"ರಾಷ್ಟ್ರಪ್ರಶಸ್ತಿ ನನಗೆ ಆ ದೇವರು ಕೊಟ್ಟ ಲಂಚ"; ನಿತ್ಯಾ ಮೆನನ್
ನಟಿ ನಿತ್ಯಾ ಮೆನನ್ 'ತಿರುಚಿತ್ರಾಂಬಲಂ' ಚಿತ್ರಕ್ಕಾಗಿ ಕಳೆದ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಸದ್ಯ ಆಕೆ ನಟಿಸಿರುವ 'ಇಡ್ಲಿ ಕಡೈ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿತ್ಯಾ ನಟನೆಯ 'ಕಾದಲಿಕ್ಕ ನೇರಮಿಲ್ಲೈ' ಸಿನಿಮಾ ಬಿಡುಗಡೆಯಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಬಹುಭಾಷಾ ನಟಿ ನನಗೆ ಚಿತ್ರರಂಗಕ್ಕೆ ಬರುವ ಆಸೆ ಇರಲಿಲ್ಲ. ಈ ಕ್ಷಣಕ್ಕೂ ನನಗೆ ನಟನೆ ಅಂದರೆ ಇಷ್ಟವಿಲ್ಲ, ಬೇಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಿತ್ಯಾ ಮೆನನ್ ಬಾಲನಟಿಯಾಗಿ ಚಿತ್ರವೊಂದರಲ್ಲಿ ನಟಿಸಿದ್ದರು. ಕನ್ನಡದ '7 ಓ ಕ್ಲಾಕ್' ಚಿತ್ರದ ಮೂಲಕ ನಾಯಕಿ ಆಗಿದ್ದರು. ನಿತ್ಯಾ ಪೋಷಕರು ಕೇರಳ ಮೂಲದವರು. ಹಾಗಾಗಿ ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಲು ಆರಂಭಿಸಿದರು. ತಮಿಳು ಚಿತ್ರರಂಗ ಪ್ರವೇಶಿಸಿದ ಬಳಿಕ ಆಕೆ ಹಿಂತಿರುಗಿ ನೋಡಲಿಲ್ಲ.

ಸದ್ಯ ಬಿಹೈಂಡ್ವುಡ್ಸ್ ಸಂದರ್ಶನದಲ್ಲಿ ನಟಿ ನಿತ್ಯಾ ಮೆನನ್ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ಬಹಳ ನೋವು ಅನುಭವಿಸಿದೆ. ಅದನ್ನೆಲ್ಲಾ ಮರೆತು ಈಗ ಖುಷಿಯಾಗಿ ಇದ್ದೀನಿ ಎಂದಿದ್ದಾರೆ. ನನಗೆ ಸುತ್ತಾಡುವುದು ಇಷ್ಟ. ಪೈಲೆಟ್ ಆಗಬೇಕು ಎಂದುಕೊಂಡಿದ್ದೆ. ಈಗ ಕೂಡ ವೈಲ್ಡ್ ಲೈಫ್ ಫೋಟೊಗ್ರಫರ್ ಆಗುವ ಆಸೆ ಇದೆ ಎಂದಿದ್ದಾರೆ.
ಎಲ್ಲರೂ ಇಷ್ಟಪಟ್ಟು ಚಿತ್ರರಂಗಕ್ಕೆ ಬರುತ್ತಾರೆ. ಅಥವಾ ಇಷ್ಟಪಟ್ಟು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಯಾಕೋ ನನಗೆ ಚಿತ್ರರಂಗ ಅಂದರೆ ಸಿನಿಮಾಗಳಲ್ಲಿ ನಟಿಸುವುದು ಅಂದರೆ ಇಷ್ಟ ಇಲ್ಲ ಎಂದಿದ್ದಾರೆ. ಈ ವಿಚಾರ ಹೇಳಿದರೆ ಎಲ್ಲರೂ ನಗುತ್ತಾರೆ, ಬೈಯುತ್ತಾರೆ. ಇಷ್ಟ ಚೆನ್ನಾಗಿ ನಟಿಸುತ್ತೀರಾ? ಬಣ್ಣದಲೋಕ ಇಷ್ಟ ಎನ್ನುತ್ತೀರಾ ಅಂತಾರೆ. ಆದರೆ ನಿಜಕ್ಕೂ ನನಗೆ ಇಷ್ಟವಿಲ್ಲ ಎಂದು ನಿತ್ಯಾ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಚಿತ್ರರಂಗ ತೊರೆಯಲು ಮನಸ್ಸು ಮಾಡಿದ್ದೆ. ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಿ ಸುಮ್ಮನಿದ್ದು ಬಿಡೋಣ ಮತ್ತೆ ನಟಿಸೋದು ಬೇಡ ಎಂದುಕೊಂಡಿದ್ದೆ. ಅಷ್ಟರಲ್ಲೇ 'ತಿರುಚಿತ್ರಾಂಬಲಂ' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂತು. ದೇವರು ಇಲ್ಲೇ ಇರು ಎಂದು ಈ ಮೂಲಕ ಹೇಳಿದಂತಿದೆ. ಒಂದರ್ಥದಲ್ಲಿ ಪ್ರಶಸ್ತಿ ಎನ್ನುವ ಲಂಚ ಕೊಟ್ಟು ಇಲ್ಲೇ ಉಳಿಯುವಂತೆ ಹೇಳಿದ್ದಾನೆ ಎಂದು ನಿತ್ಯಾ ಹೇಳಿದ್ದಾರೆ.
ನನಗೆ ಚಿಕ್ಕಂದಿನಿಂದಲೂ ಮೇಕಪ್ ಹಾಕುವುದು, ವೇದಿಕೆ ಏರುವುದು, ಡ್ಯಾನ್ಸ್ ಮಾಡುವುದು ಇಷ್ಟವಿಲ್ಲ, ಆದರೆ ಅಮ್ಮ ಎಲ್ಲದಕ್ಕೂ ನನ್ನನ್ನು ಹೋಗುವಂತೆ ಹುರಿದುಂಬಿಸುತ್ತಿದ್ದರು. ನಮ್ಮ ತಾಯಿಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟ ಇತ್ತು. ನಾನು ಒಬ್ಬಳೇ ಮಗಳು. ನನಗೆ ಸಹೋದರ, ಸಹೋದರಿ ಯಾರು ಇಲ್ಲ. ಅಪ್ಪ, ಅಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಹಾಗಾಗಿ ಒಬ್ಬೊಂಟಿಯಾಗಿ ಬೆಳೆದವಳು ಎಂದು ವಿವರಿಸಿದ್ದಾರೆ.
ಚಿತ್ರರಂಗದಲ್ಲಿ ಸಾಮಾನ್ಯವಾಗಿ ನಟರನ್ನು ಕೊಂಡಾಡುತ್ತಾರೆ. ಕೆಲವೊಮ್ಮೆ ನಟಿಯರು ಚೆನ್ನಾಗಿ ನಟಿಸಿದರೂ ನಟನ ಮುಂದೆ ಅದು ಗೌಣ ಆಗಿಬಿಡುತ್ತದೆ. ಆದರೆ ರಾಷ್ಟ್ರ ಪ್ರಶಸ್ತಿ ಬಂದಾಗ ಏನೋ ಸಾಧಿಸಿದ್ದೀನಿ, ಇಷ್ಟು ಸಾಕು ಎನಿಸಿತು ಎಂದು ನಿತ್ಯಾ ವಿವರಿಸಿದ್ದಾರೆ. ನಾನು ಪಾತ್ರಗಳ ಆಯ್ಕೆಯಲ್ಲಿ ಬಹಳ ಚೂಸಿ ಏನಲ್ಲ, ನನಗೆ ಇಷ್ಟವಾದರೆ ಕೊಂಚ ಕೂಡ ಯೋಚಿಸದೇ ಒಪ್ಪಿಕೊಂಡುಬಿಡುತ್ತೇನೆ ಎಂದಿದ್ದಾರೆ.


Click it and Unblock the Notifications











