ಅಜಿತ್ ಅಭಿಮಾನಿಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ! ಹುಚ್ಚಾಟ ಮೆರೆದ ಅಭಿಮಾನಿಗಳು
ತಮಿಳುನಾಡಿನಲ್ಲಿ ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ನಡುವಿನ ವೈರತ್ವ ಇನ್ನಾವುದೇ ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಲ್ಲ. ಅಜಿತ್ ಹಾಗೂ ವಿಜಯ್ ಅಭಿಮಾನಿಗಳದ್ದು ಸದಾ ಕಿತ್ತಾಟ. ಈ ಬಾರಿಯಂತೂ ಈ ವೈಷಮ್ಯ ಮೇರೆ ಮೀರಿದೆ.
ಅಜಿತ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ವಲಿಮೈ' ನಿನ್ನೆಯಷ್ಟೆ (ಫೆಬ್ರವರಿ 24) ಬಿಡುಗಡೆ ಆಗಿದೆ. ಮೂರು ವರ್ಷಗಳ ನಂತರ ಬಿಡುಗಡೆ ಆದ ಮೊದಲ ಅಜಿತ್ ಸಿನಿಮಾ ಇದಾಗಿರುವ ಕಾರಣ ಅಜಿತ್ ಅಭಿಮಾನಿಗಳು ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಆದರೆ ಇದು ವಿಜಯ್ ಅಭಿಮಾನಿಗಳ ಈರ್ಷ್ಯೆಗೆ ಕಾರಣವಾಗಿದೆ.
ನಿನ್ನೆ ತಮಿಳುನಾಡಿನ ಕೊಯಂಬತ್ತೂರಿನ ಗಂಗಾ, ತುಂಗಾ, ಕಾವೇರಿ ಚಿತ್ರಮಂದಿರದ ಬಳಿ ಕೆಲವು ಅಭಿಮಾನಿಗಳು ಅಜಿತ್ರ ಕಟೌಟ್, ಫ್ಲೆಕ್ಸ್ ಕಟ್ಟುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಆಗಮಿಸಿದ ಕೆಲವರು ಅಭಿಮಾನಿಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಪೆಟ್ರೋಲ್ ಬಾಂಬ್ ದಾಳಿಯಲ್ಲಿ ಒಬ್ಬ ವ್ಯಕ್ತಿಗೆ ಕಾಲಿಗೆ ಸುಟ್ಟ ಗಾಯಗಳಾಗಿವೆ. ಜೊತೆಗೆ ಅಜಿತ್ರ ಕೆಲವು ಫ್ಲೆಕ್ಸ್ಗಳು ಸುಟ್ಟುಹೋಗಿವೆ. ಈ ದಾಳಿ ಚಿತ್ರಮಂದಿರದ ಬಳಿ ಕೆಲ ಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿತು.
ಘಟನೆ ನಡೆದ ಕೂಡಲೇ ಸಮೀಪದ ಕೊಟ್ಟೂರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಹಾಜರಿದ್ದ ಅಜಿತ್ ಅಭಿಮಾನಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಯಾರು, ಯಾವ ಕಾರಣಕ್ಕೆ ಪೆಟ್ರೊಲ್ ಬಾಂಬ್ ಎಸೆದಿದ್ದಾರೆಂದು ಗೊತ್ತಿಲ್ಲವೆಂದು ಪೊಲೀಸರು ಹೇಳಿದ್ದಾರಾದರೂ, ಅಜಿತ್ ಅಭಿಮಾನಿಗಳು, ಇದು ವಿಜಯ್ ಅಭಿಮಾನಿಗಳದ್ದೇ ಕೃತ್ಯವೆಂದು ಹೇಳಿದ್ದಾರೆ.
ಮತ್ತೊಂದೆಡೆ, ಅಜಿತ್ ಅಭಿಮಾನಿಗಳು ಸಹ ಹುಚ್ಚಾಟ ಮೆರೆದಿದ್ದಾರೆ. ಅಜಿತ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಲು ಸ್ಥಳೀಯ ಅಂಗಡಿಗಳಿಂದ, ಹಾಲು, ಮೊಸರು ಕಳ್ಳತನ ಮಾಡಿದ್ದಾರೆ. ಕೆಲವೆಡೆ ಅಂಗಡಿಯವರೊಂದಿಗೆ ಜಗಳ ಸಹ ಮಾಡಿದ್ದಾರೆ.
'ವಲಿಮೈ' ಸಿನಿಮಾದ ನಿರ್ಮಾಪಕ ಬೀನಿ ಕಪೂರ್ ನಿನ್ನೆ ಚೆನ್ನೈನ ರೋಹಿಣಿ ಸಿಲ್ವಿರ್ ಸ್ಕ್ರೀನ್ ಚಿತ್ರಮಂದಿರಕ್ಕೆ ಆಗಮಿಸಿದಾಗ ಕಾರನ್ನು ಅಡ್ಡಗಟ್ಟಿದ ಅಜಿತ್ ಅಭಿಮಾನಿಗಳು, ಇಡೀಯ ಕಾರಿನ ಮೇಲೆ ಮೊಸರು ಸುರಿದು ಅಭಿಷೇಕ (?!) ಮಾಡಿದ್ದಾರೆ. ಮೊಸರಿನಲ್ಲಿ ಮುಳುಗಿದ ಬೋನಿ ಕಪೂರ್ ಕಾರಿನ ವಿಡಿಯೋ, ಚಿತ್ರಗಳು ಇದೀಗ ವೈರಲ್ ಆಗಿವೆ.
ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ನಡುವಿನ ವೈರತ್ವ ಬಹಳ ಹಳೆಯದ್ದು. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ ಘಟನೆಗಳು ಸಹ ನಡೆದಿವೆ. ಅಭಿಮಾನಿಗಳ ಈ ದುರ್ವರ್ತನೆಯಿಂದ ಬೇಸತ್ತ ಅಜಿತ್ 2017ರಲ್ಲಿ ಪ್ರಕಟಣೆ ಹೊರಡಿಸಿ, ಫ್ಯಾನ್ಸ್ ಕ್ಲಬ್ಗಳ ಹೆಸರಿನಲ್ಲಿ ಇತರ ನಟರ, ಪತ್ರಕರ್ತರ ವಿರುದ್ಧ ಟೀಕೆಗಳನ್ನು, ನಿಂದನೆ ಮಾಡುವುದನ್ನು ಖಂಡಿಸಿದ್ದರು. ಅಲ್ಲದೆ ಈ ಫ್ಯಾನ್ಸ್ ಕ್ಲಬ್ಗಳಿಗೂ ತಮಗೂ ಸಂಬಂಧವಿಲ್ಲ ಎಂದು ಸಹ ಹೇಳಿದ್ದರು.
ಕೆಲವು ತಿಂಗಳ ಹಿಂದಷ್ಟೆ ಹೊರಡಿಸಿದ್ದ ಮತ್ತೊಂದು ಹೇಳಿಕೆಯಲ್ಲಿ ತಮ್ಮ ಹೆಸರಿನ ಮುಂದೆ ಇರುವ 'ತಲಾ' ಉಪಮಾನವನ್ನು ಕೈಬಿಡಬೇಕೆಂದು ಇನ್ನುಮುಂದೆ ತಮ್ಮನ್ನು ತಲಾ ಎಂದು ಸಂಬೋಧಿಸಬಾರದು ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದ್ದರು.


Click it and Unblock the Notifications











