ಭಾರತಕ್ಕಾಗಿ ಚಿನ್ನದ ಪದಕ ಗೆದ್ದ ಮಾಧವನ್ ಪುತ್ರ, ಪ್ರಶಂಸೆಯ ಸುರಿಮಳೆ
ನಟರ ಮಕ್ಕಳು ನಟರಾಗುವುದೇ ಹೆಚ್ಚು. ನಟರಾಗುತ್ತಾರೆ ಅಥವಾ ಸಿನಿಮಾ ನಿರ್ಮಾಣದಲ್ಲಿ ತೊಡಗುತ್ತಾರೆ, ನಿರ್ದೇಶನ ಮಾಡುತ್ತಾರೆ. ಒಟ್ಟಾರೆ ಸಿನಿಮಾ ರಂಗದಲ್ಲಿಯೇ ಮುಂದುವರೆಯುವವರ ಸಂಖ್ಯೆಯೇ ಹೆಚ್ಚು.
ಆದರೆ ತಮಿಳು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟ ಆರ್.ಮಾಧವನ್ ಪುತ್ರ ಭಿನ್ನ. ಮಾಧವನ್ ಪುತ್ರನಿಗೆ ಸಿನಿಮಾಕ್ಕಿಂತಲೂ ಕ್ರೀಡೆಯಲ್ಲಿ ಬಲು ಆಸಕ್ತಿ. ಅತ್ಯುತ್ತಮ ಈಜುಗಾರರಾಗಿರುವ ಮಾಧವನ್ ಪುತ್ರ ವೇದಾಂತ್ ಮಾಧವನ್ ಇದೀಗ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದು ತಂದಿದ್ದಾರೆ.
ಡ್ಯಾನಿಶ್ ಓಪನ್ ಸ್ವಿಮ್ಮಿಂಗ್ ಟೂರ್ನಿಯಲ್ಲಿ ಭಾರತದ ಪರವಾಗಿ ಈಜು ಕ್ರೀಡೆಯಲ್ಲಿ ಭಾಗವಹಿಸಿದ್ದ ಮಾಧವನ್ ಪುತ್ರ ಮೊದಲಿಗೆ ಬೆಳ್ಳಿ ಪದಕ ಗೆದ್ದಿದ್ದರು. ನಂತರ 800 ಮೀಟರ್ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಪುತ್ರ ಚಿನ್ನದ ಪದಕ ಗೆದ್ದಿರುವ ವಿಡಿಯೋವನ್ನು ಮಾಧವನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಗನ ಸಾಧನೆಯ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಆರ್ ಮಾಧವನ್ ಪುತ್ರನ ಸಾಧನೆಗೆ ಬಾಲಿವುಡ್ ಮಂದಿ ಸೇರಿದಂತೆ ದಕ್ಷಿಣ ಭಾರತದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್ನಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ, ನಟಿ ಬಿಪಾಷಾ ಬಸು, ಕಂಗನಾ ರನೌತ್, ದಕ್ಷಿಣದ ಕೀರ್ತಿ ಸುರೇಶ್ ಇನ್ನೂ ಹಲವರು ವೇದಾಂತ್ಗೆ ಕಂಟ್ರಾಟ್ಸ್ ಹೇಳಿದ್ದಾರೆ.
ತಮ್ಮ ಪುತ್ರ ಈಜುಗಾರಿಕೆಯಲ್ಲಿ ಆಸಕ್ತಿವಹಿಸಿರುವುದು ಈ ಮೊದಲು ಸಹ ಖುಷಿಯಿಂದ ಹೇಳಿಕೊಂಡಿದ್ದ ಮಾಧವನ್, ಅವನು ಒಲಿಂಪಿಕ್ಸ್ಗೆ ಸಿದ್ಧತೆ ಆರಂಭಿಸಿದ್ದು, ಪೋಷಕರಾಗಿ ನಾವು ಅವನ ಜೊತೆಗೆ ಇದ್ದೇವೆ ಎಂದಿದ್ದರು. ಕೋವಿಡ್ ಸಮಯದಲ್ಲಿ ಭಾರತದಲ್ಲಿನ ಸ್ವಿಮ್ಮಿಂಗ್ ಪೂಲ್ಗಳನ್ನು ಬಂದ್ ಮಾಡಿದಾಗ ಮಗನನ್ನು ದುಬೈಗೆ ಕರೆದುಕೊಂಡು ಹೋಗಿ ಅಲ್ಲಿ ತರಬೇತಿ ಕೊಡಿಸಿದ್ದರು ಮಾಧವನ್. ಅದಕ್ಕೆ ತಕ್ಕಂತೆ ಈದ ವೇದಾಂತ್ ಭಾರತಕ್ಕೆ, ತಂದೆಗೆ ಹೆಮ್ಮೆ ತರುವಂಥಹಾ ಕಾರ್ಯ ಮಾಡಿದ್ದಾನೆ.
ಆರ್.ಮಾಧವನ್ ತಮಿಳಿನ ಸ್ಟಾರ್ ನಟರಲ್ಲಿ ಒಬ್ಬರು, ಮಾಧವನ್ ತಂದೆಗೆ ತಮ್ಮ ಮಗ ಎಂಜಿನಿಯರ್ ಆಗಬೇಕು ಟಾಟಾ ಗ್ರೂಪ್ನಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಆದರೆ ಮಾಧವನ್ ಆಗಿದ್ದು ನಟ. ಆದರೆ ಮಾಧವನ್ಗೆ ತಮ್ಮ ಮಗ ಇಂಥಹಾ ಉದ್ಯೋಗವೇ ಮಾಡಬೇಕು ಎಂಬ ಆಸೆಯಿಲ್ಲ, ಆದರೆ ಏನೇ ಕೆಲಸ ಮಾಡಲಿ ಖುಷಿಯಿಂದ ಮಾಡಲಿ ಎಂಬ ಆಸೆ. ಇದೀಗ ಮಗನನ್ನು ಒಲಿಂಪಿಕ್ಸ್ಗೆ ತಯಾರು ಮಾಡುತ್ತಿದ್ದಾರೆ ಮಾಧವನ್, ವೇದಾಂತ್ ಮುಂದಿನ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ.


Click it and Unblock the Notifications











