ರಸ್ತೆ ಅಪಘಾತದಲ್ಲಿ ಖ್ಯಾತ ನಿರ್ಮಾಪಕ ಆರ್. ಬಿ ಚೌಧರಿ ನಿಧನ; ಟಿವಿಕೆ ವಿಜಯ್ಗೂ ಆಘಾತ
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಪಕ ಆರ್. ಬಿ ಚೌಧರಿ ಕೊನೆಯುಸಿರೆಳೆದಿದ್ದಾರೆ. ರಾಜಸ್ಥಾನದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅವರು ನಿಧನರಾಗಿದ್ದಾರೆ. ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳನ್ನು ಅವರು ನಿರ್ಮಿಸಿದ್ದರು. ಚೌಧರಿ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿದಿದೆ.
ಮದ್ರಾಸ್ ಮೂಲದ ಆರ್. ಬಿ ಚೌಧರಿ ಕೆಲಸದ ನಿಮಿತ್ತ ಉದಯಪುರಕ್ಕೆ ತೆರಳಿದ್ದರು. ಅಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. 'ಸೂಪರ್ ಗುಡ್ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಹಲವು ಸಿನಿಮಾಗಳನ್ನು ಅವರು ನಿರ್ಮಿಸಿದ್ದರು. ಕನ್ನಡದಲ್ಲಿ 'ಓ ನನ್ನ ನಲ್ಲೆ' ಚಿತ್ರಕ್ಕೆ ಬಂಡವಾಳ ಹೂಡಿದ್ದರು.

ಚೌಧರಿ ಸ್ಥಾಪಿಸಿದ 'ಸೂಪರ್ ಗುಡ್ ಫಿಲ್ಮ್ಸ್' ಸಂಸ್ಥೆ ಕನ್ನಡದಲ್ಲಿ ಸುದೀಪ್ ನಟನೆಯ 'ಸೈ', ದರ್ಶನ್ ನಟನೆಯ 'ಇಂದ್ರ', ಯೋಗಿ ನಟನೆಯ 'ಪುಂಡ' ಚಿತ್ರಗಳನ್ನು ನಿರ್ಮಿಸಿದೆ. ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಈ ಸಂಸ್ಥೆ ತೆರೆಗೆ ತಂದಿತ್ತು. ಸದ್ಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಜಯಭೇರಿ ಬಾರಿಸಿದ್ದಾರೆ. ವಿಜಯ್ ಹೀರೊ ಆಗಿ ನಟಿಸಿದ ಕೆಲ ಹಿಟ್ ಸಿನಿಮಾಗಳನ್ನು ಚೌಧರಿ ನಿರ್ಮಿಸಿದ್ದರು. ವಿಜಯ್ ಹೀರೊ ಆಗಿ ಗೆಲ್ಲಲು ಸೂಪರ್ ಗುಡ್ ಫಿಲ್ಮ್ಸ್ ಸಂಸ್ಥೆ ಬೆಂಬಲವಾಗಿ ನಿಂತಿತ್ತು.
ವಿಜಯ್ ನಟನೆಯ 'ಪೂವೆ ಉನಕ್ಕಾಗ', 'ಲವ್ ಟುಡೇ', 'ತುಲ್ಲಾದ ಮನಮುಂ ತುಲ್ಲುಂ', 'ಶಹಜಹಾನ್', 'ತಿರುಪಾಚ್ಚಿ' ಹಾಗೂ 'ಜಿಲ್ಲಾ' ಸಿನಿಮಾಗಳನ್ನು ಆರ್. ಬಿ ಚೌಧರಿ ನಿರ್ಮಿಸಿದ್ದರು. ಎಲ್ಲಾ ಸಿನಿಮಾಗಳು ಹಿಟ್ ಆಗಿತ್ತು. ಚೌಧರಿ ಅಗಲಿಕೆ ವಿಜಯ್ ಅವರಿಗೂ ಆಘಾತ ತಂದಿದೆ. ಇನ್ನು ಚೌಧರಿ ಅವರ ಪುತ್ರ ಜೀವಾ ಹೀರೊ ಆಗಿ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರು ಕಂಬನಿ ಮಿಡಿದಿದ್ದಾರೆ.
ರಜನಿಕಾಂತ್ ಟ್ವೀಟ್ ಮಾಡಿ "ನನ್ನ ಆತ್ಮೀಯ ಸ್ನೇಹಿತ, ಸೂಪರ್ ಗುಡ್ ಫಿಲ್ಮ್ಸ್ನ ಆರ್.ಬಿ. ಚೌಧರಿ ಒಬ್ಬ ಒಳ್ಳೆ ನಿರ್ಮಾಪಕ. ಅದ್ಭುತ ಮನುಷ್ಯ. ಅವರು ಅಸಂಖ್ಯಾತ ಯುವ ನಿರ್ದೇಶಕರಿಗೆ ಅವಕಾಶಗಳನ್ನು ನೀಡಿ ಚಲನಚಿತ್ರ ಜಗತ್ತನ್ನು ಜೀವಂತವಾಗಿರಿಸಿದ್ದಾರೆ. ಅವರ ಅಕಾಲಿಕ ಮರಣದ ಸುದ್ದಿ ನನಗೆ ತೀವ್ರ ಆಘಾತ ಮತ್ತು ಅಪಾರ ದುಃಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಬರೆದುಕೊಂಡಿದ್ದಾರೆ.
ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ಅವರ ಹಠಾತ್ ನಿಧನದ ಬಗ್ಗೆ ಕೇಳಿ ತುಂಬಾ ದುಃಖವಾಯಿತು ಎಂದು ತೆಲುಗು ನಟ ಚಿರಂಜೀವಿ ಪ್ರತಿಕ್ರಿಯಿಸಿದ್ದಾರೆ. "ನಾನು ಅವರನ್ನು ಹಲವು ವರ್ಷಗಳಿಂದ ಬಲ್ಲೆ ಮತ್ತು ಇತ್ತೀಚೆಗೆ ಸೂಪರ್ ಗುಡ್ ಫಿಲ್ಮ್ಸ್ ಮೂಲಕ ನನ್ನ 'ಗಾಡ್ ಫಾದರ್' ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಅನೇಕ ಪ್ರತಿಭಾನ್ವಿತ ನಿರ್ದೇಶಕರು ಮತ್ತು ನಟರ ವೃತ್ತಿಜೀವನವನ್ನು ರೂಪಿಸಿದ್ದಾರೆ ಮತ್ತು ಲೆಕ್ಕವಿಲ್ಲದಷ್ಟು ಕಥೆಗಳಿಗೆ ಜೀವ ತುಂಬಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ" ಎಂದು ಟ್ವೀಟ್ ಮಾಡಿದ್ದಾರೆ.
ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೂಡ ಚೌಧರಿ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. "ಆರ್.ಬಿ.ಚೌಧರಿ ಅವರ ನಿಧನ ನನ್ನನ್ನು ದಿಗ್ಭ್ರಮೆಗೊಳಿಸಿದೆ. ರಾಜಸ್ಥಾನದ ಉದಯಪುರ ಬಳಿ ರಸ್ತೆ ಅಪಘಾತದಲ್ಲಿ ಚೌಧರಿ ಅವರ ಮರಣದ ದುರಂತ ಸುದ್ದಿಯನ್ನು ನಂಬಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾನು ನಟಿಸಿದ 'ಸುಸ್ವಗತಂ' ಚಿತ್ರವನ್ನು ಅವರು ನಿರ್ಮಿಸಿದರು. ಅದು ಉತ್ತಮ ಯಶಸ್ಸನ್ನು ಕಂಡಿತು. 'ಅನ್ನಾವರಂ' ಚಿತ್ರದಲ್ಲಿನ ಸಿಸ್ಟರ್ ಸೆಂಟಿಮೆಂಟ್ ಫ್ಯಾಮಿಲಿ ಪ್ರೇಕ್ಷಕರನ್ನು ಆಕರ್ಷಿಸಿತ್ತು" ಎಂದಿದ್ದಾರೆ.


Click it and Unblock the Notifications