ನಿಖಿತಾ ತುಕ್ರಾಲ್ ತಲೆಮೇಲೆ ಮತ್ತೆ ವಿವಾದದ ಗೂಬೆ
ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ, ಗೌರಿ ಪುತ್ರ ನಿರ್ದೇಶಕರಾದ ಮಂಜು ಮಸ್ಕಲ್ ಮಟ್ಟಿ ಜೊತೆ ನಿಖಿತಾ ತುಕ್ರಾಲ್ ಜಗಳವಾಡಿದ್ದಾರೆ. ಮಂಜು ಹೇಳುವ ಪ್ರಕಾರ ಚಿತ್ರದಲ್ಲಿ ನಟಿಸಿರುವ ಕಲಾವಿದರಾದ ನಿಖಿತಾ ತುಕ್ರಾಲ್, ನಾಗಶೇಖರ್ ಹಾಗೂ ಸ್ಮಿತಾ ಈ ಮೂವರೂ ಮೊದಲು ಒಪ್ಪಿಕೊಂಡ ಪ್ರಕಾರ ಚಿತ್ರದ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲ.
"ಸದ್ಯ ಬೇರೆ ಚಿತ್ರದಲ್ಲಿ ಬ್ಯುಸಿಯಾಗಿದ್ದೀವಿ, ಸದ್ಯ ಬರಲು ಸಾಧ್ಯವಿಲ್ಲ" ಎಂಬುದು ಇವರೆಲ್ಲರ ಮಾತಂತೆ. ಇಷ್ಟೇ ಆಗಿದ್ದರೆ ಅವರು ಕಾಯುತ್ತಿದ್ದರಂತೆ. ಆದರೆ ಮಂಜುಗೆ ಸಿಕ್ಕಾಪಟ್ಟೆ ಬೈಯ್ದುಬಿಟ್ಟಿದ್ದಾರಂತೆ. ಹೀಗೆಂದು ಆರೋಪಿಸಿ ಗೌರಿ ಪುತ್ರ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಕಂಡಕಂಡವರ ಬಳಿ ಹೇಳಿಕೊಳ್ಳುತ್ತಿದ್ದಾರೆ.
ಆದರೆ ಇಲ್ಲೊಂದು ವಿಚಾರ ಮಾಡಲೇಬೇಕಾದ ಅಂಶವಿದೆ ಎಂಬುದು ವಿಚಾರವಂತರ ಮಾತು. ಸುಮ್ಮನೆ ನಿಖಿತಾ ಮೇಲೆ ಗೂಬೆ ಕೂರಿಸಲಾಗುತ್ತಿದೆಯೇ ಹೇಗೆ? ನಿಖಿತಾ ಮಾತ್ರವಲ್ಲ, ನಾಗಶೇಖರ್ ಹಾಗೂ ಸ್ಮಿತಾ ಕೂಡ ಹೀಗೇ ಮಾಡಿದ್ದಾರೆ ಎಂದರೆ ನಿರ್ಮಾಪಕರದ್ದೋ ಅಥವಾ ನಿರ್ದೇಶಕರದ್ದೋ ಪ್ರಾಬ್ಲಂ ಇರಬೇಕು. ಕಲಾವಿದರ ಸಂಭಾವನೆಯೇನಾದರೂ ಬಾಕಿ ಇದೆಯೇ ಅಥವಾ ಬೇರೆ ಇನ್ನೇನಾದರೂ ಕಾರಣವಿರಬಹುದೇ ಎಂಬುದು ಸದ್ಯಕ್ಕೆ ಮೂಡಿರುವ ಪ್ರಶ್ನೆ.
ಸದ್ಯಕ್ಕೆ ನಿಖಿತಾ, ತಮಿಳಿನಲ್ಲಿ ಕಾರ್ತಿ ನಾಯಕರಾಗಿರುವ 'ಅಲೆಕ್ಸ್ ಪಾಂಡ್ಯನ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅದಕ್ಕಾಗಿ ಸದ್ಯದಲ್ಲೇ ಅಮೆರಿಕಾಕ್ಕೂ ಹೋಗಲಿದ್ದಾರೆ. ಈ ವೇಳೆ ಗೌರಿ ಪುತ್ರ ಚಿತ್ರವು ಬಿಡುಗಡೆಗೆ ಕಾದಿದೆ. ಅಷ್ಟರಲ್ಲಿ, ಪ್ರಚಾರಕ್ಕೆ ಬರುತ್ತಿಲ್ಲ ಎಂದು ನಿಖಿತಾ ಮೇಲೆ ಗೂಬೆ ಕೂರಿಸಲಾಗಿದೆ. ಅವರ ಜೊತೆ ಇನ್ನಿಬ್ಬರು ಕನ್ನಡದ ಕಲಾವಿದರೂ ಇರುವುದು ನಿಖಿತಾಗೆ ಬಚಾವಾಗಲು ಇರುವ ದಾರಿ ಎನ್ನಬಹುದೇನೋ! (ಒನ್ ಇಂಡಿಯಾ ಕನ್ನಡ)


Click it and Unblock the Notifications












