ಪುನೀತ್ 'ಯಾರೇ ಕೂಗಾಡಲಿ' ಚಿತ್ರಕ್ಕೆ ಮುಹೂರ್ತ
ಪುನೀತ್ ಜೊತೆ ಲೂಸ್ ಮಾದ ಯೋಗೇಶ್ ಕೂಡ ಈ ಚಿತ್ರದಲ್ಲಿ ನಾಯಕನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು 'ಹುಡುಗರು' ಚಿತ್ರದಲ್ಲಿ ಅವರಿಬ್ಬರೂ ಜೊತೆಯಾಗಿದ್ದರು. ಹುಡುಗರು ಚಿತ್ರದಲ್ಲಿದ್ದ ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ಮಿಸ್ ಆಗಿದ್ದಾರೆ. ನಾಯಕಿಯರ ಆಯ್ಕೆ ಅಂತಿಮವಾಗಿಲ್ಲ.
ಪುನೀತ್ ಇತ್ತೀಚಿನ ಚಿತ್ರ ಅಣ್ಣಾಬಾಂಡ್ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗಿಲ್ಲ ಎನ್ನಬಹುದು. ಈ ಚಿತ್ರಕ್ಕೆ ಪ್ರೇಕ್ಷಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಿಷಯವನ್ನು ನಿರ್ದೇಶಕ ಸೂರಿ ಸ್ವತಃ ದೃಢಪಡಿಸಿದ್ದಾರೆ. ಮುಖ್ಯವಾಗಿ ಪುನೀತ್ ಕಟ್ಟಾ ಅಭಿಮಾನಿಗಳಿಗೆ ಅಣ್ಣಬಾಂಡ್ ಚಿತ್ರ ಇಷ್ಟವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆದರೆ ಅಣ್ಣಾಬಾಂಡ್ ಚಿತ್ರದ ಕಲೆಕ್ಷನ್ ಜೋರಾಗಿಯೇ ಇದೆ. ವಜ್ರೇಶ್ವರಿ ಸಂಸ್ಥೆ ಹಾಕಿದ ಬಂಡವಾಳವನ್ನು ಅತಿ ಕಡಿಮೆ ಅವಧಿಯಲ್ಲಿಯೇ ವಾಪಸ್ ಪಡೆದು ಸಾಕಷ್ಟು ಲಾಭ ಗಳಿಸಿದೆ. ಬಾಕ್ಸ್ ಆಫೀಸ್ ರಿಪೋರ್ಟ್ ಪ್ರಕಾರ ಈ ಚಿತ್ರ ಸಂಪೂರ್ಣ ಯಶಸ್ವಿ ಚಿತ್ರವೇ ಆಗಿದೆ. ಹಾಕಿದ ಬಂಡವಾಳ ಎರಡೇ ವಾರದಲ್ಲಿ ವಾಪಸ್ ಆಗಿದೆ ಎಂಬುದು ತಮಾಷೆಯ ಮಾತಲ್ಲ.
ಮೊದಲು ವಿತರಕ 'ಪ್ರಸಾದ್' ಹಂಚಿಕೆ ಮಾತಾಗಿದ್ದ ಅಣ್ಣಾಬಾಂಡ್ ಚಿತ್ರ, ಪ್ರಸಾದ್ ಹಾಗೂ ವಜ್ರೇಶ್ವರಿ ಸಂಸ್ಥೆಯ ನಡುವಿನ 'ಶೀತಲ ಸಮರ'ದ ನಂತರ ಸ್ವತಃ ವಜ್ರೇಶ್ವರಿಯಿಂದಲೇ ಬಿಡುಗಡೆಗೊಂಡಿತ್ತು. ಬಿಕೆಟಿ (ಬೆಂಗಳೂರು, ಕೋಲಾರ ಹಾಗೂ ತುಮಕೂರು) ಹಂಚಿಕೆಯನ್ನು ಜಯಣ್ಣ ಕಂಬೈನ್ಸ್ ಮಾಡಿತ್ತು. ಮಿಕ್ಕ ಏರಿಯಾಕ್ಕೆ ಸ್ವತಃ ರಾಘಣ್ಣ ಹಂಚಿಕೆದಾರರು. ಅದ್ದೂರಿ ಪ್ರಚಾರದ ಮೂಲಕ ಅಣ್ಣಾಬಾಂಡ್ ಬಿಡುಗಡೆಗೊಂಡಿತ್ತು.
ಅದಕ್ಕೂ ಮೊದಲು ಬಂದಿದ್ದ ಯೋಗರಾಜ್ ಭಟ್ ಹಾಗೂ ಪುನೀತ್ ಸಂಗಮದ 'ಪರಮಾತ್ಮ' ಚಿತ್ರಕ್ಕೂ ಪ್ರೇಕ್ಷಕರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಪಡೆದಿರಲಿಲ್ಲ. ಆದರೆ ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೇಂದ್ರ ಅವರಿಗೆ ಆ ಚಿತ್ರ ನಷ್ಟವನ್ನೇನೂ ಉಂಟು ಮಾಡಿಲ್ಲ. ನಷ್ಟದ ಮಾತು ಹಾಗಿರಲಿ, ಲಾಭವೇ ಬಂದಿದೆ ಎಂದಿದ್ದಾರೆ ಸ್ವತಃ ಜಯಣ್ಣ.
ಈ ಎಲ್ಲಾ ಕಾರಣಗಳಿಂದ, ಸದ್ಯದಲ್ಲೇ ಸೆಟ್ಟೇರಲಿರುವ ಪುನೀತ್ ಹೊಸ ಚಿತ್ರ ಯಾರೇ ಕೂಗಾಡಲಿ, ಸಾಕಷ್ಟು ಕತೂಹಲ ಕೆರಳಿಸಿದೆ. ಸಾಕಷ್ಟು ಅಳೆದು-ತೂಗಿ ಚಿತ್ರವನ್ನು ನಿರ್ಮಿಸುವ ಹಾಗೂ ಕಥೆಗೆ ತುಂಬಾ ಪ್ರಮುಖ್ಯತೆ ಕೊಡುವ ವಜ್ರೇಶ್ವರಿ ಸಂಸ್ಥೆ, ಈ ಚಿತ್ರವನ್ನು ನಿರ್ಮಿಸುತ್ತಿದೆ ಎಂದಾಗ ನಿರೀಕ್ಷೆ ಹಾಗೂ ಕತೂಹಲ ಸಹಜವೇ.
ತಮಿಳಿನ 'ಪೊರಾಲಿ' ಚಿತ್ರದ ರೀಮೇಕ್ ಯಾರೇ ಕೂಗಾಡಲಿ. ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಸಮುದ್ರಕಣಿ ಅವರೇ ಕನ್ನಡದ ಈ ಯಾರೇ ಕೂಗಾಡಲಿಯನ್ನೂ ಕೂಡ ನಿರ್ದೇಶಿಸಲಿದ್ದಾರೆ ಎಂಬುದು ಇನ್ನೊಂದು ವಿಶೇಷ. ತಮಿಳಿನ ಚಿತ್ರವನ್ನು ಹಾಗೇ ಭಟ್ಟಿ ಇಳಿಸಲಿದ್ದಾರೋ ಅಥವಾ ಕನ್ನಡದ ನೆಟಿವಿಟಿಗೆ ತಕ್ಕಂತೆ ಬದಲಾಯಿಸಲಿದ್ದಾರೋ ಎಂಬುದು ಸದ್ಯಕ್ಕೆ ಗೌಪ್ಯ.
ಪುನೀತ್ ಹಾಗೂ ಯೋಗೇಶ್ ಇಬ್ಬರಿಗೂ ನಾಯಕಿ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಅವರಿಬ್ಬರ ಜೋಡಿಯ ಹುಡುಗರು ಚಿತ್ರ ಸೂಪರ್ ಹಿಟ್ ಆಗಿತ್ತಾದ್ದರಿಂದ ಅದೇ ಜೋಡಿಯನ್ನು ಮತ್ತೆ ತೆರೆಯ ಮೇಲೆ ತರಲು ರಾಘಣ್ಣ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಯಾರೇ ಕೂಗಾಡಲಿ, ಪುನೀತ್ ಹೊಸ ಚಿತ್ರ ಮುಹೂರ್ತಕ್ಕೆ ಸಜ್ಜಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












