"ಲೋಕೇಶ್ ಕನಕರಾಜ್ ಈಗ ಮಾಡ್ತಿರೋದನ್ನ ಉಪೇಂದ್ರ ಯಾವತ್ತೋ ಮಾಡಿದ್ರು"; ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಆಗಸ್ಟ್ 14ಕ್ಕೆ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ದೊಡ್ಡ ಮಟ್ಟದ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ. ರಜನಿಕಾಂತ್ ಜೊತೆಗೆ ಉಪೇಂದ್ರ, ಆಮೀರ್ ಖಾನ್, ನಾಗಾರ್ಜುನ ರೀತಿಯ ಸ್ಟಾರ್ ನಟರು ಬಣ್ಣ ಹಚ್ಚಿರುವುದು ಕುತೂಹಲ ಮೂಡಿಸಿದೆ.
ದಶಕಗಳ ಹಿಂದೆಯೇ ರಿಯಲ್ ಸ್ಟಾರ್ ಉಪೇಂದ್ರ ಪರಭಾಷಾ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಈಗಾಗಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಉಪ್ಪಿ ಗೆದ್ದಿದ್ದಾರೆ. ಇದೀಗ 'ಕೂಲಿ' ಚಿತ್ರದಲ್ಲಿ ಒಂದೊಳ್ಳೆ ಪಾತ್ರವೇ ಸಿಕ್ಕಿದೆ. ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಉಪ್ಪಿ ನಟಿಸಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಟ್ರೈಲರ್ನಲ್ಲಿ ಕೂಡ ಉಪ್ಪಿ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ 'ಕೂಲಿ' ಚಿತ್ರಕ್ಕೆ ಅನಿರುದ್ಧ್ ರವಿಚಂದನ್ ಸಂಗೀತವಿದೆ. ಈಗಾಗಲೇ ಚಿತ್ರದ ಸಾಂಗ್ಸ್ ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ. ಇತ್ತೀಚೆಗೆ ಚೆನ್ನೈನಲ್ಲಿ 'ಕೂಲಿ' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಇಡೀ ಚಿತ್ರತಂಡ ಹಾಜರಾಗಿತ್ತು. ನಟ ರಜನಿಕಾಂತ್ ಸಾಕಷ್ಟು ವಿಚಾರಗಳ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ್ದಾರೆ. ಉಪೇಂದ್ರ ಜೊತೆ ನಟಿಸಿದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲ ರಿಯಲ್ ಸ್ಟಾರ್ ಪ್ರತಿಭೆಯನ್ನು ಕೊಂಡಾಡಿದ್ದಾರೆ.
"ಕೂಲಿ ಕಥೆ ಕೇಳಿದ ಮೇಲೆ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎಂದು ಲೋಕೇಶ್ ಕನಕರಾಜ್ ಜೊತೆ ಚರ್ಚೆ ಆಯಿತು. ಚಿತ್ರದಲ್ಲಿ ಒಂದು ಅತಿಥಿ ಪಾತ್ರ ಇದೆ. ಅದು ಯಾರು ಮಾಡ್ತಾರೆ ಅಂದೆ, ಉಪೇಂದ್ರ ಅಂದ್ರು. ಭಾರತದಲ್ಲಿ ಎಲ್ಲಾ ಬುದ್ಧಿವಂತ ಚಿತ್ರ ನಿರ್ದೇಶಕರಿಗೆ ಉಪೇಂದ್ರ ಭಾರತದಲ್ಲಿ ಸ್ಫೂರ್ತಿ. ತಮಿಳು, ಹಿಂದಿ, ತೆಲುಗು, ಮಲಯಾಳಂ ಎಲ್ಲಾ ಭಾಷಿಕರು ಮೆಚ್ಚಿದ್ದಾರೆ. ಎಂಥ ಅದ್ಭುತ ನಿರ್ದೇಶಕ ಗೊತ್ತಾ? 'ಓಂ' ಅಂತ ಶಿವರಾಜ್ಕುಮಾರ್ ಹೀರೊ ಆಗಿ ಮೊದಲು ಒಂದು ಸಿನ್ಮಾ ಮಾಡಿದ್ರು. ನನಗೆ 'ಬಾಷಾ' ಹೇಗೋ ಅದಕ್ಕಿಂತ 10 ಪಟ್ಟು ದೊಡ್ಡ ಸಿನ್ಮಾ ಅದು" ಎಂದು ರಜನಿಕಾಂತ್ ಕೊಂಡಾಡಿದ್ದಾರೆ.
ಮಾತು ಮುಂದುವರೆಸಿದ ತಲೈವಾ "ಓಂ ಬಳಿಕ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಅದೇನೋ ಈಗ ನಾನ್ ಲೀನಿಯರ್ ಅಂತ ಲೋಕೇಶ್ ಕನಕರಾಜ್ ಸಿನ್ಮಾ ಮಾಡ್ತಾರಲ್ಲ, ಅದನ್ನು ಯಾವುದೋ ಕಾಲದಲ್ಲಿ ಉಪೇಂದ್ರ ಮಾಡಿದ್ದರು. ಅಂತಹ ಅದ್ಭುತ ತಂತ್ರಜ್ಞ, ನಟ ಅವ್ರು" ಎಂದು ರಜನಿಕಾಂತ್ ಮೆಚ್ಚುಗೆ ಸೂಚಿಸಿದ್ದಾರೆ. ತಲೈವಾ ಮಾತುಗಳಿಗೆ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ.

ಇದೇ ಮೊದಲಲ್ಲ, ಈ ಹಿಂದೆ ಕೂಡ ಉಪ್ಪಿ ಸಿನಿಮಾಗಳನ್ನು ಉಪೇಂದ್ರ ಹಾಡಿ ಹೊಗಳಿದ್ದರು. ರಿಯಲ್ ಸಿನಿಮಾಗಳನ್ನು ಮಾರುವೇಷದಲ್ಲಿ ತಲೈವಾ ನೋಡಿ ಎಂಜಾಯ್ ಮಾಡಿರುವುದು ಇದೆ. ಅಂದಹಾಗೆ ರಜನಿಕಾಂತ್ ಅವರ ವೀರಾಭಿಮಾನಿ ಉಪೇಂದ್ರ. 'ಕೂಲಿ' ಸಿನಿಮಾ ಸೆಟ್ನಲ್ಲಿ ಒಬ್ಬರನ್ನೊಬ್ಬರು ಭೇಟಿ ಮಾಡಿದ ಉಪೇಂದ್ರ ಭಾವುಕರಾಗಿಬಿಟ್ಟಿದ್ರು, ಅರ್ಧ ಗಂಟೆ ಮಾತನಾಡಲಿಲ್ಲ ಎಂದು ಲೋಕೇಶ್ ಕನಕರಾಜ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಉಪ್ಪಿ ನಿರ್ದೇಶಿಸಿ ನಟಿಸಿದ್ದ 'ಸೂಪರ್' ಸಿನಿಮಾ ನೋಡಿ ರಜನಿಕಾಂತ್ ಮೆಚ್ಚಿದ್ದರು. ನನಗೆ ಉಪೇಂದ್ರ ನಟನೆಗಿಂತ ನಿರ್ದೇಶಕರಾಗಿ ಬಹಳ ಇಷ್ಟ. ಉಪೇಂದ್ರ ನಿರ್ದೇಶನದಲ್ಲಿ ನಟಿಸೋಕೆ ನಾನು ಸಿದ್ಧ. ಒಳ್ಳೆ ಕಥೆ ಸಿಗಬೇಕು ಅಷ್ಟೇ ಎಂದಿದ್ದರು.
'ಕೂಲಿ' ಚಿತ್ರದಲ್ಲಿ ಉಪೇಂದ್ರ ಬಸ್ ಡ್ರೈವರ್ ಆಗಿ ರಜನಿಕಾಂತ್ ಬಸ್ ಕಂಡೆಕ್ಟರ್ ಆಗಿ ನಟಿಸಿದ್ದಾರೆ ಎನ್ನುವ ಊಹಾಪೋಹ ಇದೆ. ಒಂದ್ಕಾಲದಲ್ಲಿ ರಜನಿಕಾಂತ್ ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದರು ಎನ್ನುವುದು ಗೊತ್ತೇಯಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.


Click it and Unblock the Notifications











