'ಗಜಿನಿ- 2'.. 'ಸ್ಪೈಡರ್' ಫ್ಲಾಪ್.. ಅಲ್ಲು ಅರ್ಜುನ್ ಜೊತೆ ಸಿನಿಮಾ: ಮೌನ ಮುರಿದ ಮುರುಗದಾಸ್ ಹೇಳಿದ್ದಿಷ್ಟು
ತಮಿಳಿನ ಖ್ಯಾತ ನಿರ್ದೇಶಕ ಎ. ಆರ್ ಮುರುಗದಾಸ್ ಇತ್ತೀಚೆಗೆ ಕೊಂಚ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸದ್ಯ '16 ಆಗಸ್ಟ್ 1947' ಹೆಸರಿನ ಸಿನಿಮಾವೊಂದನ್ನು ಮುರಗದಾಸ್ ನಿರ್ಮಾಣ ಮಾಡಿದ್ದು ರಿಲೀಸ್ಗೆ ರೆಡಿಯಾಗಿದೆ. ಸಿನಿಮಾ ಪ್ರಮೋಷನ್ ಭಾಗವಾಗಿ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಗಜಿನಿ-2 ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ಸಿನಿಮಾಗಳ ಬಗ್ಗೆಯೂ ಮುರಗದಾಸ್ ಮೌನ ಮುರಿದಿದ್ದಾರೆ.
'ರಮಣ', 'ಗಜಿನಿ', '7th ಸೆನ್ಸ್', 'ತುಪಾಕಿ', 'ಕತ್ತಿ' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ನಿರ್ದೇಶಿಸಿದ ಮುರುಗದಾಸ್ ಮುಂದಿನ ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ. ರಜನಿಕಾಂತ್ ನಟನೆಯ 'ದರ್ಬಾರ್' ನಂತರ ಯಾವುದೇ ಹೊಸ ಚಿತ್ರಕ್ಕೆ ಅವರು ಕೈ ಹಾಕಲಿಲ್ಲ. ಕೊರೊನಾ ಹಾವಳಿ ಲಾಕ್ಡೌನ್ನಿಂದ ಕೊಂಚ ಹಿನ್ನಡೆ ಆಯಿತು, ಶೀಘ್ರದಲ್ಲೇ ತಮ್ಮ ನಿರ್ದೇಶನದ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಈ ನಡುವೆ 'ಗಜಿನಿ' ಸೀಕ್ವೆಲ್ ಬಗ್ಗೆಯೂ ಮಾತನಾಡಿದ್ದಾರೆ.

18 ವರ್ಷಗಳ ಹಿಂದೆ ಮುರುಗದಾಸ್ ನಿರ್ದೇಶನದ 'ಗಜಿನಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ತಮಿಳು ನಟ ಸೂರ್ಯಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಸಿನಿಮಾ ಯಾವ ರೇಂಜ್ಗೆ ಸದ್ದು ಮಾಡ್ತು ಅಂದ್ರೆ, ಆಮೀರ್ ಖಾನ್ ಕರೆದು ಈ ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡಿದ್ದರು. ಬಾಲಿವುಡ್ನಲ್ಲೂ ಸಿನಿಮಾ ಧೂಳೆಬ್ಬಿಸಿತ್ತು. ಹಾಗಾಗಿ ಈ ಸಿನಿಮಾ ಸೀಕ್ವೆಲ್ ಬಗ್ಗೆ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆ ಇದೆ. ಆದರೆ 'ಗಜಿನಿ'- 2ಗಾಗಿ ಕಾಯ್ತಿದ್ದವರಿಗೆ ಮುರುಗದಾಸ್ ನಿರಾಸೆ ಮೂಡಿಸಿದ್ದಾರೆ. "ಗಜಿನಿ' ಯಾಕೆ, ಯಾವುದಾದರೂ ಹೊಸ ಸಿನಿಮಾ ಮಾಡೋಣ ಬಿಡಿ" ಎಂದಿದ್ದಾರೆ.
"ಬಾಲಿವುಡ್ನಲ್ಲಿ 'ಗಜಿನಿ'-2 ಮಾಡುವ ಬಗ್ಗೆ ನನಗೆ ಯಾವುದೇ ಐಡಿಯಾ ಇಲ್ಲ. ಯಾಕಂದರೆ ಆ ಹುಡುಗಿ ಸತ್ತಿದ್ದಾಳೆ, ಆತ ಶಾರ್ಟ್ ಟೈಂ ಮೆಮೊರಿ ಲಾಸ್ ಪೇಷೆಂಟ್ ಆಗಿದ್ದಾನೆ. ಕಂಡಿತ ಬಾಲಿವುಡ್ನಲ್ಲಿ ನಾನು ಏನಾದರೂ ಫ್ರೆಶ್ ಆಗಿ ಮಾಡ್ತೀನಿ. ಒಂದೆರಡು ಕಥೆಗಳಿವೆ. ಮುಂದಿನ ದಿನಗಳಲ್ಲಿ ನಾನು ಸಿನಿಮಾ ಮಾಡ್ತೀನಿ" ಎಂದು ಮುರುಗದಾಸ್ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ತೆಲುಗು ನಟ ಅಲ್ಲು ಅರ್ಜುನ್ ಜೊತೆ ಮುರುಗದಾಸ್ ಸಿನಿಮಾ ಮಾಡ್ತಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ನಿರೀಕ್ಷೆ ಮಾಡಬಹುದಾ ಎನ್ನುವ ಪ್ರಶ್ನೆಗೆ "ನಟ, ನಿರ್ದೇಶಕ ಅಂದ್ಮೇಲೆ ಆಗಿಂದಾಗ್ಗೆ ಭೇಟಿ ಮಾಡುತ್ತಿರುತ್ತೀವಿ. ಸಿನಿಮಾಗಳ ಬಗ್ಗೆ ಚರ್ಚೆ ಕೂಡ ನಡೆಯುತ್ತಿರುತ್ತದೆ. ಆದರೆ ಈಗಲೇ ಆ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಅದರ ಬಗ್ಗೆ ಮಾತನಾಡಿದರೆ ಅದೇ ದೊಡ್ಡ ಸುದ್ದಿ ಆಗಿಬಿಡುತ್ತದೆ" ಎಂದಿದ್ದಾರೆ.

ಮಹೇಶ್ ಬಾಬು ನಟನೆಯ 'ಸ್ಪೈಡರ್' ಸಿನಿಮಾ ಸೋಲಿನ ಬಗ್ಗೆ ಕೂಡ ಮುರುಗದಾಸ್ ಮಾತನಾಡಿದ್ದಾರೆ. "ಹಿಟ್ ಸಿನಿಮಾ ಆದರೂ ಫ್ಲಾಪ್ ಸಿನಿಮಾ ಆದರೂ ಒಂದೇ ರೀತಿ ಶ್ರಮ ಇರುತ್ತದೆ. ಆದರೆ ಅದು ಪ್ರೇಕ್ಷಕರಿಗೆ ಇಷ್ಟ ಆದರೆ ಹಿಟ್ ಆಗುತ್ತದೆ. ಇಲ್ಲದಿದ್ದರೆ ಫ್ಲಾಪ್ ಆಗುತ್ತದೆ. ಒಂದು ಸಿನಿಮಾ ಫ್ಲಾಪ್ ಆದರೆ ಮತ್ತೊಂದು ಸಿನಿಮಾ ನೋಡಿ ಹಿಟ್ ಕೊಡಲು ಪ್ರಯತ್ನಿಸುತ್ತಿರುತ್ತೇನೆ ಎಂದು ಮುರುಗದಾಸ್ ವಿವರಿಸಿದ್ದಾರೆ.
1993ರಲ್ಲಿ 'ಮಧುರ ಮೀನಾಕ್ಷಿ' ಎನ್ನುವ ಸಿನಿಮಾಗೆ ಬರಹಗಾರರಾಗಿ ಚಿತ್ರರಂಗಕ್ಕೆ ಬಂದ ಮುರುಗದಾಸ್, 2001ರಲ್ಲಿ ನಿರ್ದೇಶಕರಾಗಿ ಭಡ್ತಿ ಪಡೆದರು. ಅಜಿತ್ ನಟಿಸಿದ 'ದೀನ' ಮುರುಗದಾಸ್ ನಿರ್ದೇಶಕರಾಗಿ ಚೊಚ್ಚಲ ಸಿನಿಮಾ. ಇನ್ನು ತಮ್ಮದೇ ಸೂಪರ್ ಹಿಟ್ ಸಿನಿಮಾಗಳಾ 'ಗಜಿನಿ' ಹಾಗೂ 'ತುಪಾಕಿ' ಸಿನಿಮಾಹಗಳನ್ನು ಬಾಲಿವುಡ್ನಲ್ಲಿ ರೀಮೆಕ್ ಮಾಡಿ ಅಲ್ಲೂ ಸಕ್ಸಸ್ ಕಂಡಿದ್ದಾರೆ. 2011ರಲ್ಲಿ ಬಂದ 'ಎಂಗೆಯುಂ ಎಪ್ಪೊದುಂ' ಸಿನಿಮಾ ಮೂಲಕ ನಿರ್ಮಾಪಕರಾದರು. ಇದೀಗ '16 ಆಗಸ್ಟ್ 1947' ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ತೆಲುಗಿನಲ್ಲೂ ಸಿನಿಮಾ ರಿಲೀಸ್ ಆಗ್ತಿದೆ.


Click it and Unblock the Notifications











