾವು ಬೇರೆಯಾಗಿ ಜೀವನ ಮುಂದುವರೆಸಲು ಮುಂದಾಗಿದ್ದೇವೆ. ಈ ನಿರ್ಧಾರವು ಇಬ್ಬರಿಗೂ ಉತ್ತಮವಾಗಿದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನೀವು ಅರ್ಥ ಮಾಡಿಕೊಳ್ಳಬೇಕು ಮತ್ತು ನಿಮ್ಮ ಬೆಂಬಲ ಬೇಕು" ಎಂದು ಜಿ.ವಿ ಪ್ರಕಾಶ್ ಬರೆದುಕೊಂಡಿದ್ದಾರೆ. ಇದೇ ಹೇಳಿಕೆಯನ್ನು ಅನ್ನು ಕೊಂಚ ಬದಲಿಸಿ ಪತ್ನಿ ಸೈಂಧವಿ ಕೂಡ ಹಂಚಿಕೊಂಡಿದ್ದಾರೆ.

ಆಸ್ಕರ್ ವಿಜೇತ ಎ. ಆರ್ ರಹಮಾನ್ ಸೋದರ ಸಂಬಂಧಿಯೂ ಆಗಿರುವ ಜಿ.ವಿ ಪ್ರಕಾಶ್ ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೀರೊ ಆಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಶಾಲಾ ದಿನಗಳಲ್ಲೇ ಜಿ.ವಿ ಪ್ರಕಾಶ್ ಹಾಗೂ ಸೈಂಧವಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಬರೋಬ್ಬರಿ ಒಂದು ದಶಕದ ಬಳಿಕ 2013ರಲ್ಲಿ ಹಸೆಮಣೆ ಏರಿದ್ದರು.
ಗಾಯಕಿ ಆಗಿರುವ ಸೈಂಧವಿ ಹಲವು ಹಿಟ್ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. 4 ವರ್ಷಗಳ ಹಿಂದೆ ದಂಪತಿಗೆ ಮಗಳು ಹುಟ್ಟಿದ್ದಳು. ಆಕೆಗೆ ಅನ್ವಿ ಎಂದು ನಾಮಕರಣ ಮಾಡಿದ್ದರು. ಆದರೆ ದಿಢೀರನೆ ಈಗ ಡಿವೋರ್ಸ್ ಘೋಷಿಸಿರುವುದು ಕಾಲಿವುಡ್ಗೆ ಶಾಕ್ ತಂದಿದೆ. 2006ರಲ್ಲಿ 'ವೆಯಿಲ್' ಚಿತ್ರಕ್ಕೆ ಮೊದಲ ಬಾರಿ ಜಿ.ವಿ ಪ್ರಕಾಶ್ ಸಂಗೀತ ನಿರ್ದೇಶನ ಮಾಡಿದ್ದರು.
2007ರಲ್ಲಿ ಧನುಷ್ ನಟನೆಯ 'ಪೊಲ್ಲಾದವನ್' ಚಿತ್ರಕ್ಕೆ ಜಿ.ವಿ ಪ್ರಕಾಶ್ ಟ್ಯೂನ್ ಹಾಕಿದ್ದರು. ಬಳಿಕ 'ಪುಂಡ' ಹೆಸರಿನಲ್ಲಿ ಈ ಸಿನಿಮಾ ಕನ್ನಡಕ್ಕೆ ರೀಮೆಕ್ ಆಗಿದ್ದಾಗ ಅದೇ ಮ್ಯೂಸಿಕ್ ಬಳಸಿಕೊಳ್ಳಲಾಗಿತ್ತು. ತೆಲುಗಿನ 'ಉಲ್ಲಾಸಂ ಉತ್ಸಾಹಂ' ಚಿತ್ರವನ್ನು ಕನ್ನಡದಲ್ಲಿ ಗಣೇಶ್ ರೀಮೆಕ್ ಮಾಡಿದ್ದರು. ಆ ಚಿತ್ರಕ್ಕೂ ಜಿ.ವಿ ಪ್ರಕಾಶ್ ಸಂಗೀತ ಬಳಕೆಯಾಗಿತ್ತು.


Click it and Unblock the Notifications











