ರಜನಿಕಾಂತ್ ಮುಂದಿನ ಚಿತ್ರಕ್ಕೆ ತೆಲುಗು ಯುವ ನಿರ್ದೇಶಕ ಆಕ್ಷನ್ ಕಟ್?
ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಯಸ್ಸು 70 ದಾಟಿದ್ರು ಸಿಕ್ಕಾಪಟ್ಟೆ ಯಂಗ್ ಅಂಡ್ ಎನರ್ಜಿಟಿಕ್ ಆಗಿ ತೆರೆಮೇಲೆ ಅಬ್ಬರಿಸುತ್ತಿದ್ದಾರೆ. ಈಗಾಗಲೇ 'ಕೂಲಿ' ಶೂಟಿಂಗ್ ಮುಗಿಸಿ 'ಜೈಲರ್- 2' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಈ ಎರಡು ಸಿನಿಮಾಗಳ ಬಳಿಕ ತಲೈವಾ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಶುರುವಾಗಿದೆ. ಈಗಾಗಲೇ ಸಾಕಷ್ಟು ಜನ ಅವರಿಗೆ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯಾವುದನ್ನು ಕೂಡ ಫೈನಲ್ ಮಾಡಿಲ್ಲ. ತಮಿಳು ನಿರ್ದೇಶಕರಾದ ವಿನೋದ್ ಹಾಗೂ ಎಸ್ಯು ಅರುಣ್ಕುಮಾರ್ ಕೂಡ ಕಥೆ ಹೇಳಿದ್ದು ಓಕೆ ಆಗುವ ಸಾಧ್ಯತೆ ಇದೆ ಎನ್ನುವ ಊಹಾಪೋಹ ಶುರುವಾಗಿದೆ. ಇದೆಲ್ಲದರ ನಡುವೆ ತೆಲುಗು ಯುವ ನಿರ್ದೇಶಕನ ಜೊತೆ ತಲೈವಾ ಸಿನಿಮಾ ಮಾಡ್ತಾರೆ ಎನ್ನುವ ಗುಸು ಗುಸು ಶುರುವಾಗಿದೆ.

ಈಗಾಗಲೇ ರಜನಿಕಾಂತ್ ನಿವೃತ್ತಿ ಬಗ್ಗೆ ಊಹಾಪೋಹ ಶುರುವಾಗಿದೆ. ವಯಸ್ಸು ಹೆಚ್ಚಾಗುತ್ತಿರುವ ಕಾರಣ ಇನ್ನು ನಾಲ್ಕೈದು ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದೇ ಕಾರಣಕ್ಕೆ ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಹೊಸಬಗೆಯ ಕಥೆಗಳ ಹುಡುಕಾಟದಲ್ಲಿದ್ದಾರೆ. ಕೆಲ ಕಥೆಗಳನ್ನು ರಿಜೆಕ್ಟ್ ಮಾಡಿದ್ದಾರೆ.
ಇತ್ತೀಚೆಗೆ ಕಾರ್ತಿಕ್ ಸುಬ್ಬರಾಜ್ 'ರೆಟ್ರೊ' ಎಂಬ ಸಿನಿಮಾ ಮಾಡಿದ್ದರು. ಸೂರ್ಯ ಹೀರೊ ಆಗಿ ನಟಿಸಿದ್ದರು. ಆದರೆ ಈ ಕಥೆಯನ್ನು ಮೊದಲು ರಜನಿಕಾಂತ್ ಅವರಿಗೆ ಹೇಳಲಾಗಿತ್ತು. ಅವರು ಒಪ್ಪದೇ ಇದ್ದಾಗ ಸೂರ್ಯ ಮಾಡುವಂತಾಯಿತು. ಅದೇ ರೀತಿ ಕೆಲ ನಿರ್ದೇಶಕರು ತಲೈವಾಗೆ ಕಥೆ ಹೇಳಿ ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ತೆಲುಗು ಯುವ ನಿರ್ದೇಶಕ ವಿವೇಕ್ ಆತ್ರೇಯಾ ಹೇಳಿದ ಕಥೆಯನ್ನು ಸೂಪರ್ ಸ್ಟಾರ್ ಮೆಚ್ಚಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತದೆ ಎಂದು ಗುಲ್ಲಾಗಿದೆ. 'ಪುಷ್ಪ' ರೀತಿಯ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಸಂಸ್ಥೆ ಕೊಟ್ಟಿದೆ. ಇತ್ತೀಚೆಗೆ ತೆರೆಕಂಡು ಗೆದ್ದ 'ಗುಡ್ ಬ್ಯಾಡ್ ಅಗ್ಲಿ' ತಮಿಳು ಚಿತ್ರವನ್ನು ಇದೇ ಸಂಸ್ಥೆ ನಿರ್ಮಿಸಿತ್ತು. ಈಗಾಗಲೇ ಕಾಲಿವುಡ್ ಪ್ರವೇಶಿಸಿರುವ ಮೈತ್ರಿ ಮೂವಿಮೇಕರ್ಸ್ ಇದೀಗ ರಜನಿಕಾಂತ್ ಸಿನಿಮಾ ನಿರ್ಮಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

ಆಂಧ್ರ ಮೂಲದ ನಿರ್ದೇಶಕ ವಿವೇಕ್ ಆತ್ರೇಯಾ 4 ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. 'ಮೆಂಟಲ್ ಮದಿಲೊ' ಎಂಬ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಬಳಿಕ 'ಬ್ರೊಚೆವಾರೆವರೊ', 'ಅಂಟೆ ಸುಂದರಾನಿಕಿ' ಹಾಗೂ 'ಸರಿಪೊದ ಶನಿವಾರಂ' ಎಂಬ ಸಿನಿಮಾಗಳನ್ನು ಕಟ್ಟಿಕೊಂಡಿದ್ದರು. ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾ ತೆರೆಗೆ ತಂದು ಸಕ್ಸಸ್ ಕಂಡಿದ್ದರು. ಸದ್ಯ ರಜನಿಕಾಂತ್ ಅವರಿಗೆ ವಿವೇಕ್ ಕಥೆ ಹೇಳಿದ್ದು ಬಹುತೇಕ ಸಿನಿಮಾ ಶುರುವಾಗುತ್ತದೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ.
ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್ ಯುವ ನಿರ್ದೇಶಕರಿಗೆ ಅವಕಾಶ ಕೊಡುತ್ತಿದ್ದಾರೆ. ಕಾರ್ತಿಕ್ ಸುಬ್ಬರಾಜ್, ನೆಲ್ಸನ್, ಜ್ಞಾನವೇಲ್, ಲೋಕೇಶ್ ಕನಕರಾಜ್ ಕಾಂಬಿನೇಷನ್ಗಳಲ್ಲಿ ಸಿನಿಮಾ ಮಾಡಿದ್ದಾರೆ. ಲೋಕೇಶ್ ನಿರ್ದೇಶನದ ಮಲ್ಟಿಸ್ಟಾರರ್ 'ಕೂಲಿ' ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಈಗಾಗಲೇ 'ಜೈಲರ್- 2' ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಸನ್ ಪಿಕ್ಚರ್ಸ್ ಸಂಸ್ಥೆಯೇ 'ಕೂಲಿ' ಚಿತ್ರವನ್ನು ನಿರ್ಮಿಸಿದ್ದು ಅದೇ ಸಂಸ್ಥೆ 'ಜೈಲರ್'-2 ಚಿತ್ರಕ್ಕೂ ಹಣ ಹೂಡಿದೆ. ಶಿವರಾಜ್ಕುಮಾರ್ ಹಾಗೂ ಮೋಹಲ್ ಲಾಲ್ ಜೊತೆಗೆ ಈ ಬಾರಿ ಬಾಲಕೃಷ್ಣ ಕೂಡ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. 2 ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಾಗಾಗಿ ಸೀಕ್ವೆಲ್ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











