ಕನ್ನಡದ ಪ್ರಣೀತಾ ಮೇಲೆ ತಮಿಳಿನಲ್ಲಿ ಭಾರೀ ಆರೋಪ
ಅದೂ ಅತಿಂಥ ಆರೋಪವಲ್ಲ, ಭಾರೀ ಧಿಮಾಕಿನ ಹುಡುಗಿ ಎಂಬ ಆರೋಪ."ನೀವು ನಟಿಸಿರುವ ಕೆಲವು ಶಾಟ್ ಗಳ ಔಟ್ಪುಟ್ ಸರಿಯಾಗಿ ಬಂದಿಲ್ಲ, ಅದನ್ನು ರೀಶೂಟ್ ಮಾಡೋಣ ಅಂತ ನಿರ್ಧರಿಸಿದ್ದೀವಿ" ಅಂತ ಆ ಚಿತ್ರದ ತಮಿಳು ನಿರ್ದೇಶಕರು ಫೋನ್ ಮಾಡಿದ್ದಾರೆ. ಆದರೆ, "ನೋ.. ನೋ.. ನಂಗೆ ಟೈಮಿಲ್ಲ.. ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೀನಿ... ಡಿಸ್ಟರ್ಬ್ ಮಾಡಬೇಡಿ.." ಹೀಗಂತ ಮಾತನ್ನಾಡಿದ್ದಾರೆ ಪ್ರಣೀತಾ ಎಂಬುದು ಅಲ್ಲಿಂದ ಕೇಳಿಬರುತ್ತಿರುವ ದೂರು.
ಈ ಸುದ್ದಿ ತಮಿಳು ಚಿತ್ರರಂಗದಲ್ಲೀಗ ಭಾರೀ ಸುದ್ದಿಯಾಗಿ ಸುತ್ತುತ್ತಿದೆ. ನಟ ಸೂರ್ಯ ತಮ್ಮ ಕಾರ್ತಿ ನಾಯಕನಾಗಿರುವ 'ಶಕುನಿ' ಚಿತ್ರದ ನಾಯಕಿ ಪ್ರಣೀತಾ. ಈ ಚಿತ್ರದ ನಿರ್ದೇಶಕರು ಶಂಕರ್ ದಯಾಳ್. ಇಡೀ ತಮಿಳು ಚಿತ್ರರಂಗ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದೆ. ಚಿತ್ರದ ಕಥೆ, ಕಾರ್ತಿ ವೃತ್ತಿಜೀವನ ಎಲ್ಲವೂ ಚೆನ್ನಾಗಿದೆ. ಜೊತೆಗೆ ನಿರ್ದೇಶಕ ಶಂಕರ್ ದಯಾಳ್ ಮೇಲೆ ಭಾರೀ ಭರವಸೆಯೂ ಇದೆ ಎಂಬ ಮಾತಿದೆ.
ಆದರೆ ಬಂದ ಆರೋಪದ ಬಗ್ಗೆ ಪ್ರಣೀತಾರನ್ನು ಕೇಳಿದರೆ, "ಇವೆಲ್ಲಾ ಸುಳ್ಳು.. ನಾನು ಅಂತಹ ಹುಡುಗಿಯಲ್ಲ. ಹಾಗೆ ಹೇಳೋದಾದ್ರೆ, ನಾನು ಇದುವರೆಗೆ ನಟಿಸಿದ ಎಲ್ಲಾ ಚಿತ್ರಗಳಿಗಿಂತ ತಮಿಳಿನ 'ಸಗುಣಿ' ಚಿತ್ರ ಅತ್ಯುತ್ತಮವಾಗಿದೆ. ಯಾರೋ ಆಗದವರು ಬೇಕಂತಲೇ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ನಿಮಗೆ ಸಂಶಯವಿದ್ದರೆ ಚಿತ್ರದ ನಿರ್ದೇಶಕರನ್ನೇ ವಿಚಾರಿಸಿ ನೋಡಿ" ಎಂದಿದ್ದಾರೆ.
"ಶಕುನಿ ಚಿತ್ರದಲ್ಲಿ ನನ್ನ ಪಾತ್ರ ಪ್ಯಾಟೆ ಹುಡುಗಿಯದ್ದು. ಆದರೆ ತುಂಬಾ ಸರಳ ಹಾಗೂ ಮುಗ್ಧೆಯ ಪಾತ್ರ. ನಿಜ ಜೀವನಕ್ಕೂ ಪಾತ್ರಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಈಗಾಗಲೇ ಅದು ಬಿಡುಗಡೆ ಆಗಿರಬೇಕಿತ್ತು. ಅಲ್ಲಿನ ಪ್ರತಿಭಟನೆ, ಇತರ ಕಲಾವಿದರ ಡೇಟ್ಸ್ ಸಮಸ್ಯೆಯಿಂದ ಮುಂದಕ್ಕೆ ಹೋಗಿದೆ ಅಷ್ಟೇ. ಇದರ ಹೊರತಾಗಿ ಬೇರೆ ಯಾವ ಸಮಸ್ಯೆಗಳೂ ಇಲ್ಲ. ಈ ಸುದ್ದಿಯನ್ನು ಗಾಳಿ ಸುದ್ದಿ ಎನ್ನಿ" ಎಂದಿದ್ದಾರೆ ಪ್ರಣೀತಾ.
ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ದೊರೆತಿಲ್ಲ. ಆದರೆ ಪ್ರಣೀತಾ ಬಗ್ಗೆ ಚಿತ್ರರಂಗದಲ್ಲಿ ಅಂತಹ ಕೆಟ್ಟ ಅಭಿಪ್ರಾಯವೇನಿಲ್ಲ. ಕನ್ನಡ, ತಮಿಳು ಹಾಗೂ ತೆಲುಗು ಹೀಗೆ ಮೂರು ಭಾಷೆಗಳಲ್ಲಿ ನಟಿಸಿರುವ ಆಕೆ ಕಿರಿಕ್ ಮಾಡಿಕೊಂಡು ಸುದ್ದಿಯಾದ ಉದಾಹರಣೆಯಿಲ್ಲ. ಹಾಗಾದರೆ ನಿಜವಾಗಿಯೂ ಆಗಿದ್ದೇನು? ಉತ್ತರ ಇನ್ನಷ್ಟೇ ದೊರೆಯಬೇಕಾಗಿದೆ. ಕಾರ್ತಿ ಜೊತೆ ಒಳ್ಳೆಯ ಚಿತ್ರವೊಂದರಲ್ಲಿ ನಟಿಸಿದ ಅದೃಷ್ಟವಂತೆ ಕನ್ನಡತಿ ಪ್ರಣೀತಾ ಎಂಬುದಂತೂ ಸುಳ್ಳಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications












