ಜನನಾಯಗನ್ಗೆ ಜನ ಕಾತುರ, ಇಳಯ ದಳಪತಿ ಅಬ್ಬರ ; ಟ್ರೇಲರ್ ಮಾತ್ರ ಬೆಂಕಿ ಎಂದ ರಿಷಬ್ ಶೆಟ್ಟಿ
ತಮಿಳುನಾಡಿನ ದಳಪತಿ ವಿಜಯ್ ಈಗ ಚಿತ್ರರಂಗದ ನಾಯಕ ಅಲ್ಲ. ಬದಲಿಗೆ ಪೂರ್ಣ ಪ್ರಮಾಣದ ರಾಜಕೀಯ ನಾಯಕ. ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ ಎಂದು ಹೇಳುತ್ತಲೇ ಜನ ಸೇವೆ ಮಾಡಲು ಮುಂದಾದ ವಿಜಯ್ ಸದ್ಯ ''ಜನ ನಾಯಗನ್'' ಎಂಬ ಚಿತ್ರವನ್ನು ಮಾಡಿದ್ದಾರೆ. ಇದೇ ಕೊನೆ ಮುಂದೆ ಮತ್ತೆ ಬೆಳ್ಳಿಪರದೆ ಮೇಲೆ ವಿಜಯ್ ಅಬ್ಬರ ಇರುವುದಿಲ್ಲ.
ಈ ಹಿನ್ನೆಲೆ ಇವರ ಅಭಿಮಾನಿಗಳಲ್ಲೊಂದು ಭಾವನಾತ್ಮಕವಾದ ಅಲೆ ಇದೆ. ಚಿತ್ರ ನೋಡುವ ಆತುರ-ಕಾತುರ ಇದೆ. ನಿಜಾ.. ''ಜನ ನಾಯಗನ್'' ನಮ್ಮ ಮನೆ ಮಗ ಅಲ್ಲ. ಬದಲಿಗೆ ಪಕ್ಕದ ಮನೆಯ ''ಭಗವಂತ ಕೇಸರಿ''ಯ ನೆರಳು ಎಂಬ ವಿಚಾರ ಗೊತ್ತಾದ ನಂತರ ವಿಜಯ್ ಅವರ ಅಭಿಮಾನಿಗಳಲ್ಲಿಯೇ ಬೇಸರ ಮನೆ ಮಾಡಿದೆ. ಆದರೂ ಕೂಡ ಅಭಿಮಾನ. ಮನದ ಬೇಗುದಿಯನ್ನು ಹೊರ ಬರದಂತೆ ತಡೆ ಹಿಡಿದಿದೆ. ತಮ್ಮ ಬೇಸರವನ್ನು ಮರೆತು ಜನನಾಯಗನಗೆ ಅದ್ಧೂರಿ ಸ್ವಾಗತ ಕೋರಲು ವಿಜಯ್ ಭಕ್ತಗಣ ಸಿದ್ಧವಾಗಿದೆ.

ಇನ್ನು ಚಿತ್ರರಂಗದಲ್ಲಿ ಕೂಡ ''ಜನನಾಯಗನ್'' ವಿಜಯ್ ಕೊನೆಯ ಚಿತ್ರವಾದ ಹಿನ್ನೆಲೆ ಬೆಳ್ಳಿತೆರೆಯಲ್ಲಿ ಈ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ. ವಿಜಯ್ ಅವರ ಮುಂಬರುವ ರಾಜಕೀಯ ಜೀವನಕ್ಕೆ ಶುಭ ಕೋರುತ್ತಿದ್ದಾರೆ. ಮೊನ್ನೆ ಬಿಡುಗಡೆಯಾದ ಟ್ರೇಲರ್ನ ಬಾಯ್ತುಂಬ ಹೊಗಳುತ್ತಿದ್ದಾರೆ. ಉದಾಹರಣೆಗೆ ರಿಷಬ್ ಶೆಟ್ಟಿ.
ಹೌದು, ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ .. ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಸದಭಿರುಚಿಯ ಚಿತ್ರಗಳನ್ನು ಮಾಡುತ್ತಲೇ ಕನ್ನಡ ಕಲಾರಸಿಕರ ಹೃದಯ ಗೆದ್ದ ರಿಷಬ್ ಶೆಟ್ಟಿ ಈಗ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಬದಲಿಗೆ ಯಶ್ ಅವರಂತೆಯೇ ರಿಷಬ್ ಶೆಟ್ಟಿ ಸದ್ಯ ನ್ಯಾಷನಲ್ ಸ್ಟಾರ್ ಆಗಿದ್ದಾರೆ.
ಇಂದು ರಿಷಬ್ಗೆ ಅಕ್ಕ-ಪಕ್ಕದ ರಾಜ್ಯದಲ್ಲಿ ಭಾರೀ ಬೇಡಿಕೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಕಾಂತಾರದ ಧ್ಯಾನದಲ್ಲಿರುವ ರಿಷಬ್ ಬಾಲಿವುಡ್ನಲ್ಲಿ ಶಿವಾಜಿ ಮಹಾರಾಜ್ ಅವತಾರವೆತ್ತಲು ಅಣಿಯಾಗಿದ್ದಾರೆ. ಮತ್ತೊಂದು ಕಡೆ ತೆಲುಗು ಚಿತ್ರವನ್ನು ಒಪ್ಪಿಕೊಂಡಿರುವ ರಿಷಬ್ ''ಜೈ ಹನುಮಾನ್'' ಚಿತ್ರದಲ್ಲಿ ಹನುಮಂತನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇಷ್ಟೇ ಅಲ್ಲ ತೆಲುಗಿನಲ್ಲಿ 'ಲಕ್ಕಿ ಭಾಸ್ಕರ್', 'ಜೆರ್ಸಿ' ಸೇರಿ ಒಂದಷ್ಟು ದೊಡ್ಡ ಚಿತ್ರಗಳನ್ನು ನಿರ್ಮಾಣ ಮಾಡಿರುವ ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿ ಕೂಡ ರಿಷಬ್ ಚಿತ್ರವನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.
ಹೀಗೆ ಕನ್ನಡ ಹೊರತು ಪಡಿಸಿ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಸದ್ಯ ''ಜನನಾಯಗನ್'' ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ''ಜನನಾಯಗನ್'' ಟ್ರೇಲರ್ ಹಂಚಿಕೊಂಡಿರುವ ರಿಷಬ್ ಶೆಟ್ಟಿ ಬೆಂಕಿ ಎಂದು ಬಣ್ಣಿಸಿದ್ದಾರೆ. ವಿಜಯ್ ಸರ್ ನಿಮಗೆ ಒಳ್ಳೆಯದಾಗಲಿ ಕೆವಿಎನ್ ನಿರ್ಮಾಣ ಸಂಸ್ಥೆಗೆ, ಅನಿರುದ್ದ್ ಮತ್ತು ಹೆಚ್ ವಿನೋತ್ಗೆ ಅದ್ಭುತ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಸದ್ಯ ರಿಷಬ್ ಶೆಟ್ಟಿ ಅವರ ಈ ಟ್ವಿಟ್ನ ಹಲವರು ರೀ ಟ್ವಿಟ್ ಮಾಡುತ್ತಿದ್ದಾರೆ. ವಿಜಯ್ ಅಭಿಮಾನಿಗಳು ರಿಷಬ್ ಶೆಟ್ಟಿ ಅವರಿಗೆ ಧನ್ಯವಾದಗಳನ್ನು ಕೂಡ ಹೇಳುತ್ತಿದ್ದಾರೆ. ಇನ್ನುಳಿದಂತೆ ಅಂದಾಜು 300 ಕೋಟಿ ರೂ. ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದೆ ಎಂದು ಹೇಳಲಾಗ್ತಿದೆ. ಇದರಲ್ಲಿ ವಿಜಯ್ ಸಂಭಾವನೆ 250 ಕೋಟಿ ರೂ. ಎನ್ನುವ ಚರ್ಚೆ ನಡೀತಿದೆ. ಪೂಜಾ ಹೆಗ್ಡೆ, ಮಮತಾ ಬೈಜು ಈ ಚಿತ್ರದಲ್ಲಿದ್ದಾರೆ. ಭಗವಂತ್ ಕೇಸರಿಯಲ್ಲಿ ಶ್ರೀಲೀಲಾ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಮಮತಾ ಬೈಜು ನಿರ್ವಹಿಸಿದ್ದರು ನಿರ್ವಹಿಸಿರಬಹುದು. ಬಾಬಿ ಡಿಯೋಲ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜನವರಿ 9ರಂದು ಪ್ಯಾನ್ ಇಂಡಿಯಾ ಲೆವಲ್ನಲ್ಲಿ ''ಜನನಾಯಗನ್''ಬಿಡುಗಡೆಯಾಗಲಿದೆ.


Click it and Unblock the Notifications











