Rajinikanth: ಥಿಯೇಟರ್ಗಳಲ್ಲಿ ಜೈಲರ್ಗೆ ಜೈಕಾರ.. ರಜನಿಕಾಂತ್ಗೆ ರಾಂಚಿಯಲ್ಲಿ ಸತ್ಕಾರ
ಜೈಲರ್ ಸಿನಿಮಾ ಸೂಪರ್ ಹಿಟ್ ಆಗಿದೆ. ಆದರೆ, ಸೂಪರ್ಸ್ಟಾರ್ ರಜನಿಕಾಂತ್ ಮಾತ್ರ ಸಿನಿಮಾ ಬಿಡುಗಡೆಗೂ ಒಂದು ದಿನ ಮುಂಚೆಯೇ ಹಿಮಾಲಯಕ್ಕೆ ತೆರಳಿ ಜೈಲರ್ನ ಭಾರವನ್ನು ಅಭಿಮಾನಿಗಳ ಹೆಗಲಿಗೆ ಹಾಕಿದ್ದರು. ಹಿಮಾಲಯ ಪ್ರವಾಸದಿಂದ ಹಿಂತಿರುಗಿರುವ ತಲೈವಾ ರಾಂಚಿಯಲ್ಲಿ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದ್ದಾರೆ.
ತಮಿಳುನಾಡು ಮೂಲದ ರಾಧಾಕೃಷ್ಣನ್ ಅವರು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಮಾಜಿ ರಾಜ್ಯಾಧ್ಯಕ್ಷರಾಗಿದ್ದರು. ಇವರಿಬ್ಬರ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ರಜನಿಕಾಂತ್ ಅವರ ಜೊತೆಗಿನ ಭೇಟಿಯ ವಿವರಗಳನ್ನು ರಾಜ್ಯಪಾಲರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

"ನನ್ನ ಆತ್ಮೀಯ ಸ್ನೇಹಿತ, ಭಾರತದ ಶ್ರೇಷ್ಠ ನಟರಲ್ಲಿ ಒಬ್ಬರಾದ ಮತ್ತು ಮಹಾನ್ ಮಾನವತಾವಾದಿ ಸೂಪರ್ಸ್ಟಾರ್ ರಜನಿಕಾಂತ್ ಅವರು ರಾಂಚಿಗೆ ಬಂದಾಗ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು. ನಿನ್ನೆ ರಾಜಭವನದಲ್ಲಿ ರಜನಿಕಾಂತ್ ಜೀ ಅವರ ಜೊತೆಗೆ ಸೌಜನ್ಯದ ಭೇಟಿಯಾಯಿತು. ನಾನು ಅವರನ್ನು ಜಾರ್ಖಂಡ್ಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ" ಎಂದಿದ್ದಾರೆ.
'ಜೈಲರ್' ಚಿತ್ರದ ಯಶಸ್ಸಿನಲ್ಲಿ ಮುಳುಗಿರುವ ರಜನಿಕಾಂತ್, ಚಿತ್ರ ಬಿಡುಗಡೆಗೂ ಮುನ್ನ ತಲೈವರ್ ಹಿಮಾಲಯ ಪ್ರವಾಸ ಕೈಗೊಂಡಿದ್ದರು. ಹಿಮಾಲಯ ಶ್ರೇಣಿಯ ದೇಗುಲಗಳಿಗೆ ಭೇಟಿ ನೀಡಿದ ನಂತರ ರಜನಿಕಾಂತ್ ರಾಂಚಿಗೆ ಆಗಮಿಸಿದ್ದರು. ಆಗಸ್ಟ್ 16 ರಂದು ತಮ್ಮ ಸ್ನೇಹಿತ ಮತ್ತು ಜಾರ್ಖಂಡ್ ಗವರ್ನರ್ ಸಿಪಿ ರಾಧಾಕೃಷ್ಣನ್ ಅವರನ್ನು ಸೌಜನ್ಯವಾಗಿ ಭೇಟಿಯಾಗಿದ್ದಾರೆ.

ನಾಲ್ಕು ವರ್ಷಗಳ ನಂತರ ಹಿಮಾಲಯಕ್ಕೆ ರಜನಿ ಪ್ರವಾಸ
ನಾಲ್ಕು ವರ್ಷಗಳ ನಂತರ ರಜನಿಕಾಂತ್ ಹಿಮಾಲಯಕ್ಕೆ ತೆರಳಿದ್ದರು. ರಜನಿ ತಮ್ಮ ಸ್ನೇಹಿತರೊಂದಿಗೆ ಹಿಮಾಲಯ ಪ್ರವಾಸದ ವೇಳೆ ಅನೇಕ ದೇವಾಲಯಗಳು ಮತ್ತು ಗುಹೆಗಳಿಗೆ ಭೇಟಿ ನೀಡಿದ್ದರು. ಬದರಿನಾಥ್, ವ್ಯಾಸ ಗುಹೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಗುಹೆಗಳಲ್ಲಿ ಧ್ಯಾನದಲ್ಲಿ ಮುಳುಗಿದ್ದ ಚಿತ್ರಗಳು ವೈರಲ್ ಆಗಿದ್ದವು.
ರಜಿನಿಕಾಂತ್ ಮುಂದಿನ ಚಿತ್ರಗಳು
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಮಗಳು ಐಶ್ವರ್ಯಾ ಅವರ ಮುಂಬರುವ ಚಿತ್ರ 'ಲಾಲ್ ಸಲಾಮ್' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಅದರಲ್ಲಿ ರಜನಿಕಾಂತ್ ಮೊಯ್ದೀನ್ ಭಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದು, ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಕೊನೆಯಲ್ಲಿ 'ಲಾಲ್ ಸಲಾಮ್' ತೆರೆಗೆ ಬರಲಿದೆ.
ಚೆನ್ನೈಗೆ ಹಿಂದಿರುಗಿದ ನಂತರ, ರಜನಿಕಾಂತ್ ಅವರು 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಪಾತ್ರವರ್ಗವನ್ನು ಪ್ರಕಟಿಸಲಾಗುತ್ತದೆ ಎಂಬ ವರದಿಗಳಿವೆ.


Click it and Unblock the Notifications











