ತಮಿಳುನಾಡಿನಲ್ಲಿ ಒಂದ್ಕಡೆ ರೆಸಾರ್ಟ್ ರಾಜಕೀಯ; ಮತ್ತೊಂದು ಕಡೆ ವಿಜಯ್ ಪ್ರಮಾಣ ವಚನಕ್ಕೆ ಸಿದ್ಧತೆ
ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಸರ್ಕಾರ ನಡೆಸುವ ವಿಚಾರದಲ್ಲಿ ಅನಿಶ್ಚಿತತೆ ಮುಂದುವರೆದಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಹಿನ್ನಲೆಯಲ್ಲಿ ಭಾರೀ ಹೈಡ್ರಾಮಾ ಶುರುವಾಗಿದೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಈ ಗೊಂದಲಕ್ಕೆ ನಿರ್ಗಮಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತೆರೆ ಎಳೆದಿದ್ದಾರೆ. ಸದ್ಯ ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ಧತೆ ನಡೀತಿದೆ.
ಇಂದು(ಮೇ 7) ವಿಜಯ್ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗ್ತಿತ್ತು. ವಿಜಯ್ ಸರ್ಕಾರ ರಚನೆಗೆ ರಾಜ್ಯಪಾಲರು ಇನ್ನು ಆಹ್ವಾನ ನೀಡಿಲ್ಲ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಕಾನೂನು ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲ್ಲು ತಮಿಳುನಾಡು ರಾಜ್ಯಪಾಲರು ಮುಂದಾಗಿದ್ದಾರೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದು ದೂರದ ಮಾತು ಎನ್ನಲಾಗ್ತಿದೆ. ಎರಡೂ ಪಕ್ಷಗಳು ಒಟ್ಟಿಗೆ ಸೇರಿದರೂ ಮ್ಯಾಜಿಕ್ ನಂಬರ್ ಸುಲಭವಲ್ಲ. ಇತರೆ ಪಕ್ಷಗಳ ಬೆಂಬಲ ಬೇಕಾಗುತ್ತದೆ. ಜನರ ತೀರ್ಪು ಧಿಕ್ಕರಿಸಿ ಸರ್ಕಾರ ರಚಿಸುವುದು ಸರಿಯಲ್ಲ ಎಂದು ಎರಡೂ ಪಕ್ಷದ ನಾಯಕರು ಭಾವಿಸಿದ್ದಾರೆ. ಸ್ಟಾಲಿನ್ ಕೂಡ ಇದೇ ಮಾತು ಹೇಳಿದ್ದಾರೆ.

ನಟ ವಿಜಯ್ಗೆ ಭಾರೀ ಅಭಿಮಾನಿ ಬಳಗವಿದೆ. ಚುನಾವಣೆ ಪ್ರಚಾರದ ವೇಳೆ ದಳಪತಿ ಹೋದ ಕಡೆಯೆಲ್ಲಾ ಭಾರೀ ಬೆಂಬಲ ಸಿಕ್ಕಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿ ಜೈಕಾರ ಹಾಕಿದ್ದರು. ಕರೂರಿನಲ್ಲಿ ರೋಡ್ ಶೋ ವೇಳೆ ಕಾಲ್ತುಳಿತ ಉಂಟಾಗಿ 40 ಮಂದಿ ಕೊನೆಯುಸಿರೆಳೆದಿದ್ದರು. ಇದೀಗ ವಿಜಯ್ ಪ್ರಮಾಣ ವಚನ ಸ್ವೀಕಾರ ಎಲ್ಲಿ? ಯಾವಾಗ? ಎನ್ನುವ ಚರ್ಚೆ ಆರಂಭವಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯಲಿದೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಚೆನ್ನೈನ ಜವಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ನಡೀತಿದೆ. ಅಪಾರ ಸಂಖ್ಯೆಯ ಟಿವಿಕೆ ಪಕ್ಷದ ಕಾರ್ಯಕರ್ತರು, ವಿಜಯ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿ ಆಗುವ ಸಾಧ್ಯತೆಯಿದೆ. ಹಾಗಾಗಿ ಪಾಸ್ ನೀಡಿ ಕೆಲವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.

ಎಲ್ಲಕ್ಕಿಂತ ಮುನ್ನ ವಿಜಯ್ 118 ಶಾಸಕರ ಬೆಂಬಲವನ್ನು ತೋರಿಸಬೇಕಿದೆ. ಆ ಬಳಿಕ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದಕ್ಕಾಗಿ ವಿಜಯ್ ಕರಸತ್ತು ಆರಂಭಿಸಿದ್ದಾರೆ. ಇದೆಲ್ಲದರ ನಡುವೆ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಎಐಎಡಿಎಂಕೆ ಶಾಸಕರನ್ನು ಪಾಂಡಿಚೇರಿ ರೆಸಾರ್ಟ್ವೊಂದಕ್ಕೆ ಸ್ಥಳಾಂತರಿಸಲಾಗಿದೆ. ಟಿವಿಕೆ ಪಕ್ಷದವರು ತಮ್ಮ ಶಾಸಕರನ್ನು ಸೆಳೆಯಬಹುದು ಎನ್ನುವ ಆತಂಕದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆ(ಮೇ 8) ಪ್ರಮಾಣ ವಚನ ಕಾರ್ಯಕ್ರಮ ನಡೆಯಬಹುದು ಎಂದು ಹೇಳಲಾಗ್ತಿದೆ.
ಈಗಾಗಲೇ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ವಿಜಯ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಜವಹಲಾಲ್ ನೆಹರು ಸ್ಟೇಡಿಯಂನಲ್ಲಿ ವಿಜಯ್ ಮಾತ್ರ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಮುಂದಿನ ದಿನಗಳಲ್ಲಿ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಬಹುದು ಎನ್ನುವ ಚರ್ಚೆ ನಡೀತಿದೆ. ಎಲ್ಲಕ್ಕಿಂತ ಮುನ್ನ ವಿಜಯ್ 118 ಶಾಸಕರ ಬೆಂಬಲ ಗಳಿಸುವುದು ಮುಖ್ಯವಾಗಿದೆ. ಅದಕ್ಕಾಗಿ ಭಾರೀ ಲೆಕ್ಕಾಚಾರ ಶುರುವಾಗಿದೆ.
ಇತ್ತೀಚೆಗೆ ನಿರ್ಗಮಿತ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ನಟ ರಜನಿಕಾಂತ್ ಭೇಟಿಯಾಗಿ ಚರ್ಚಿಸಿದ್ದಾರೆ. ಆದರೆ ದಿಢೀರನೆ ಈ ಭೇಟಿಗೆ ಕಾರಣ ಏನು? ಇಬ್ಬರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದರು ಎನ್ನುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications