"ಜೈಲರ್' ಚಿತ್ರದಲ್ಲಿ ಬಾಲಯ್ಯಗೆ ಜಬರ್ದಸ್ತ್ ಪಾತ್ರ ಇತ್ತು.. ಆದ್ರೆ..": ಕೈಕೈ ಹಿಸುಕಿಕೊಂಡ ನೆಲ್ಸನ್
'ಜೈಲರ್' ಮುತ್ತುವೇಲ್ ಪಾಂಡಿಯನ್ ಅವತಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಆರ್ಭಟಕ್ಕೆ ಬಾಕ್ಸಾಫೀಸ್ ಶೇಕ್ ಆಗ್ತಿದೆ. ತಲೈವಾ ಜೊತೆ ಶಿವಣ್ಣ, ಮೋಹನ್ ಲಾಲ್ ಜುಗಲ್ಬಂದಿ ನೋಡಿ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದ ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ ಸಹ ನಟಿಸಬೇಕಿತ್ತು.
ಹೌದು ನಿರ್ದೇಶಕ ನೆಲ್ಸನ್ ರಜನಿಕಾಂತ್ ಜೊತೆ ಹಿಂದಿ, ಕನ್ನಡ, ಮಲಯಾಳಂ ಹಾಗೂ ತೆಲುಗಿನ ಸ್ಟಾರ್ ನಟರನ್ನು ಸೇರಿಸಿ ಬೊಂಬಾಟ್ ಸಿನಿಮಾ ಪ್ಲ್ಯಾನ್ ಮಾಡಿದ್ದರು. ಅದರಂತೆ ಶಿವರಾಜ್ಕುಮಾರ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ. ಶಿವಣ್ಣನ ಆರ್ಭಟಕ್ಕೆ ಕೊಂಚ ಹೆಚ್ಚೇ ಅಂಕ ಸಿಕ್ತಿದೆ. ತೆಲುಗಿನ ಹಾಸ್ಯನಟ ಸುನೀಲ್ ಕೂಡ ಒಂದೊಳ್ಳೆ ಪಾತ್ರ ಮಾಡಿದ್ದಾರೆ. ಆದರೆ ಅಸಲಿಗೆ ಟಾಲಿವುಡ್ ನಟಸಿಂಹ ಬಾಲಯ್ಯ ಈ ಚಿತ್ರದಲ್ಲಿ ನಟಿಸಬೇಕಿತ್ತು.

ಸದ್ಯ ನಿರ್ದೇಶಕ ನೆಲ್ಸನ್ ಸಂದರ್ಶನವೊಂದರಲ್ಲಿ ಮಾತನಾಡಿ ಬಾಲಕೃಷ್ಣಗಾಗಿ 'ಜೈಲರ್' ಚಿತ್ರದಲ್ಲಿ ಬರೆದುಕೊಂಡ ಪಾತ್ರದ ಬಗ್ಗೆ ಮಾತನಾಡಿದ್ದಾರೆ. "ಮಲ್ಟಿಸ್ಟಾರರ್ ಸಿನಿಮಾ ಮಾಡಬೇಕು ಎಂದು ಸ್ಟಾರ್ ನಟರನ್ನು ಕರೆತಂದಿಲ್ಲ. ರಜನಿಕಾಂತ್ಗಾಗಿಯೇ ಈ ಸಿನಿಮಾ ಮಾಡಿದ್ದು. ಆದರೆ ಕೆಲವರು ನಾವು ಮಲ್ಟಿಸ್ಟಾರರ್ ಮಾಡ್ತಿದ್ದೀವಿ ಅಂತ ಎಲ್ಲರೂ ಅಂದುಕೊಂಡರು. ಅಗತ್ಯ ಇದ್ದಿದ್ದಕ್ಕೆ ಬೇರೆ ಭಾಷೆಯ ಸ್ಟಾರ್ ನಟರನ್ನು ಆಯ್ಕೆ ಮಾಡಿಕೊಂಡೆವು."
"ತೆಲುಗಿನ ಬಾಲಕೃಷ್ಣ ಅವರನ್ನು ಬಳಸಿಕೊಳ್ಳಬೇಕಿತ್ತು ಎಂದು ನನಗೆ ಆಸೆ ಇತ್ತು. ಚಿತ್ರದ ಯಾವುದಾದರೂ 2 ಸನ್ನಿವೇಶದಲ್ಲಿ ಬಾಲಯ್ಯ ಇದ್ದರೆ ಚೆನ್ನಾಗಿರುತ್ತೆ ಎಂದುಕೊಂಡೆ. ಆದರೆ ಕತೆಯಲ್ಲಿ ಅದನ್ನು ಸೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅವರನ್ನು ಕೇಳಿದ್ದರೆ ಒಪ್ಪಿಕೊಳ್ಳುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಅವಶ್ಯಕತೆ ಇದ್ದಿದ್ದರೆ ಕಂಡಿತ ಕೇಳುತ್ತಿದ್ದೆ. ಕಥೆಯಲ್ಲಿ ಪೊಲೀಸ್ ಆಫೀಸರ್ ಪಾತ್ರವೊಂದು ಇತ್ತು. ಬಾಲಯ್ಯನ ಖಡಕ್ ಕಾಪ್ ಆಗಿ ತೋರಿಸಬೇಕು ಎಂದುಕೊಂಡೆ. ಆದರೆ ಅದನ್ನು ಸರಿಯಾಗಿ ನನ್ನಿಂದ ಸಿನಿಮಾದಲ್ಲಿ ಬೆಸೆಯಲು ಸಾಧ್ಯವಾಗಲಿಲ್ಲ."

"ಜೈಲರ್ ಸಿನಿಮಾ ನೋಡಿದರೆ ಎಲ್ಲಾ ಪಾತ್ರಗಳಿಗೂ ಒಂದು ಆರಂಭ, ಒಂದು ಅಂತ್ಯ ಇರುತ್ತದೆ. ಆದರೆ ಬಾಲಯ್ಯ ಪಾತ್ರಕ್ಕೆ ಆ ರೀತಿ ಪವರ್ಫುಲ್ ಆದ ಆರಂಭ, ಅಂತ್ಯವನ್ನು ಸೇರಿಸಲು ಆಗಲಿಲ್ಲ. ಕ್ಲೈಮ್ಯಾಕ್ಸ್ನಲ್ಲಿ ನಾಲ್ಕು ಜನ ಒಟ್ಟಾಗಿ ಇರುವಂತೆ ತೋರಿಸೋದು ಕಷ್ಟ ಎಂದು ಸುಮ್ಮನಾದೆ. ಭವಿಷ್ಯದಲ್ಲಿ ನೋಡೋಣ" ಎಂದಿದ್ದಾರೆ.
"ರಜನಿಕಾಂತ್ ಸರ್ ಸಿನಿಮಾ ಅಂದಾಕ್ಷಣ ಯಾರು ಕಥೆ ಕೇಳಲಿಲ್ಲ. ಆದರೆ ನಾನೇ ಭೇಟಿಯಾಗಿ ಶಿವಣ್ಣ, ಮೋಹನ್ ಲಾಲ್, ಜಾಕಿಶ್ರಾಫ್ ಅವರಿಗೆ ಕತೆ ಹೇಳಿದೆ. ಅವರ ಪಾತ್ರಗಳ ಬಗ್ಗೆ ವಿವರಿಸಿದೆ. ಎಲ್ಲರೂ ಖುಷಿಯಿಂದ ಒಪ್ಪಿಕೊಂಡು ನಟಿಸಿದರು. ಚಿತ್ರದಲ್ಲಿ ರಜನಿಕಾಂತ್ ಪಾತ್ರ ಸಹಾಯ ಕೇಳುವ ಪಾತ್ರಗಳು ಅವು. ಹಾಗಾಗಿ ಆ ಪಾತ್ರಗಳಿಗೆ ಬಹಳ ತೂಕ ಇರುತ್ತದೆ. ಅದಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದು" ಎಂದಿದ್ದಾರೆ. ಬಾಲಯ್ಯ ಡೈಲಾಗ್ ಡೆಲಿವರಿ, ಪವರ್ಫುಲ್ ಪರ್ಫಾರ್ಮೆನ್ಸ್ಗೆ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದರೆ ಮತ್ತಷ್ಟು ಚೆನ್ನಾಗಿರುತ್ತಿತ್ತು. ಒಟ್ನಲ್ಲಿ ಬಾಲಯ್ಯ ಅಭಿಮಾನಿಗಳಂತೂ 'ಜೈಲರ್' ಚಿತ್ರದಲ್ಲಿ ನೆಚ್ಚಿನ ನಟನನ್ನು ಮಿಸ್ ಮಾಡಿಕೊಂಡ್ವಿ ಎನ್ನುತ್ತಿದ್ದಾರೆ.
ಶಿವಣ್ಣ ಮಾಡಿರುವ ನರಸಿಂಹ ಪಾತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಪರಭಾಷಿಕರು ಕೂಡ ಸೆಂಚುರಿ ಜಬರ್ದಸ್ತ್ ಪರ್ಫಾರ್ಮೆನ್ಸ್ ನೋಡಿ ಮನಸೋತಿದ್ದರು. ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ತಲೈವಾನ ಶಿವಣ್ಣ ಮೀರಿಸಿಬಿಟ್ಟಿದ್ದಾರೆ ಎಂದು ತಮಿಳು ಪ್ರೇಕ್ಷಕರೇ ಹೇಳುತ್ತಿದ್ದಾರೆ. ಇನ್ನು 'ಜೈಲರ್' ಚಿತ್ರಕ್ಕೆ ಹಾಗೂ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬೈಟ್ ಮಾಡಿ ಮಾತನಾಡಿರುವ ಶಿವಣ್ಣ "ಜೈಲರ್ ಚಿತ್ರದಲ್ಲಿ ನಾನು, ಮೋಹನ್ ಲಾಲ್ ಸರ್, ಜಾಕಿಶ್ರಾಫ್ ಸರ್ ಅತಿಥಿ ಪಾತ್ರದಲ್ಲಿ ನಟಿಸಿದ್ದೇವೆ. ನನ್ನ ಪಾತ್ರಕ್ಕೂ ನೀವು ಗೌರವ ಕೊಟ್ಟಿದ್ದೀರ. ರಜನಿ ಸರ್ ಹಾಗೂ ನೆಲ್ಸನ್ ಅವರಿಗೆ ಥ್ಯಾಂಕ್ಸ್ ಹೇಳೋಕೆ ಇಷ್ಟಪಡುತ್ತೀನಿ. ಅವರೊಟ್ಟಿಗೆ ಕಾಲ ಕಳೆದಿದ್ದು ಬಹಳ ಖುಷಿಯಾಯಿತು. ಎಲ್ಲರೂ ಸಿನಿಮಾ ನೋಡಿ" ಎಂದಿದ್ದಾರೆ.


Click it and Unblock the Notifications











