ಕಾವೇರಿ ಗಲಾಟೆ ವೇಳೆ ರಜನಿ- ಸತ್ಯರಾಜ್ ಮನಸ್ತಾಪ; ಮತ್ತೆ ಇಬ್ಬರೂ 'ಕೂಲಿ' ಚಿತ್ರದಲ್ಲಿ ನಟಿಸಿದ್ದೇಗೆ?
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಟ್ರೈಲರ್ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಚೆನ್ನೈನಲ್ಲಿ ಅದ್ಧೂರಿಯಾಗಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ರಜನಿಕಾಂತ್, ಉಪೇಂದ್ರ, ಆಮೀರ್ ಖಾನ್ ಸೇರಿ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು. ಇನ್ನು ಚಿತ್ರದಲ್ಲಿ ಸತ್ಯರಾಜ್ ಕೂಡ ಪವರ್ಫುಲ್ ಪಾತ್ರದಲ್ಲಿ ನಟಿಸಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಸ್ಟಾರ್ ನಟ, ನಟಿಯರ ದಂಡೇ ಚಿತ್ರದಲ್ಲಿದೆ. ಉಪೇಂದ್ರ ಹಾಗೂ ರಚಿತಾ ರಾಮ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಟ್ರೈಲರ್ನಲ್ಲಿ ಇಬ್ಬರ ಸಣ್ಣ ಸಣ್ಣ ಝಲಕ್ ನೋಡಬಹುದು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿನಿಮಾ ಆಗಸ್ಟ್ 14ಕ್ಕೆ ತೆರೆಗೆ ಬರಲಿದೆ.

ಸತ್ಯರಾಜ್ ಕೂಡ ತಮಿಳಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ರಜನಿಕಾಂತ್ ರೀತಿಯಲ್ಲೇ ಸಣ್ಣಪಟ್ಟ ಪಾತ್ರಗಳನ್ನು ಮಾಡುತ್ತಾ ಬಳಿಕ ಖಳನಟನಾಗಿ ಆ ನಂತರ ಹೀರೊ ಆಗಿ ಗೆದ್ದವರು. ಕೆಲ ಹಿಟ್ ಸಿನಿಮಾಗಳಲ್ಲಿ ಹೀರೊ ಆಗಿ ಸಕ್ಸಸ್ ಕಂಡಿದ್ದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಅವರು ನಟಿಸಿದ್ದಾರೆ ಎನ್ನಲಾಗ್ತಿದೆ.
ಚಿತ್ರದಲ್ಲಿ ಮಾಫಿಯಾ ಡಾನ್ ದೇವಾ ಆಗಿ ರಜನಿಕಾಂತ್ ಅಬ್ಬರಿಸಿದ್ದಾರೆ. ಇನ್ನು ರಾಜಶೇಖರ್ ಎಂಬ ಪಾತ್ರದಲ್ಲಿ ಸತ್ಯರಾಜ್ ಕಾಣಿಸಿಕೊಂಡಿದ್ದಾರೆ. ದಶಕಗಳ ಹಿಂದೆ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸಿದ್ದರು. ಬಳಿಕ ದೂರಾಗುವಂತಾಗಿತ್ತು. ಸೈದ್ಧಾಂತಿಕವಾಗಿ ಇಬ್ಬರಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಕೆಲ ವರ್ಷಗಳ ಹಿಂದೆ ಕಾವೇರಿ ಗಲಾಟೆ ವೇಳೆ ವೇದಿಕೆಯಲ್ಲೇ ಇಬ್ಬರ ಮನಸ್ಥಾಪ ಬಹಿರಂಗವಾಗಿತ್ತು. ಆ ಬಳಿಕ ಹೆಚ್ಚು ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ 'ಕೂಲಿ' ಚಿತ್ರದಲ್ಲಿ ಇಬ್ಬರು ಸ್ನೇಹಿತರಾಗಿ ನಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ. ಸತ್ಯರಾಜ್ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ರಜನಿಕಾಂತ್ ವೇದಿಕೆಯಲ್ಲಿ ಮಾತನಾಡಿದ್ದಾರೆ.
ಕಾವೇರಿ ಗಲಾಟೆ ವೇಳೆ ಆಗಿದ್ದೇನು?
ಕೆಲ ವರ್ಷಗಳ ಹಿಂದೆ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾವೇರಿ ನೀರಿಗಾಗಿ ತಮಿಳು ಚಿತ್ರರಂಗ ಬೀದಿಗೆ ಇಳಿದಿತ್ತು. ಕಲಾವಿದರ ಸಂಘ ಚೆನ್ನೈನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿತ್ತು. ಆಗ ರಜನಿಕಾಂತ್ ನೇರವಾಗಿ ಏನು ಮಾತನಾಡುತ್ತಿಲ್ಲ ಎಂದು ಸತ್ಯರಾಜ್ ಪರೋಕ್ಷವಾಗಿ ತಿವಿದಿದ್ದರು. ನಾನು ಮಾತ್ರ ತಮಿಳುನಾಡಿನ ಪರ, ಕಾವೇರಿ ನೀಡು ಬಿಡಲೇಬೇಕು. ಧೈರ್ಯ ಇರುವವರು ಮಾತನಾಡಿ ಇಲ್ಲದವರು ಓಡಿ ಹೋಗಿ ಬಚ್ಚಿಟ್ಟುಕೊಳ್ಳಿ ಎಂದು ವ್ಯಂಗ್ಯವಾಡಿದ್ದರು. ಆ ಬಳಿಕ ಕೂಡ ಕೆಲ ವೇದಿಕೆಗಳಲ್ಲಿ ರಜನಕಾಂತ್ ಬಗ್ಗೆ ಸತ್ಯರಾಜ್ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು.

38 ವರ್ಷಗಳ ಬಳಿಕ ಒಟ್ಟಿಗೆ ನಟನೆ
'ಶಿವಾಜಿ' ಚಿತ್ರದಲ್ಲಿ ವಿಲನ್ ಪಾತ್ರ ಮಾಡುವಂತೆ ಸತ್ಯರಾಜ್ ಅವರನ್ನು ನಿರ್ದೇಶಕ ಶಂಕರ್ ಕೇಳಿದ್ದರು. ಆದರೆ ಪಾತ್ರಕ್ಕೆ ಅಷ್ಟು ಪವರ್ ಇಲ್ಲ. ನಾನು ಮಾಡಲ್ಲ ಎಂದು ಅವರು ಹೇಳಿದ್ದರಂತೆ. ಈ ವಿಚಾರವನ್ನು ಸ್ವತಃ ಸತ್ಯರಾಜ್ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. 'ಮಿ. ಭರತ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೆವು. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಆ ಬಳಿಕ ರಜನಿಕಾಂತ್ ಜೊತೆ ನಟಿಸುವ ಅವಕಾಶ ಸಿಗಲಿಲ್ಲ. 'ಶಿವಾಜಿ' ಹಾಗೂ 'ಎಂದಿರನ್' ಚಿತ್ರಗಳಲ್ಲಿ ಕೇಳಿದ್ದರು. ನನಗೆ ಪಾತ್ರ ಇಷ್ಟವಾಗದೇ ಒಪ್ಪಲಿಲ್ಲ ಎಂದಿದ್ದರು.
ರಜನಿಕಾಂತ್ ಹೇಳಿದ್ದೇನು?
'ಕೂಲಿ' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ರಜನಿಕಾಂತ್ ಮಾತನಾಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಕೆಲಸ ಮಾಡಿದ್ದು ಆಮೀರ್ ಖಾನ್, ಸತ್ಯರಾಜ್, ಉಪೇಂದ್ರ, ನಾಗಾರ್ಜುನ ಹೀಗೆ ಎಲ್ಲರ ಜೊತೆ ನಟಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸತ್ಯರಾಜ್ ಜೊತೆ ಬಹಳ ವರ್ಷಗಳ ಬಳಿಕ ನಟಿಸಿದ್ದೇನೆ. ಅವರು ಬಹಳ ನೇರವಾಗಿ ಮಾತನಾಡುವ ವ್ಯಕ್ತಿತ್ವದವರು. ಏನಾದರೂ ಇದ್ದರೆ ಮುಖದ ಮೇಲೆ ಹೊಡೆದಂತೆ ಹೇಳಿಬಿಡುತ್ತಾರೆ. ಮೇಲೆ ಒಂದು ಒಳಗೆ ಒಂದು ಇಟ್ಟುಕೊಳ್ಳುವುದಕ್ಕಿಂತ ಹೀಗೆ ನೇರವಾಗಿ ಹೇಳಿಬಿಡುವುದು ಉತ್ತಮ ಎಂದು ರಜನಿಕಾಂತ್ ಹೇಳಿದ್ದಾರೆ.


Click it and Unblock the Notifications











