ವಿವಾದಾತ್ಮಕ ಪೋಸ್ಟ್: ನಟಿ ಕಸ್ತೂರಿ ಶಂಕರ್ಗೆ ಕರೆ ಮಾಡಿದ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ತಪಾಸಣೆಗಾಗಿ ಅಮೆರಿಕಾ ತೆರಳಿದ್ದಾರೆ. ಯುಎಸ್ನ ಮೆಯೊ ಕ್ಲಿನಿಕ್ ಎದುರು ರಜನಿ ಮತ್ತು ಮಗಳು ಐಶ್ವರ್ಯ ಧನುಶ್ ಕಾಣಿಸಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ರಜನಿಕಾಂತ್ ಅಮೆರಿಕಾ ಪ್ರಯಾಣವನ್ನು ನಟಿ-ಸಾಮಾಜಿಕ ಹೋರಾಟಗಾರ್ತಿ ಕಸ್ತೂರಿ ಶಂಕರ್ ಖಂಡಿಸಿದ್ದರು. ಕೊರೊನಾ ನಿಯಮಗಳ ಉಲ್ಲಂಘಿಸಿ ರಜನಿಕಾಂತ್ ಯುಎಸ್ ತೆರಳಿದ್ದು ಏಕೆ? ಅವರ ಆರೋಗ್ಯದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಸರಣಿ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
ರಜನಿಕಾಂತ್ ಅಮೆರಿಕಾ ಪ್ರಯಾಣದ ಬಗ್ಗೆ ಟೀಕಿಸಿ ಟ್ವೀಟ್ ಮಾಡಿದ್ದ ಕಸ್ತೂರಿ ಶಂಕರ್ ವಿರುದ್ಧ ತಲೈವಾ ಅಭಿಮಾನಿಗಳು ಮುಗಿಬಿದ್ದಿದ್ದರು. ರಜನಿ ಆರೋಗ್ಯದ ಬಗ್ಗೆ ಬೇಜವಾಬ್ದಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದ್ದರು.

ಇದೀಗ, ಕಸ್ತೂರಿ ಶಂಕರ್ ಅವರಿಗೆ ಸ್ವತಃ ರಜನಿಕಾಂತ್ ಯುಎಸ್ನಿಂದ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಸ್ವತಃ ಕಸ್ತೂರಿ ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
''ರಜನಿಕಾಂತ್ ಸರ್ ಕರೆ ಮಾಡಿ ಅಮೆರಿಕಾ ತೆರಳಿರುವ ಉದ್ದೇಶ ವಿವರಿಸಿದರು. ಈ ಅಚ್ಚರಿ ಕರೆಗೆ ಧನ್ಯವಾದ. ಈ ಮೂಲಕ ನನ್ನಲ್ಲಿದ್ದ ಆಂತರಿಕ ಗಲಾಟೆ ಅಂತ್ಯವಾಗಿದೆ. ತಲೈವಾ ಆರೋಗ್ಯವಾಗಿ, ಹೊಸ ಉಲ್ಲಾಸದಿಂದ ಬರಲಿದ್ದಾರೆ. ಅವರನ್ನು ಸ್ವಾಗತಿಸಲು ತಮಿಳುನಾಡು ಸಿದ್ದವಾಗಿರಿ'' ಎಂದು ಕಸ್ತೂರಿ ತಿಳಿಸಿದ್ದಾರೆ.
ಕಸ್ತೂರಿ ಶಂಕರ್ ಸರಣಿ ಟ್ವೀಟ್ನಲ್ಲಿ ಏನಿತ್ತು?
ಭಾರತದಿಂದ ನೇರವಾಗಿ ಅಮೆರಿಕಾ ಹೋಗುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಇಂತಹ ಸಮಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪ್ರಯಾಣಿಸುವುದೇ? ಭಾರತೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದಂತಹ ಸ್ಥಿತಿ ರಜನಿ ಅವರಿಗೇನಾಗಿದೆ? ಹೃದಯ ಸಂಬಂಧಿ ಕಾಯಿಲೆಗೆ ಖ್ಯಾತಿ ಗಳಿಸಿರುವ ಮೆಯೊ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದೇಕೆ? ರಜನಿಕಾಂತ್ಗೆ ಏನಾಗಿದೆ ಎಂದು ತಿಳಿಯಲು ಇಷ್ಟಪಡುತ್ತೇನೆ'' ಎಂದು ಕಸ್ತೂರಿ ಟ್ವೀಟ್ ಮಾಡಿದ್ದರು.
ರಜನಿ ಆರೋಗ್ಯ ವರದಿ ನೀಡಿದ್ದ ವೈರಮುತ್ತು
ಯುಎಸ್ನಿಂದ ಸ್ನೇಹಿತ, ಗೀತೆರಚನೆಕಾರ ವೈರಮುತ್ತುಗೆ ರಜನಿಕಾಂತ್ ಕರೆ ಮಾಡಿ ಮಾತನಾಡಿದ್ದರು. ಈ ವಿಷಯ ಹಂಚಿಕೊಂಡಿದ್ದ ವೈರಮುತ್ತು, ''ಯುಎಸ್ನಿಂದ ರಜನಿ ಫೋನ್ ಮಾಡಿದ್ರು. ಆರೋಗ್ಯ ತಪಾಸಣೆ ಚೆನ್ನಾಗಿ ಸಾಗಿದೆ ಎಂದು ಹೇಳಿದರು. ಅದನ್ನು ಕೇಳಿ ಬಹಳಷ್ಟು ಖುಷಿ ಕೊಟ್ಟಿದೆ. ಅವರ ಧ್ವನಿಯಲ್ಲಿ ವಿಶ್ವಾಸ ಮತ್ತು ಆರೋಗ್ಯವಾಗಿದ್ದಾರೆ ಎನ್ನುವುದು ಕಾಣ್ತಿತ್ತು. ಅಭಿಮಾನಿಗಳಿಗಾಗಿ ಇದನ್ನು ಟ್ವೀಟ್ ಮಾಡಿ ತಿಳಿಸುತ್ತಿದ್ದೇನೆ'' ಎಂದು ಪೋಸ್ಟ್ ಹಾಕಿದ್ದರು.


Click it and Unblock the Notifications











