Chandramukhi- 2 Audio Launch: ಅದ್ಧೂರಿಯಾಗಿ 'ಚಂದ್ರಮುಖಿ- 2' ಹಾಡುಗಳು ಲೋಕಾರ್ಪಣೆ
ಗಣೇಶ ಹಬ್ಬದ ಸಂಭ್ರಮದಲ್ಲಿ ರಾಘವ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ನಟನೆಯ 'ಚಂದ್ರಮುಖಿ-2' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಒಂದೊಂದೇ ಸಾಂಗ್ ರಿಲೀಸ್ ಆಗಿ ಚಿತ್ರತಂಡ ಗಮನ ಸೆಳೆಯುತ್ತಿದೆ. ಹಿರಿಯ ನಿರ್ದೇಶಕ ಪಿ.ವಾಸು ನಿರ್ದೇಶನದಲ್ಲಿ ಮೂಡಿಬಂದಿರುವ 'ಚಂದ್ರಮುಖಿ-2' ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ಇತ್ತೀಚೆಗೆ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಮಲಯಾಳಂನ 'ಮಣಿ ಚಿತ್ರತ್ತಾಳ್' ಚಿತ್ರವನ್ನು ದಶಕಗಳ ಹಿಂದೆ ಪಿ. ವಾಸು ಕನ್ನಡದಲ್ಲಿ 'ಆಪ್ತಮಿತ್ರ' ಆಗಿ ಕಟ್ಟಿಕೊಟ್ಟಿದ್ದರು. ಬಳಿಕ ಇದೇ ಚಿತ್ರವನ್ನು ತಮಿಳಿನಲ್ಲಿ 'ಚಂದ್ರಮುಖಿ' ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ರಜನಿಕಾಂತ್, ಜ್ಯೋತಿಕಾ, ನಯನತಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಹಿಟ್ ಆಗಿತ್ತು. ಬಳಿಕ ಇದೇ ಕಥೆ ಮುಂದುವರೆಸಿ ಕನ್ನಡದಲ್ಲಿ 'ಆಪ್ತರಕ್ಷಕ' ಸಿನಿಮಾ ಬಂದಿತ್ತು.

ಬಹಳ ವರ್ಷಗಳ ನಂತರ 'ಚಂದ್ರಮುಖಿ-2' ಟೈಟಲ್ನಲ್ಲಿ ಪಿ. ವಾಸು ಹೊಸ ತಂಡ ಕಟ್ಟಿಕೊಂಡು ಹೊಸ ಸಿನಿಮಾ ಮಾಡಿದ್ದಾರೆ. ಈ ಬಾರಿ ಬಾಲಿವುಡ್ ನಟಿ ಕಂಗನಾರನ್ನು ಕರೆತಂದು ಸಾಹಸ ಮಾಡುತ್ತಿದ್ದಾರೆ. ರಜನಿಕಾಂತ್ ಬದಲಿಗೆ ರಾಘವ ಲಾರೆನ್ಸ್ ಹೀರೊ ಆಗಿ ನಟಿಸುತ್ತಿದ್ದಾರೆ. 'ಚಂದ್ರಮುಖಿ' ಕಥೆಯನ್ನೇ ಮುಂದುವರೆಸಿ ಹೊಸ ಹೊಸ ಪಾತ್ರಗಳನ್ನು ಸೇರಿಸಿ ಹೊಸ ಕಥೆ ಹೆಣೆಯಲಾಗಿದೆ. ಅದ್ಧೂರಿಯಾಗಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗಿ ತಮ್ಮ ಅನುಭವ ಹಂಚಿಕೊಂಡಿದೆ.
ಕಂಗನಾ ರಣಾವತ್ ಮಾತನಾಡಿ, "ನನ್ನ ನಟನಾ ವೃತ್ತಿಜೀವನದಲ್ಲಿ ನಾನು 'ಚಂದ್ರಮುಖಿ- 2' ರೀತಿಯ ಚಿತ್ರ ಮಾಡಿಲ್ಲ. ಅಸಲಿ ವಿಷಯವೆಂದರೆ, ನಾನು ಯಾರನ್ನೂ ಆಫರ್ ಕೇಳಿಲ್ಲ. ಮೊದಲ ಬಾರಿಗೆ ನಾನು ನಿರ್ದೇಶಕ ಪಿ. ವಾಸು ಅವರನ್ನು ಕೇಳಿದೆ. ಈ ಚಿತ್ರದಲ್ಲಿ ವಾಸು ಅವರು ನನ್ನ ಪಾತ್ರದ ಜೊತೆಗೆ ಪ್ರತಿ ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ನೀಡಿದ್ದಾರೆ. ಇಡೀ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಲಾರೆನ್ಸ್ ಮಾಸ್ಟರ್ ಅನೇಕರಿಗೆ ಸ್ಫೂರ್ತಿ" ಎಂದು ಹೇಳಿದ್ದಾರೆ.

ರಾಘವ್ ಲಾರೆನ್ಸ್ , "ದೊಡ್ಡ ಸ್ಟಾರ್ಗಳ ಜೊತೆ ಸಿನಿಮಾ ಮಾಡುವ ಸುಭಾಸ್ಕ್ ಕರಣ್ ನನ್ನ ಜೊತೆ ಸಿನಿಮಾ ಮಾಡ್ತಾರಾ? ಅಂತ ಆಶ್ಚರ್ಯ ಪಡ್ತಿದ್ದೆ? ಆದರೆ, 'ಚಂದ್ರಮುಖಿ- 2' ಅಂತ ದೊಡ್ಡ ಸಿನಿಮಾ ಮಾಡಿದ್ರು. ಅವರ ಬ್ಯಾನರ್ನ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ನಮ್ಮ ನಿರ್ದೇಶಕ ವಾಸು ಸರ್ಗೆ ನಾಲ್ಕು ದಶಕಗಳ ಅನುಭವವಿದೆ. ನಾನು ಸೈಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ ಕಾಲದಿಂದಲೂ ಅವರು ನಿರ್ದೇಶಕರಾಗಿ ಉತ್ತಮ ಚಿತ್ರಗಳನ್ನು ಮಾಡಿದ್ದಾರೆ."
"ಕಂಗನಾ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾತೆ ಎಂದು ತಿಳಿದಾಗ ನನಗೆ ಆಶ್ಚರ್ಯವಾಯಿತು. ಕೀರವಾಣಿ ಬಗ್ಗೆ ಮಾತನಾಡಲು ಪದಗಳು ಸಾಕಾಗುವುದಿಲ್ಲ, ಅವರು ಎಂದಿಗೂ ಕೆಲಸದ ಬಗ್ಗೆ ಟೆನ್ಷನ್ ಆಗುವುದಿಲ್ಲ. ಈ ಚಿತ್ರದ ಸಮಯದಲ್ಲಿ ಅವರು ತಮ್ಮ ಕೆಲಸವನ್ನು ಆನಂದಿಸಿದರು. ಅದಕ್ಕಾಗಿಯೇ ಅವರು ನಮ್ಮ ಚಿತ್ರಕ್ಕೆ ಉತ್ತಮ ಸಂಗೀತವನ್ನು ನೀಡಿದ್ದಾರೆ. ಛಾಯಾಗ್ರಾಹಕ ರಾಜಶೇಖರ್, ಕಲಾ ನಿರ್ದೇಶಕ ತೊಟ್ಟ ಥರಣಿ ಗಾರು, ಸಂಕಲನಕಾರ ಆಂಟನಿ ಅವರು ಇಡೀ ಚಿತ್ರತಂಡದೊಂದಿಗೆ 'ಚಂದ್ರಮುಖಿ 2' ನಂತಹ ಅದ್ಭುತ ಚಿತ್ರವನ್ನು ಮಾಡಿದ್ದಾರೆ. ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ" ಎಂದರು.
ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ.ಕೀರವಾಣಿ ಮಾತನಾಡಿ, "ಚಂದ್ರಮುಖಿ- 2' ಆಸ್ಕರ್ ಪ್ರಶಸ್ತಿ ಪಡೆದ ನಂತರ ನಾನು ಸಂಗೀತ ಸಂಯೋಜನೆ ಮಾಡಿರುವ ಚಿತ್ರ. ಇಂತಹ ಒಳ್ಳೆಯ ಅವಕಾಶ ನೀಡಿದ ನಿರ್ದೇಶಕ ಪಿ.ವಾಸು ಅವರಿಗೆ ಧನ್ಯವಾದಗಳು. ವಾಸು ಅವರು ಉತ್ತಮ ನಿರ್ದೇಶಕ ಮಾತ್ರವಲ್ಲದೆ. ಒಬ್ಬ ಒಳ್ಳೆಯ ಗಾಯಕ. ನನ್ನ ಮುಂದಿನ ಚಿತ್ರಕ್ಕೆ ಅವರು ಗಾಯಕನಾಗಲು ನಾನು ಬಯಸುತ್ತೇನೆ. ರಾಘವ ಲಾರೆನ್ಸ್ ಅವರ ಬೆಂಬಲದಿಂದ ಹಾಡುಗಳು ಚೆನ್ನಾಗಿ ಬಂದಿವೆ" ಎಂದರು.
ಲೈಕಾ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆರ್. ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ. ಸೆಪ್ಟೆಂಬರ್ 19ಕ್ಕೆ ಸಿನಿಮಾ 5 ಭಾಷೆಗಳಲ್ಲಿ ತೆರೆಗೆ ಬರಲಿದೆ.


Click it and Unblock the Notifications











