ಹಸೆಮಣೆ ಏರಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ; ಫೋಟೊಗಳು ವೈರಲ್
ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯ ಅರ್ಜುನ್ ಹಸೆಮಣೆ ಏರಿದ್ದಾರೆ. ತಮಿಳು ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅರ್ಜುನ್ ಸಂಬಂಧಿಕರು ಹಾಗೂ ಕೆಲ ಗಣ್ಯರ ಸಮ್ಮುಖದಲ್ಲಿ ಈ ಮದುವೆ ನಡೆದಿರುವುದು ವಿಶೇಷ.
3 ದಿನಗಳಿಂದ ಈ ಕಲ್ಯಾಣ ಮಹೋತ್ಸವ ನಡೆಯಿತು. ನಿನ್ನೆ(ಜೂನ್ 10) ಮಾಂಗಲ್ಯಧಾರಣೆ ನಡೆದಿದೆ. ಜೂನ್ 7 ರಂದು ಮದುವೆ ಶಾಸ್ತ್ರಗಳು ಪ್ರಾರಂಭವಾಯಿತು. ಮೊದಲ ದಿನ ಅರಿಶಿನ ಶಾಸ್ತ್ರ, 2ನೇ ದಿನ ಸಂಗೀತ್ ಕಾರ್ಯಕ್ರಮ, ಜೂನ್ 10 ರಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಮಾಂಗಲ್ಯಧಾರಣೆ ನೆರವೇರಿದೆ. ಐಶ್ವರ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮದುವೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಚೆನ್ನೈನ ಗೇರುಗಂಬಕ್ಕಂನಲ್ಲಿ ಅರ್ಜುನ್ ಸರ್ಜಾ ತಮ್ಮ ಇಷ್ಟ ದೇವರು ಹನುಮಂತನ ಆಲಯ ಕಟ್ಟಿಸಿದ್ದಾರೆ. ಅಲ್ಲೇ ಇದೀಗ ಮಗಳ ಮದುವೆ ನಡೆದಿದೆ. ಇದೇ ತಿಂಗಳ 14ರಂದು ಚೆನ್ನೈನ ಲೀಲಾ ಪ್ಯಾಲೇಸ್ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸೆಲೆಬ್ರಿಟಿಗಳನ್ನು ಅರ್ಜುನ್ ಸರ್ಜಾ ಆಹ್ವಾನಿಸಲಿದ್ದಾರೆ.
ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ ಕನ್ನಡದ 'ಪ್ರೇಮ ಬರಹ' ಚಿತ್ರದಲ್ಲಿ ಐಶ್ವರ್ಯ ನಟಿಸಿದ್ದರು. ಅಂದಹಾಗೆ ಅರ್ಜುನ್ ಸರ್ಜಾ ನಿರೂಪಣೆಯ 'ಸರ್ವೈವರ್' ಶೋನಲ್ಲಿ ಉಮಾಪತಿ ಸ್ಪರ್ಧಿಸಿದ್ದರು. ಶೋ ವೇಳೆ ಆತನ ಆಟಿಟ್ಯೂಡ್ ನೋಡಿ ಮಗಳಿಗೆ ಇವನು ಸರಿಯಾದ ಜೋಡಿ ಎಂದು ನಿರ್ಧರಿಸಿದ್ದಾಗಿ ಅರ್ಜುನ್ ಸರ್ಜಾ ಹೇಳಿದ್ದರು.
ಅತ್ತ ತಂಬಿ ರಾಮಯ್ಯ ಕೂಡ ಮಗನ ಮದುವೆಗೆ ಹುಡುಗಿಯ ಹುಡುಕಾಟ ನಡೆಸಿದ್ದರು. ಬಳಿಕ ಅರ್ಜುನ್ ಸರ್ಜಾ ಖುದ್ದು ಉಮಾಪತಿ ಬಗ್ಗೆ ಮಾತನಾಡಿ ಮದುವೆಗೆ ಒಪ್ಪಿಸಿದ್ದರು. ಅದೇ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಎರಡೂ ಕುಟುಂಬಗಳು ಭೇಟಿಯಾಗಿ ಮದುವೆ ಬಗ್ಗೆ ಚರ್ಚೆ ನಡೆಸಿ ಒಪ್ಪಿದರು. ಇದೀಗ ಐಶ್ವರ್ಯ- ಉಮಾಪತಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಉಮಾಪತಿ ತಮಿಳು ಚಿತ್ರರಂಗ ಪ್ರವೇಶಿಸುವ ಲೆಕ್ಕಾಚಾರದಲ್ಲಿದ್ದಾರೆ.

ಅರ್ಜುನ್ ಸರ್ಜಾ ಹಾಗೂ ನಿವೇದಿತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳು ಐಶ್ವರ್ಯ ಮತ್ತು ಕಿರಿಯವಳು ಅಂಜನಾ. ಚಿತ್ರರಂಗದಲ್ಲಿ ಐಶ್ವರ್ಯಾ ಸರ್ಜಾ ಯಶಸ್ವಿಯಾಗಲಿಲ್ಲ. ಇದರಿಂದ ಮದುವೆಯಾಗಿ ಸೆಟ್ಲ್ ಆಗಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮತ್ತೆ ಬಣ್ಣ ಹಚ್ಚುತ್ತಾರಾ ಕಾದು ನೋಡಬೇಕಿದೆ.
2013ರಲ್ಲಿ 'ಪಟ್ಟಾತು ಯಾನೆ' ತಮಿಳು ಚಿತ್ರದಲ್ಲಿ ಮೊದಲಿಗೆ ಐಶ್ವರ್ಯ ಸರ್ಜಾ ನಟಿಸಿದ್ದರು. 5 ವರ್ಷಗಳ ನಂತರ 'ಪ್ರೇಮ ಬರಹ' ಚಿತ್ರದಲ್ಲಿ ಕಾಣಿಸಿಕೊಂಡರು. ಸಿನಿಮಾ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ಗೆಲ್ಲಲಿಲ್ಲ.


Click it and Unblock the Notifications











