ನಟ ಸೂರ್ಯ ಪ್ರತಿಕೃತಿ ದಹಿಸಿದ ಪಿಎಂಕೆ ಸದಸ್ಯರು: ಕಾರಣ?
ಸೂರ್ಯ ನಟನೆಯ ತಮಿಳು ಸಿನಿಮಾ 'ಎತ್ತಾರ್ಕು ತುನಿಂದವನ್' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಒಳ್ಳೆಯ ವಿಮರ್ಶೆಗಳು ಸಿನಿಮಾ ಬಗ್ಗೆ ಕೇಳಿ ಬರುತ್ತಿವೆ.
ನಿನ್ನೆ 'ಎತ್ತಾರ್ಕು ತುನಿಂದವನ್' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪಿಎಂಕೆ (ಪಟ್ಟಾಲಿ ಮಕ್ಕಳ್ ಕಚ್ಚಿ) ಸದಸ್ಯರು ತಮಿಳುನಾಡಿನ ಕೆಲವು ಕಡೆ ನಟ ಸೂರ್ಯರ ಪ್ರತಿಕೃತಿ ದಹಿಸಿದರು. ಪಿಎಂಕೆ ಮಾತ್ರವೇ ಅಲ್ಲದೆ ವನ್ನಿಯರ್ ಸಂಘ ಸಹ ಸೂರ್ಯ ವಿರುದ್ಧ ಪ್ರತಿಭಟನೆಗಳನ್ನು ಮಾಡಿದೆ.
ಸೂರ್ಯ ನಿರ್ಮಾಣ ಮಾಡಿ ನಟಿಸಿದ್ದ ಈ ಹಿಂದಿನ ಸಿನಿಮಾ 'ಜೈ ಭೀಮ್'ನಲ್ಲಿ ವನ್ನಿಯರ್ ಸಂಘಕ್ಕೆ ಅಪಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಆಗಿನಿಂದಲೂ ಸೂರ್ಯಾರ ಕ್ಷಮೆಗೆ ಒತ್ತಾಯಿಸುತ್ತಿರುವ ಪಿಎಂಕೆ ಹಾಗೂ ವನ್ನಿಯರ್ ಸಂಘವು ನಿನ್ನೆ ಸೂರ್ಯರ ಹೊಸ ಸಿನಿಮಾ ಬಿಡುಗಡೆ ವೇಳೆ ಮತ್ತೆ ಪ್ರತಿಭಟನೆ ನಡೆಸಿ ಸೂರ್ಯಾರ ಪ್ರತಿಕೃತಿ ದಹಿಸಿದೆ.

'ಜೈ ಭೀಮ್' ಸಿನಿಮಾದಲ್ಲಿ ಭ್ರಷ್ಟ, ಹಿಂಸಾ ಪ್ರವೃತ್ತಿಯ ಪೊಲೀಸ್ ಅಧಿಕಾರಿಯು ವನ್ನಿಯರ್ ಸಮುದಾಯವದವನು ಎಂಬಂತೆ ಚಿತ್ರಿಸಲಾಗಿದೆ ಎಂಬುದು ವನ್ನಿಯರ್ ಸಂಘದ ಆರೋಪ. ಪೊಲೀಸ್ ಅಧಿಕಾರಿ ಇರುವ ದೃಶ್ಯವೊಂದರಲ್ಲಿ ವನ್ನಿಯರ್ ಸಮುದಾಯದ ಗುರುತಾಗಿರುವ ಚೆಂಬು ಹಾಗೂ ಕತ್ತಿಗಳು ಹೊಂದಿರುವ ಕ್ಯಾಲೆಂಡರ್ ತೂಗು ಹಾಕಲಾಗಿರುತ್ತದೆ. ಇದೇ ಕಾರಣಕ್ಕೆ 'ಜೈ ಭೀಮ್' ಸಿನಿಮಾ ಬಿಡುಗಡೆ ಆದಾಗಿನಿಂದಲೂ ವನ್ನಿಯರ್ ಸಂಘವು ಸೂರ್ಯ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
'ಜೈ ಭೀಮ್' ಸಿನಿಮಾದ ನಿರ್ದೇಶಕ ಟಿಜೆ ಜ್ಞಾನವೇಲು ಈಗಾಗಲೇ ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಹಾಗೂ ಕ್ಷಮೆಯನ್ನೂ ಕೇಳಿದ್ದಾರೆ. ತಾವು ಉದ್ದೇಶಪೂರ್ವಕವಾಗಿ ಆ ದೃಶ್ಯದಲ್ಲಿ ಕ್ಯಾಲೆಂಡರ್ ತೂಗು ಹಾಕಿಲ್ಲ, ಬದಲಿಗೆ ಅದೊಂದು ಕಾಕತಾಳೀಯ ಅಷ್ಟೆ ಎಂದಿದ್ದಾರೆ. ಅಲ್ಲದೆ ಸಿನಿಮಾದ ಕ್ರಿಯಾತ್ಮಕ ಕಾರ್ಯಕ್ಕೂ ನಿರ್ಮಾಪಕ ಸೂರ್ಯಗೂ ಸಂಬಂಧ ಇಲ್ಲ ಹಾಗಾಗಿ ಅವರ ಮೇಲೆ ಆರೋಪ ಮಾಡುವುದು, ಅವರ ಕ್ಷಮೆಗೆ ಒತ್ತಾಯಿಸುವುದು ಸರಿಯಲ್ಲ ಎಂದು ಸಹ ಜ್ಞಾನವೇಲು ಹೇಳಿದ್ದರು. ಆದರೂ ಸಹ ಸೂರ್ಯ ವಿರುದ್ಧ ಪ್ರತಿಭಟನೆಗಳು ಅಲ್ಲಲ್ಲಿ ನಡೆಯುತ್ತಿವೆ.
ಇದೀಗ ಸೂರ್ಯ ನಟನೆಯ 'ಎತ್ತಾರ್ಕು ತುನಿಂದವನ್' ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾವನ್ನು ಪಾಂಡಿರಾಜ್ ನಿರ್ದೇಶನ ಮಾಡಿದ್ದು ಸಿನಿಮಾವು ಅಶ್ಲೀಲ ವಿಡಿಯೋ ಚಿತ್ರಿಸಿ ಹರಿಬಿಡುವವರ ಸುತ್ತ ಇದೆ. ಇದೊಂದು ಕೌಟುಂಬಿಕ ಸಿನಿಮಾ ಸಹ ಆಗಿದ್ದು ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಸಿನಿಮಾವನ್ನು ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ನಾಯಕಿ ಪ್ರಿಯಾಂಕಾ ಅರುಳ್ ನಾಯಕಿ.


Click it and Unblock the Notifications











