ದಳಪತಿ ವಿಜಯ್- ತ್ರಿಷಾ ರಿಲೇಷನ್ಶಿಪ್ ಬಗ್ಗೆ ಬಿಜೆಪಿ ನಾಯಕನ ಅಸಭ್ಯ ಕಾಮೆಂಟ್ಸ್
ರಾಜಕೀಯರಂಗಕ್ಕೆ ಕೆಸರೆರಚಾಟ ಸರ್ವೇಸಾಮಾನ್ಯ. ಗೌರವಾನ್ವಿತರಿಗೆ ಅಲ್ಲ ರಾಜಕೀಯ ಎನ್ನುವವರು ಇದ್ದಾರೆ. ರಾಜಕೀಯರಂಗದಲ್ಲಿ ಸುಖಾಸುಮ್ಮನೆ ಆರೋಪಗಳನ್ನು ಎದುರಿಸಬೇಕಾಗುತ್ತದೆ. ಒಬ್ಬರನ್ನು ತುಳಿಸುವ ಭರದಲ್ಲಿ ಅಸಭ್ಯ ಕಾಮೆಂಟ್ ಮಾಡುವವರು ಇರ್ತಾರೆ. ಇತ್ತೀಚೆಗೆ ಈ ಪ್ರವೃತ್ತಿ ಹೆಚ್ಚಾಗುತ್ತದೆ. ಆರೋಪಕ್ಕೆ ಪ್ರತ್ಯಾರೋಪ, ಏಟು ಎದಿರೇಟು ಇಲ್ಲಿ ಸರ್ವೇಸಾಧಾರಣ.
ತಮಿಳು ನಟ ದಳಪತಿ ವಿಜಯ್ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿದ್ದಾರೆ. ಶೀಘ್ರದಲ್ಲೇ ತಮಿಳುನಾಡು ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. ಕಳೆದೊಂದು ವರ್ಷದಿಂದ ವಿಜಯ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ರ್ಯಾಲಿ, ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಡಿಎಂಕೆ ಸರ್ಕಾರ ಕೆಳಗಿಳಿಸಿ ತಮ್ಮ ಟಿವಿಕೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ಹೇಳುತ್ತಿದ್ದಾರೆ. ಎದುರಾಳಿ ಪಕ್ಷಗಳಿಗೆ ಸವಾಲು ಹಾಕಿದ್ದಾರೆ. ಆದರೆ ವಿಜಯ್ಗೆ ರಾಜಕೀಯರಂಗದಲ್ಲಿ ಅನುಭವ ಇಲ್ಲ ಎಂದು ಇತರೆ ಪಕ್ಷದ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಇದೀಗ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅಸಭ್ಯವಾಗಿ ಕಾಮೆಂಟ್ ಮಾಡಿರುವುದು ವೈರಲ್ ಆಗ್ತಿದೆ.

ಸ್ವಂತ ಪಕ್ಷ ಸ್ಥಾಪಿಸಿರುವ ವಿಜಯ್ ಗೆಲ್ತಾರಾ? ಎನ್ನುವ ಮಾಧ್ಯಮದವರ ಪ್ರಶ್ನೆಗೆ ನೈನಾರ್ ನಾಗೇಂದ್ರನ್ ಪ್ರತಿಕ್ರಿಯಿಸಿದ್ದಾರೆ. "ಪಾಪ ಅವರಿಗೆ ರಾಜಕಿಯ ಅನುಭವವೇ ಇಲ್ಲ. ಮೊದಲು ಮನೆಯಿಂದ ಹೊರಗಡೆ ಬರಬೇಕು. ಜನರ ಜೊತೆ ಬೆರೆಯೇಬೇಕು. ಅದರಲ್ಲೂ ತ್ರಿಷಾ ಮನೆಯಿಂದ ಹೊರ ಬಂದರೆ ಮಾತ್ರ ಎಲ್ಲವೂ ಸಾಧ್ಯ" ಎಂದು ವ್ಯಂಗ್ಯವಾಡಿದ್ದಾರೆ. ಮೊದಲು ಕೌಟುಂಬಿಕವಾಗಿ ಚೆನ್ನಾಗಿರಬೇಕು. ಇದರಿಂದ ಹೊರ ಬಂದಾಗ ಮಾತ್ರ ಇದೆಲ್ಲಾ ಸಾಧ್ಯ ಎನ್ನುವ ಬಿಜೆಪಿ ನಾಯಕನ ಹೇಳಿಕೆ ಈಗ ಭಾರೀ ಚರ್ಚೆಗೆಗ್ರಾಸವಾಗಿದೆ.
ನಟ ವಿಜಯ್ ಹಾಗೂ ನಟಿ ತ್ರಿಷಾ ಆತ್ಮೀಯ ಸ್ನೇಹಿತರು. ಆದರೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಆಗಾಗ್ಗೆ ಕೇಳಿಬರುತ್ತದೆ. ಪತ್ನಿಗೆ ಡಿವೋರ್ಸ್ ಕೊಟ್ಟು ತ್ರಿಷಾ ಜೊತೆ ವಿಜಯ್ ಮದುವೆ ಆಗ್ತಾರೆ ಎನ್ನುವ ಊಹಾಪೋಹ ಕೇಳಿಬರುತ್ತಿರುತ್ತದೆ. ಆದರೆ ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. 'ಗಿಲ್ಲಿ', 'ತಿರುಪಾಚ್ಚಿ', 'ಆಥಿ' ಹಾಗೂ 'ಲಿಯೋ' ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿ ಗೆದ್ದಿದ್ದರು. ಇಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು.
"ರಾಜಕೀಯಕ್ಕೆ ಬರುವ ಮುನ್ನ ತ್ರಿಷಾ ಮನೆಯಿಂದ ಹೊರಬನ್ನಿ" ಎಂದು ರಾಜೇಂದ್ರನ್ ಹೇಳಿರುವುದು ತಮಿಳುನಾಡು ರಾಜಕೀಯರಂಗದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ಸರಿ, ಆದರೆ ಅದು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಇರಬೇಕು, ಅದು ಬಿಟ್ಟು ನಾಯಕರ ವೈಯಕ್ತಿಕ ವಿಚಾರಗಳನ್ನು ಎಳೆದುತಂದು ಮಾತನಾಡುವುದು ಸರಿಯಲ್ಲ ಎಂದು ಭಾರೀ ಚರ್ಚೆ ನಡೀತಿದೆ.
ರಾಜೇಂದ್ರನ್ ಹೇಳಿಕೆಯನ್ನು ಡಿಎಂಕೆ ಸಂಸದೆ ಕನಿಮೋಳಿ ಕೂಡ ಖಂಡಿಸಿದ್ದಾರೆ. "ರಾಜಕೀಯ ಜೀವನದಲ್ಲಿ ತೊಡಗಿರುವ ವ್ಯಕ್ತಿಯ ಜೀವನದ ಬಗ್ಗೆ ಮಾತನಾಡುವುದು ಅಸಂಸ್ಕೃತ. ಸಾರ್ವಜನಿಕ ಕ್ಷೇತ್ರದಲ್ಲಿ ಹೀಗೆ ಟೀಕಿಸುವುದು ಸರಿಯಲ್ಲ. ಸ್ವತಃ ಬಿಜೆಪಿ ಮಹಿಳಾ ನಾಯಕಿಯರೇ ಇದನ್ನು ಖಂಡಿಸದಿರುವುದು ವಿಪರ್ಯಾಸ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ನಟ ವಿಜಯ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಬಾರಿ ವಿಜಯ್ ಗೆದ್ದು ತಮಿಳುನಾಡಿನಲ್ಲಿ ಸರ್ಕಾರ ರಚಿಸಿ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಾರೆ. ರಾಜ್ಯದ ಅಭಿವೃದ್ಧಿ ಮಾಡುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕರುಣಾನಿಧಿ ಹಾಗೂ ಜಯಲಲಿತಾ ಅಗಲಿಕೆ ಬಳಿಕ ತಮಿಳುನಾಡು ರಾಜಕೀಯರಂಗದಲ್ಲಿ ಮಾಸ್ ಲೀಡರ್ ಕೊರತೆ ಇದೆ. ವಿಜಯ್ ಆ ಸ್ಥಾನ ತುಂಬುತ್ತಾರೆ ಎನ್ನುವ ಲೆಕ್ಕಾಚಾರ ನಡೀತಿದೆ.
ತಮಿಳುನಾಡಿನ ಜನತೆ ನನಗೆ ನೇಮು ಫೇಮು ಕೊಟ್ಟಿದ್ದಾರೆ. ಅವರ ಸೇವೆ ಮಾಡಿ ಆ ಋಣ ತೀರಿಸಲು ರಾಜಕೀಯರಂಗಕ್ಕೆ ಧುಮುಕಿರುವುದಾಗಿ ದಳಪತಿ ವಿಜಯ್ ಹೇಳುತ್ತಾ ಬರ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಸಿಎಂ ಆಗುವ ಭರವಸೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











