Rajinikanth: "ನಾನು ಜೀವನದಲ್ಲಿ ಆ ದೊಡ್ಡ ತಪ್ಪು ಮಾಡಬಾರದಿತ್ತು": ತಲೈವಾ ಪಶ್ಚಾತ್ತಾಪ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಆಕ್ಷನ್ ಎಂಟರ್ಟೈನರ್ 'ಜೈಲರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶುಕ್ರವಾರವಷ್ಟೇ ಚೆನ್ನೈನಲ್ಲಿ ಬಹಳ ಅದ್ಧೂರಿಯಾಗಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ರಜನಿಕಾಂತ್ ಜೊತೆ ಶಿವರಾಜ್ಕುಮಾರ್, ಜಾಕಿಶ್ರಾಫ್, ತಮನ್ನಾ, ರಮ್ಯಾಕೃಷ್ಣ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವೇದಿಕೆ ಏರಿ ಮಾತನಾಡಿದ ತಲೈವಾ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟರು.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಪುಟ್ಟ ಪಾತ್ರದಲ್ಲಿ ನಟಿಸಿದ್ದಾರೆ. ಇದು ಶಿವಣ್ಣನ ಚೊಚ್ಚಲ ತಮಿಳು ಸಿನಿಮಾ. ಈಗಾಗಲೇ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ತಮನ್ನಾ ಹೆಜ್ಜೆ ಹಾಕಿರುವ 'ಕಾವಾಲಯ್ಯ' ಸಾಂಗ್ ಸೂಪರ್ ಹಿಟ್ ಆಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.

'ಜೈಲರ್' ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಸ;./ನ್ ಪಿಕ್ಚರ್ಸ್ ಸಂಸ್ಥೆ ಸೆರೆ ಹಿಡಿದಿದೆ. ಶೀಘ್ರದಲ್ಲೇ ಸಂಪೂರ್ಣ ಕಾರ್ಯಕ್ರಮ ಸನ್ ಟಿವಿಯಲ್ಲಿ ಪ್ರಸಾರವಾಗಲಿದೆ. ಆದರೆ ವೇದಿಕೆಯಲ್ಲಿ ರಜನಿಕಾಂತ್ ಮಾತನಾಡಿದ ಮಾತುಗಳು ಈಗಾಗಲೇ ವೈರಲ್ ಆಗುತ್ತಿದೆ. 10 ನಿಮಿಷಕ್ಕೂ ಹೆಚ್ಚು ಸಮಯ ಮಾತನಾಡಿದ ತಲೈವಾ ತಮ್ಮ ಕುಡಿತದ ಚಟದಿಂದ ಹಿಡಿದು ಸನ್ರೈಸರ್ಸ್ ಹೈದರಾಬಾದ್ ತಂಡದವರೆಗೆ ಹಲವು ಸಂಗತಿಗಳನ್ನು ಬಿಚ್ಚಿಟ್ಟರು.

ನಾನು ಮಾಡಿದ ದೊಡ್ಡ ತಪ್ಪು
"ನನ್ನ ಜೀವನದಲ್ಲಿ ಮದ್ಯಪಾನ ಇಲ್ಲದೇ ಇದ್ದಿದ್ದರೆ ನಾನು ಈ ವೇಳೆಗೆ ಜನ ಸೇವೆ ಮಾಡಿಕೊಂಡು ಇರುತ್ತಿದ್ದೆ. ಮದ್ಯಪಾನ ನಾನು ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪು. "ನೀನು ರಾಜ. ನೀನು ಮದ್ಯ ಸೇವಿಸಬೇಡ" ಎಂದು ನನ್ನ ತಮ್ಮ ಯಾವಾಗಲೂ ಹೇಳುತ್ತಿದ್ದ. ಆದರೆ ನಾನು ಕೇಳಲಿಲ್ಲ. ಒಂದು ವೇಳೆ ನನ್ನ ಜೀವನದಲ್ಲಿ ಆಲ್ಕೋಹಾಲ್ ಇಲ್ಲದೇ ಹೋಗಿದ್ದರೆ, ನಾನು ಈಗ ಇರುವುದಕ್ಕಿಂತ ದೊಡ್ಡ ಸ್ಥಾನದಲ್ಲಿ ಇರುತ್ತಿದ್ದೆ. ವೈಯಕ್ತಿಕವಾಗಿಯೇ ಚೆನ್ನಾಗಿ ಇರುತ್ತಿದ್ದೆ."
ಆ ತಪ್ಪು ಮಾಡಬೇಡಿ
"ಸಂಪೂರ್ಣವಾಗಿ ಮದ್ಯ ಸೇವಿಸಬೇಡಿ ಎಂದು ನಾನು ನಿಮಗೆ ಹೇಳುವುದಿಲ್ಲ. ನಿಮಗೆ ಬೇಕು ಎನಿಸಿದಾಗ ಯಾವಾಗಲಾದರೂ ಒಮ್ಮೆ ತೆಗೆದುಕೊಳ್ಳಿ. ಆದರೆ ಪ್ರತಿದಿನ ಮಾತ್ರ ಮದ್ಯಪಾನ ಮಾಡಬೇಡಿ. ಯಾಕಂದರೆ ಅದು ನಿಮ್ಮ ಅರೋಗ್ಯದ ಜೊತೆಗೆ ನಿಮ್ಮ ಸುತ್ತಾ ಇರುವವರ ಸಂತೋಷವನ್ನು ಹಾಳು ಮಾಡುತ್ತದೆ. ನೀವು ಸೇವಿಸುವುದರಿಂದ ನಿಮ್ಮ ಜೀವನ ತಲೆಕೆಳಗಾಗುತ್ತದೆ. ನಿಮ್ಮ ಪೋಷಕರು, ಹೆಂಡತಿ, ಮಕ್ಕಳು ಎಲ್ಲರೂ ಇದರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಅದಕ್ಕೆ ಕುಡಿತ ಬೇಡ" ಎಂದು ರಜನಿಕಾಂತ್ ಹೇಳಿದ್ದಾರೆ.
ಸೂಪರ್ ಸ್ಟಾರ್ ಟೈಟಲ್ ಬೇಡ ಎಂದೆ
'ಜೈಲರ್' ಚಿತ್ರದ 'ಹುಕುಂ' ಹಾಡಿನಲ್ಲಿ ಬಳಸಿರುವ ಸೂಪರ್ ಸ್ಟಾರ್ ಪದ ಬೇಡ ಎಂದು ನಾನು ಹೇಳಿದೆ. ನನಗೆ ಸೂಪರ್ ಸ್ಟಾರ್ ಪಟ್ಟವೇ ದೊಡ್ಡ ತಲೆನೋವಾಗಿದೆ. 1977ರಲ್ಲಿ ಈ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿತ್ತು. ಆಗ ಕಮಲ್ ಹಾಸನ್, ಶಿವಾಜಿ ಗಣೇಶನ್ ಸ್ಟಾರ್ ನಟರಾಗಿ ಮೆರೆಯುತ್ತಿದ್ದರು. ಅಂತಹ ಸಮಯದಲ್ಲಿ ಸೂಪರ್ ಸ್ಟಾರ್ ಬಿರುದು ನನಗೆ ಕೊಟ್ಟಿದ್ದು ಬಹಳ ಚರ್ಚೆ ಹುಟ್ಟಾಕಿತ್ತು" ಎಂದಿದ್ದಾರೆ.
ದಳಪತಿ ವಿಜಯ್ಗೆ ಟಾಂಗ್?
ಇನ್ನು ಸೂಪರ್ ಸ್ಟಾರ್ ಟೈಟಲ್ ಬಗ್ಗೆಯೇ ಮಾತನಾಡುತ್ತ ಸಣ್ಣದೊಂದು ಕಥೆ ಹೇಳ್ತೀನಿ ಎಂದು ತಲೈವಾ ಮಾತನಾಡಿದ್ದಾರೆ. ಒಂದು ಕಾಡಲ್ಲಿ ಹದ್ದು ಹಾಗೂ ಕಾಗೆ ಇರುತ್ತವೆ. ಕಾಗೆ ಯಾವಾಗಲೂ ಹದ್ದಿಗಿಂತ ಎತ್ತರದಲ್ಲಿ ಹಾರಲು ಪ್ರಯತ್ನಿಸುತ್ತದೆ. ಆದರೆ ಯಾವತ್ತಿಗೂ ಅದು ಸಾಧ್ಯವಿಲ್ಲ ಎಂದಿದ್ದಾರೆ. ದಳಪತಿ ವಿಜಯ್ ಉದ್ದೇಶಿಸಿ ರಜನಿಕಾಂತ್ ಈ ಮಾತನ್ನು ಪರೋಕ್ಷವಾಗಿ ಹೇಳಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆಗಸ್ಟ್ 10ಕ್ಕೆ 'ಜೈಲರ್' ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











