ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ನಿರ್ದೇಶಕ ಎಸ್.ಪಿ ಜನನಾಥನ್ ನಿಧನ
ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಎಸ್.ಪಿ ಜನನಾಥನ್ ನಿಧನಹೊಂದಿದ್ದಾರೆ. ಚೆನ್ನೈನ ಆಸ್ಪತ್ರೆಯಲ್ಲಿ ಇಂದು (ಮಾರ್ಚ್ 14) ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
61 ವರ್ಷದ ಹಿರಿಯ ನಿರ್ದೇಶಕ ಜನನಾಥನ್, ತನ್ನ 5ನೇ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದರೆ ಸಿನಿಮಾ ಬಿಡುಗಡೆಗೂ ಮೊದಲೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.
ಎರಡು ದಿನಗಳ ಹಿಂದೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದ ಜನನಾಥನ್ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಜನನಾಥನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಇಂದು ನಿಧನಹೊಂದಿದ್ದಾರೆ. ಜನನಾಥನ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಎಸ್ ಪಿ ಜನನಾಥನ್ ನಿರ್ದೇಶನದ ಮೊದಲ ಸಿನಿಮಾ ಐಯ್ಯರ್ಕೈ ಚಿತ್ರ ರಾಷ್ಟ್ರಮಟ್ಟದ ಪ್ರಶಂಸೆ ಜೊತೆಗೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿದೆ. ಇದುವರೆಗೂ ಜನನಾಥನ್ 4 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ 5ನೇ ಸಿನಿಮಾ ಲಾಬಮ್ ಶೂಟಿಂಗ್ ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದರು.
ಜನನಾಥನ್ ನಿರ್ದೇಶನದ ಕೊನೆಯ ಸಿನಿಮಾ ಲಾಬಮ್ ಚಿತ್ರದಲ್ಲಿ ವಿಜಯ್ ಸೇತುಪತಿ, ಶ್ರುತಿ ಹಾಸನ್, ಜಗಪತಿ ಬಾಬು, ಸಾಯಿ ಧನ್ಶಿಕಾ, ರಮೇಶ್ ತಿಲಕ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಖ್ಯಾತ ನಟ ವಿಜಯ್ ಸೇತುಪತಿ ಪ್ರೊಡಕ್ಷನ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಜನನಾಥನ್ ನಿಧನಕ್ಕೆ ನಟಿ ಶ್ರುತಿ ಹಾಸನ್ ಟ್ವೀಟ್ ಮಾಡಿ, ಭಾರವಾದ ಹೃದಯದಿಂದ ಎಸ್ ಪಿ ಜನನಾಥನ್ ಸರ್ ಅವರಿಗೆ ವಿದಾಯ ಹೇಳುತ್ತಿದ್ದೇವೆ. ನಿಮ್ಮೊಂದಿಗೆ ಕೆಲಸ ಮಾಡಿದ್ದು ತುಂಬಾ ಸಂತೋಷವಾಗಿದೆ' ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











