ಮತ್ತೆ ಹಿಮಾಲಯದ ತಪ್ಪಲಿನಲ್ಲಿ ನೆಮ್ಮದಿ ಹುಡುಕಿಕೊಂಡು ಹೊರಟರು ರಜಿನಿಕಾಂತ್...!
ರಜಿನಿಕಾಂತ್ ಭಾರತದ ಸೂಪರ್ ಸ್ಟಾರ್. ಇಡೀ ವಿಶ್ವಕ್ಕೆ ಗೊತ್ತಿರುವ ಮಹಾನಾಯಕ. ಚೆನ್ನೈ-ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜಿನಿ ಒಡೆತನದ ಆಸ್ತಿಗಳಿವೆ. ಇಡೀ ಜಗತ್ತಿನಲ್ಲಿ ರಜನಿಗೆ ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಗೊತ್ತಿಲ್ಲ.
ಆದರೆ ಇಂಥ ರಜಿನಿಕಾಂತ್ ಮನಸ್ಸು ಮಾತ್ರ ಹುಟ್ಟೂರಿನ, ತಾನು ಓಡಾಡಿದ, ಕಷ್ಟದ ನಡುವೆಯೇ ನೆಮ್ಮದಿ ಕಂಡುಕೊಂಡಿದ್ದ ಜಾಗಗಳೆಡೆಗೇ ಜಾರುತ್ತಿರುತ್ತದೆ. ಇದರ ಜೊತೆಗೆ ರಜನಿ ಸೀದಾ ಹೋಗಿ ಅಡ್ಡಾಡಿಕೊಂಡುವ ಬರುವುದು ಹಿಮಾಲಯದ ಬೆಟ್ಟ ಗುಡ್ಡದ ನಡುವೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಸದ್ಯಕ್ಕೆ ರಜಿನಿಕಾಂತ್ ಹಿಮಾಲಯದ ಕಡೆ ಮುಖ ಮಾಡಿದ್ದಾರೆ

ಹೌದು, ತಾವು ನಟಿಸುವ ಸಿನಿಮಾ ಚಿತ್ರೀಕರಣ ಮುಗಿದು ಮತ್ತೊಂದು ಸಿನಿಮಾ ಆರಂಭವಾಗುವ ಮಧ್ಯದ ಗ್ಯಾಪ್ನಲ್ಲಿ ತಲೈವಾ ಹಿಮಾಲಯವನ್ನೊಮ್ಮೆ ಸುತ್ತು ಹಾಕಿಕೊಂಡು ಬರುತ್ತಾರೆ. ವರ್ಷಾನುವರ್ಷಗಳಿಂದ ಈ ಸಂಪ್ರದಾಯವನ್ನ ಪಾಲಿಸಿಕೊಂಡು ಬಂದಿರುವ ಸೂಪರ್ ಸ್ಟಾರ್ ರಜಿನಿ ಸದ್ಯ ವೆಟ್ಟೈಯನ್ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ದೀರ್ಘ ಬಿಡುವು ಸಿಗುತ್ತಿದ್ದಂತೇ ಬದ್ರೀನಾಥ್, ಕೇದಾರನಾಥ್ ಸೇರಿದಂತೆ ಸುತ್ತಮುತ್ತಲಿನ ತೀರ್ಥಕ್ಷೇತ್ರಗಳತ್ತ ತಮ್ಮ ಸ್ನೇಹಿತರೊಡನೆ ಇಂದು ತೆರಳಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ತಮ್ಮ ಈ ಆಧ್ಯಾತ್ಮಿಕ ಪ್ರವಾಸದ ಬಗ್ಗೆ ಮಾತನಾಡಿರುವ ರಜಿನಿಕಾಂತ್, ನಾನು ಪ್ರತಿ ವರ್ಷ ಹಿಮಾಲಯಕ್ಕೆ ಹೋಗುತ್ತೇನೆ, ಈಗ ನಾನು ಕೇದಾರನಾಥ, ಬದರಿನಾಥ್, ಬಾಬಾಜಿ ಗುಹೆಯತ್ತ ತೆರಳುತ್ತಿದ್ದೇನೆ ಎಂದಿದ್ದಾರೆ. ಇನ್ನೂ.. ಇದೇ ವೇಳೆ ತೂರಿ ಬಂದ ರಾಜಕೀಯ ಪ್ರಶ್ನೆಗಳಿಗೆ ಉತ್ತರ ಕೊಡಲು ನಿರಾಕರಿಸಿದ ರಜಿನಿಕಾಂತ್,ತಮ್ಮ ಮುಂದಿನ ಸಿನಿಮಾ ಕೂಲಿ ಚಿತ್ರಕ್ಕೆ ಇಳಯರಾಜಾ ನೀಡಿದ್ದ ನೋಟಿಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಕೂಡ ಉತ್ತರವನ್ನ ಕೊಡಲು ನಿರಾಕರಿಸಿದ್ದಾರೆ.

ಉಳಿದಂತೆ ಹಿಮಾಲಯದಿಂದ ರಜಿನಿಕಾಂತ್ ಜೂನ್ 03 ಅಥವಾ 04ಕ್ಕೆ ಚನೈಗೆ ಮರಳಿ ಬರಲಿದ್ದಾರೆ. ಆ ನಂತರ ಚೆನ್ನೈಗೆ ಮರಳಿದ ನಂತರ ರಜನಿಕಾಂತ್ 'ಕೂಲಿ' ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ. ಸತ್ಯರಾಜ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಒಟ್ನಲ್ಲಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗವನ್ನು ಕಂಡರೂ ಮತ್ತೆ ಆರಂಭದ ಶೂನ್ಯಕ್ಕೆ ಮರಳಿ ತಮ್ಮನ್ನು ತಾವು ಅವಲೋಕಿಸಿಕೊಳ್ಳುವವರು ಮಾತ್ರ ನಿಜಕ್ಕೂ ಜೀವನದ ಸಾರ್ಥಕತೆಯನ್ನು, ಬಾಳಿನ ಅಸಲೀ ರುಚಿಯನ್ನು ಅನುಭವಿಸುವುದು ಸಾಧ್ಯವೇನೋ! ಇದಕ್ಕೆ ರಜಿನಿಕಾಂತ್ ಅತ್ಯುತ್ತಮ ಉದಾಹರಣೆ ಎಂದರೆ ತಪ್ಪಾಗಲಿಕ್ಕಿಲ್ಲ


Click it and Unblock the Notifications











