ಅಭಿಮಾನಿಗಳಲ್ಲಿ ರಜನಿಕಾಂತ್ ಮನವಿ: ಮತ್ತೆ ಮತ್ತೆ ನನಗೆ ನೋವುಂಟು ಮಾಡಬೇಡಿ ಎಂದ ಸೂಪರ್ ಸ್ಟಾರ್
ಪ್ರತಿಭಟನೆ ಮಾಡಿ, ರಾಜಕೀಯಕ್ಕೆ ಬರುವಂತೆ ಒತ್ತಡ ಹೇರುವ ಮೂಲಕ ನನಗೆ ಪದೇ ಪದೇ ನೋವುಂಟು ಮಾಡಬೇಡಿ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೂಪರ್ ಸ್ಟಾರ್ ರಜನಿಂಕಾತ್ ಈಗಾಗಲೇ ರಾಜಕೀಯ ಪಕ್ಷ ಘೋಷಣೆ ಮಾಡಿ, ರಾಜಕೀಯದಲ್ಲಿ ಸಕ್ರೀಯರಾಗಬೇಕಿತ್ತು. ಆದರೆ ರಜನಿಕಾಂತ್ ಅವರ ರಾಜಕೀಯ ವಿಚಾರ ತಾನೋಂದು ಬಗೆದರೆ ದೈವವೊಂದು ಬಗೆದಂತೆ ಆಗಿದೆ.
ಆರೋಗ್ಯ ಸಮಸ್ಯೆಯಿಂದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿಯಬೇಕಾಯಿತು. ಕಳೆದ ತಿಂಗಳು ಡಿಸೆಂಬರ್ 30ರಂದು ಸೂಪರ್ ಸ್ಟಾರ್ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದರು. ಆದರೆ ಅನಾರೋಗ್ಯದ ಕಾರಣ ತಲೈವಾ ಆಸ್ಪತ್ರೆಗೆ ದಾಖಲಾದರು.

ಆರೋಗ್ಯ ಹದಗೆಟ್ಟ ಕಾರಣ ರಾಜಕೀಯ ನಿರ್ಧಾರ ಬದಲಾಯಿಸಿ ರಾಜಕೀಯದಿಂದ ಹಿಂದೆ ಸರಿದರು. ರಜನಿಕಾಂತ್ ಈ ನಿರ್ಧಾರ ಸಹಜವಾಗಿ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತು. ಆದರೆ ರಾಜನಿಕಾಂತ್ ತಮ್ಮ ನಿರ್ಧಾರ ಬದಲಾಯಿಸಿ ರಾಜಕೀಯಕ್ಕೆ ಬರಬೇಕೆಂದು ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
ಅಭಿಮಾನಿಗಳ ಪ್ರತಿಭಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಜನಿಕಾಂತ್, ಪದೇ ಪದೇ ಪ್ರತಿಭಟನೆ ಮಾಡಿ ನನ್ನ ಮೇಲೆ ಒತ್ತಡ ಹಾಕುವ ಮೂಲಕ ನೋವು ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 'ರಾಜಕೀಯಕ್ಕೆ ಬರಲು ಸಾಧ್ಯವಾಗದಿರುವ ಕಾರಣವನ್ನು ನಾನು ಈಗಾಗಲೇ ಹೇಳಿದ್ದೇನೆ. ನನ್ನ ನಿರ್ಧಾರವನ್ನು ನಾನು ತಿಳಿಸಿದ್ದೇನೆ. ಈ ರೀತಿ ಪ್ರತಿಭಟನೆ ಮಾಡುವ ಮೂಲಕ ದಯವಿಟ್ಟು ನನಗೆ ನನಗೆ ನೋವುಂಟು ಮಾಡಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
'ಜೊತೆಗೆ ಪ್ರತಿಭಟನೆಯನ್ನು ಶಿಸ್ತುಬದ್ಧವಾಗಿ ಮತ್ತು ಘಟನೆಯಿಂದ ನಡೆಸಿದ್ದಕ್ಕಾಗಿ ಧನ್ಯವಾದಗಳು' ಎಂದು ಹೇಳಿದ್ದಾರೆ. ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕಳೆದ ತಿಂಗಳು ಹೈದರಾಬಾದ್ ನಲ್ಲಿ ಚಿತ್ರೀಕರಣ ಪ್ರಾರಂಭ ಮಾಡುವ ಮೂಲಕ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹೊರಟಿದ್ದರು ಸೂಪರ್ ಸ್ಟಾರ್. ಆದರೆ ಚಿತ್ರೀಕರಣದಲ್ಲಿ ಭಾಗಿಯಾಗಿ ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದ ಸೂಪರ್ ಅವರನ್ನು ಹೈದರಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಡಿಸ್ಚಾರ್ಜ್ ಆಗಿ ಚೆನ್ನೈಗೆ ತೆರಳಿದ್ದಾರೆ.
ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಸೂಪರ್ ಸ್ಟಾರ್ ಕೆಲವು ದಿನಗಳ ಬಳಿಕ ಮತ್ತೆ ಅಣ್ಣಾತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.


Click it and Unblock the Notifications











